ಸಾರಾಂಶ
ಮೂಡ್ಲಕಟ್ಟೆ ಪದವಿ ಕಾಲೇಜಿನಲ್ಲಿ ಮಹಿಳಾ ವೇದಿಕೆಯಡಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ರೇಖಾ ವಿ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಮೂಡ್ಲಕಟ್ಟೆ ಪದವಿ ಕಾಲೇಜಿನಲ್ಲಿ ಮಹಿಳಾ ವೇದಿಕೆಯಡಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ರೇಖಾ ವಿ. ಬನ್ನಾಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಮಹಿಳೆಯು ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಗುರುತಿಸಿ ಕೊಳ್ಳುತ್ತಿದ್ದಾಳೆ. ಅವಳಿಲ್ಲದ ಜಾಗ ಇಲ್ಲ, ಸಲ್ಲದ ಸ್ಥಳವಿಲ್ಲ. ಇದು ಧನಾತ್ಮಕ ಬೆಳವಣಿಗೆಯಾದರೂ, ಇಂದು ಮಹಿಳೆ ಎದುರಿಸುತ್ತಿರುವ ವಿವಿಧ ಸಮಸ್ಯೆ ಮತ್ತು ಸವಾಲುಗಳನ್ನು ಉದಾಹರಣೆಗಳ ಮೂಲಕ ತಿಳಿಸಿದರು. ಹೆಣ್ಣು ದೇವತೆಯೂ, ಅಲ್ಲ ರಾಕ್ಷಸಿಯೂ ಅಲ್ಲ. ಅವಳ ನೆಲೆಯಲ್ಲಿ ಗಣ್ಯತೆಯಿಂದ ಬದುಕನ್ನು ಬದುಕುವ ಅವಕಾಶ ನೀಡಬೇಕು ಎಂದರು.
ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಉಪಪ್ರಾಂಶುಪಾಲ ಜಯಶೀಲ್ ಕುಮಾರ್, ಸ್ತ್ರೀಯರನ್ನು ಗೌರವಿಸಬೇಕು. ಸ್ತ್ರೀ, ಪುರುಷ ತಾರತಮ್ಯವಿಲ್ಲದೆ ತಮ್ಮ ಪ್ರತಿಭೆಗಳು ಅನಾವರಣಗೊಳ್ಳಲು ಅವಕಾಶಗಳು ದೊರಕಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದರು.ಕಾರ್ಯಕ್ರಮದಲ್ಲಿ ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥೆ ಸ್ವರ್ಣರಾಣಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅರ್ಚನಾ ಗದ್ದೆ, ಮಹಿಳಾ ವೇದಿಕೆ ಸಂಯೋಜಕಿ ವಾಣಿಜ್ಯಶಾಸ್ತ್ರದ ಉಪನ್ಯಾಸಕಿ ಶಿಲ್ಪಶ್ರೀ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನ ಸನ್ಮಾನಿಸಲಾಯಿತು. ಮಹಿಳಾ ವೇದಿಕೆ ಅಡಿಯಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ವಫಾ ಸ್ವಾಗತಿಸಿದರು. ಪ್ರಥಮ ಬಿಸಿಎ ವಿದ್ಯಾರ್ಥಿನಿ ಶ್ರೀರಕ್ಷಾ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ತೃತೀಯ ಬಿ.ಕಾಂನ ಶ್ರೇಯಾ ವಂದಿಸಿದರು. ತೃತೀಯ ಬಿಸಿಎನ ತರನಾ ಕಾರ್ಯಕ್ರಮ ನಿರೂಪಿಸಿದರು.