ಸಾರಾಂಶ
ಮೊಳಹಳ್ಳಿ ಗ್ರಾಮದ ಕಂಬಳಗದ್ದೆ ಮನೆಯ ಪ್ರದೀಪ್ ಶೆಟ್ಟಿ, ರುಕ್ಮಿಣಿ ಶೆಟ್ಟಿ, ರತ್ನಾವತಿ ಶೆಟ್ಟಿ ಅವರ ಮನೆ ಸಂಪೂರ್ಣವಾಗಿ ಕುಸಿದು ನೆಲಸಮಗೊಂಡಿದೆ
ಕನ್ನಡಪ್ರಭ ವಾರ್ತೆ ಕುಂದಾಪುರ
ಬುಧವಾರ ತಡ ರಾತ್ರಿಗೆ ಸುರಿದ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಮೂರು ಮನೆಗಳು ಸಂಪೂರ್ಣ ಧರಶಾಹಿಯಾದ ಘಟನೆ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬಳಗದ್ದೆಮನೆ ವಠಾರದಲ್ಲಿ ನಡೆದಿದೆ.ಮೊಳಹಳ್ಳಿ ಗ್ರಾಮದ ಕಂಬಳಗದ್ದೆ ಮನೆಯ ಪ್ರದೀಪ್ ಶೆಟ್ಟಿ, ರುಕ್ಮಿಣಿ ಶೆಟ್ಟಿ, ರತ್ನಾವತಿ ಶೆಟ್ಟಿ ಅವರ ಮನೆ ಸಂಪೂರ್ಣವಾಗಿ ಕುಸಿದು ನೆಲಸಮಗೊಂಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಹೊಳೆಯನ್ನು ಸಮರ್ಪಕವಾಗಿ ಹೂಳೆತ್ತದೆ ಗಿಡಗಂಟಿಗಳು ಬೆಳೆದಿರುವುದರಿಂದ ನೀರು ಒತ್ತಡದಿಂದಾಗಿ ಸಮೀಪದ ಮನೆಗಳಿಗೆ ನುಗ್ಗಿ ಜಲಾವೃತಗೊಂಡಿದೆ. ನದಿ ನೀರು ಏಕಾಏಕಿ ಮನೆಗೆ ನುಗ್ಗಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಜಾನುವಾರುಗಳನ್ನು ಸುರಕ್ಷಿತವಾಗಿ ಸಂಬಂಧಿಕರ ಮನೆಗೆ ಬಿಡಲಾಗಿದೆ.ನೆರೆ ನೀರು ನುಗ್ಗಿದ ಹಿನ್ನೆಲೆ ಮನೆಯಲ್ಲಿ ಮಲಗಿರುವ ಜನರು ಸಮೀಪದ ಸಂಬಂಧಿಕರ ಮನೆಗೆ ತೆರಳಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸಬಹುದಾದ ಬಹುದೊಡ್ಡ ದುರಂತವೊಂದು ತಪ್ಪಿ ಹೋಗಿದೆ. ಪ್ರತಿ ಬಾರಿಯೂ ಮಳೆಗಾಲದಲ್ಲಿ ನೀರು ಮೇಲ್ಭಾಗಕ್ಕೆ ಬರುತ್ತಿದ್ದು, ಕಳೆದ ಬಾರಿ ಮಳೆಗಾಲದ ಸಂದರ್ಭದಲ್ಲಿ ಮನೆಯ ವರಾಂಡಕ್ಕೆ ನೀರು ನುಗ್ಗಿತ್ತು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ತಹಸೀಲ್ದಾರರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಆಗಮಿಸಿ ಸೂಕ್ತ ಪರಿಹಾರದ ಭರವಸೆಯನ್ನ ನೀಡಿದ್ದಾರೆ.