ಕುವೆಂಪು ಹೆಸರೇ ಒಂದು ರೋಮಾಂಚನ, ಅವರೊಬ್ಬ ರಸಋಷಿ, ವೈಜ್ಞಾನಿಕ ಚಿಂತನೆಯನ್ನು ಒಳಗೊಂಡ ದಾರ್ಶನಿಕ ಕವಿ, ಎಲ್ಲಾ ಕಾಲಕ್ಕೂ ಸಲ್ಲುವ ಸಾಹಿತ್ಯ ಅವರದ್ದಾಗಿದೆ. ಯುವಜನರನ್ನು ಹೆಚ್ಚಾಗಿ ಆಕರ್ಷಿಸುವ ಶಕ್ತಿ ಕುವೆಂಪು ಸಾಹಿತ್ಯಕ್ಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕುವೆಂಪು ಸಾಹಿತ್ಯದಲ್ಲಿ ಎಲ್ಲಾ ಕಾಲಕ್ಕೂ ಯುವಜನರನ್ನು ಸೆಳೆಯುವ ಮಹಾನ್ ಶಕ್ತಿ ಇದೆ ಎಂದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅಭಿಪ್ರಾಯಪಟ್ಟರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನೆಲದನಿ ಬಳಗ ಕುವೆಂಪು ಅವರ ೧೨೧ನೇ ವರ್ಷದ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ‘ನನ್ನ ತೇಜಸ್ವಿ’ ನಾಟಕ ಪ್ರದರ್ಶನ ಮತ್ತು ಅಭಿನಂಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕುವೆಂಪು ಹೆಸರೇ ಒಂದು ರೋಮಾಂಚನ, ಅವರೊಬ್ಬ ರಸಋಷಿ, ವೈಜ್ಞಾನಿಕ ಚಿಂತನೆಯನ್ನು ಒಳಗೊಂಡ ದಾರ್ಶನಿಕ ಕವಿ, ಎಲ್ಲಾ ಕಾಲಕ್ಕೂ ಸಲ್ಲುವ ಸಾಹಿತ್ಯ ಅವರದ್ದಾಗಿದೆ. ಯುವಜನರನ್ನು ಹೆಚ್ಚಾಗಿ ಆಕರ್ಷಿಸುವ ಶಕ್ತಿ ಕುವೆಂಪು ಸಾಹಿತ್ಯಕ್ಕಿದೆ ಎಂದರು.

ಸಿನಿಮಾಗಳಲ್ಲಿ ಹೀರೋಗಳನ್ನು ಮಾಸ್ ರೀತಿಯಲ್ಲಿ ತೋರಿಸಲು ಸಾಹಿತ್ಯ, ಸಂಗೀತ ರಚಿಸಲಾಗುತ್ತದೆ, ಕನ್ನಡ ಸಾಹಿತ್ಯ ಲೋಕದ ಮಾಸ್ ಕವಿ ಎಂದರೆ ಕುವೆಂಪು. ಅವರ ಬರವಣಿಗೆ, ಸಾಹಿತ್ಯಕ್ಕೆ ಜನರನ್ನು ಹಿಡಿದಿಡುವ ಅದ್ಭುತವಾದ ಶಕ್ತಿ ಇದೆ ಎಂದರು.

ಬಾರಿಸು ಬಾರಿಸು ಕನ್ನಡ ಡಿಂಡಿಮವ...ಗೀತೆ ಯುವ ಮನಸ್ಸುಗಳನ್ನು ರೋಮಾಂಚನಗೊಳಿಸಿತ್ತದೆ, ಎಷ್ಟೋ ಸಾಹಿತಿಗಳು ಇಂತಹ ಮಾಸ್ ರೀತಿಯ ಹಾಡುಗಳನ್ನು ಕಟ್ಟಿಕೊಡಲಿಲ್ಲ. ಕುವೆಂಪು ಸಾಹಿತ್ಯದಲ್ಲಿ ಯೂತ್ ಐಕಾನ್‌ನಂತಹ ಸಾಲುಗಳಿವೆ, ನಾವು ಅವರನ್ನು ಯೂತ್ ಯೂತ್ ಐಕಾನ್ ರೀತಿ ಹೊಸ ಪೀಳಿಗೆಯವರಿಗೆ ಪರಿಚಯಿಸಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶಗೌಡ, ಪ್ರಸೂತಿ ತಜ್ಞೆ ಡಾ.ಬಿ.ಎಸ್.ಪ್ರಭಾವತಿ, ಲೇಖಕಿ ಡಾ.ಸುಕನ್ಯಾ ಸೂನಗಹಳ್ಳಿ ಅವರನ್ನು ಅಭಿನಂದಿಸಲಾಯಿತು. ಕಲಾಮಾಧ್ಯಮ ಅಭಿನಯಿಸಿದ ನನ್ನ ತೇಜಸ್ವಿ ನಾಟಕನ್ನು ಬಿ.ಎಂ.ಗಿರಿರಾಜ ಅವರ ರಂಗರೂಪ-ನಿರ್ದೇಶನದಲ್ಲಿ ಕಲಾವಿದರು ಅಭಿನಯಿಸಿ ಸಭಿಕರ ಮನಸೊರೆಗೊಂಡರು.

ಕಾರ್ಯಕ್ರಮದಲ್ಲಿ ರೈತನಾಯಕಿ ಸುನಂದ ಜಯರಾಂ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ಮಹಿಳಾ ಮುನ್ನಡೆ ಜಿಲ್ಲಾ ಕಾರ್ಯದರ್ಶಿ ಶಿಲ್ಪಾ, ಡಾ.ರವಿಕುಮಾರ್, ನೆಲದನಿ ಬಳಗದ ಪೋಷಕಿ ರುಕ್ಮಿಣಿ ಶಂಕರೇಗೌಡ, ಅಧ್ಯಕ್ಷ ಲಂಕೇಶ್ ಮಂಗಲ, ಪದಾಧಿಕಾರಿಗಳಾದ ಎಂ.ಸಿ ಕುಮಾರ್ಗೌಡ, ಪ್ರತಾಪ್ ಮಾರಸಿಂಗನಹಳ್ಳಿ, ಶಿವಮಲ್ಲು, ಕೋಮಲ್‌ಕುಮಾರ್, ಸುಬ್ರಹ್ಮಣ್ಯ, ನಾಗೇಶ್ ಹನಿಯಂಬಾಡಿ, ಮಂಜು ಮಳವಳ್ಳಿ, ರಕ್ಷಿತ್ ರಾಜ್, ಟಿ.ಎನ್.ಲೋಕೇಶ್, ಸಿ.ನೀಲಶಿವಮೂರ್ತಿ, ಮಹಾಲಕ್ಷ್ಮೀ, ಸುನೀತಾ ಮತ್ತಿತರರಿದ್ದರು.

೩೧ಕೆಎಂಎನ್‌ಡಿ-೭

ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನೆಲದನಿ ಬಳಗದ ವತಿಯಿಂದ ನನ್ನ ತೇಜಸ್ವಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶಗೌಡ, ಪ್ರಸೂತಿ ತಜ್ಞೆ ಡಾ.ಬಿ.ಎಸ್.ಪ್ರಭಾವತಿ, ಲೇಖಕಿ ಡಾ.ಸುಕನ್ಯಾ ಸೂನಗಹಳ್ಳಿ ಅವರನ್ನು ಅಭಿನಂದಿಸಲಾಯಿತು.ಮೈನವಿರೇಳಿಸಿ, ಕಣ್ಣೀರಿಡುವಂತೆ ಮಾಡಿದ ನನ್ನ ತೇಜಸ್ವಿ

ನನ್ನ ತೇಜಸ್ವಿ ನಾಟಕ ಮೈನವಿರೇಳಿಸುವುದಲ್ಲದೆ, ಕೊನೆಯ ಅಂಕದಲ್ಲಿ ಕಣ್ಣೀರಿಡುವ ರೀತಿಯಲ್ಲಿ ಕಲಾಮಾಧ್ಯಮ ತಂಡದವರು ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಗೆದ್ದರು

ತೇಜಸ್ವಿ ಪತ್ನಿ ರಾಜೇಶ್ವರಿ ಪಾತ್ರ ಮಾಡಿದ ಸವಿತಾ ಪರಮ್ ಎಂಬ ಕಲಾವಿದೆ ಅಕ್ಷರಶಃ ಆ ಪಾತ್ರದಲ್ಲಿ ಜೀವಿಸಿದರು. ಹಾಗೇ ತೇಜಸ್ವಿ ಪಾತ್ರ ಮಾಡಿದ ಪರಮ್ ಸಹ ಉತ್ತಮವಾಗಿ ಅಭಿನಯಿಸಿದರು. ಇತರೆ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದರು. ತೇಜಸ್ವಿ ಜೊತೆಗೆ ಬದುಕಿನ ಜೀವನಾನುಭವ ಬರೆದಿದ್ದ ಪುಸ್ತಕಕ್ಕೆ ನನ್ನ ತೇಜಸ್ವಿ ಅಂತ ಹೆಸರಿಟ್ಟಿದ್ದ ರಾಜೇಶ್ವರಿರವರು ಈ ನಾಟಕದ ಮೂಲಕ ನಮಗೆ ಧನಾತ್ಮಕವಾಗಿ ಎತ್ತರಕ್ಕೆ ಹೋದರು.

ಆ ಪುಸ್ತಕವನ್ನು ರಂಗಪ್ರಯೋಗಕ್ಕೆ ತಂದ ನಾಟಕದ ನಿರ್ದೇಶಕ ಬಿ.ಎಂ.ಗಿರಿರಾಜ್ ಅಭಿನಂದನೆ ಅರ್ಹರು. ಕಾರಣ ಅಷ್ಟು ಪುಟಗಳನ್ನು ಒಂದೂವರೆ ತಾಸು ನಾಟಕದಲ್ಲಿ ಅಳವಡಿಸಿದ್ದಾರೆ. ಎಲ್ಲಿಯೂ ಬೋರ್ ಹೊಡೆಯದ ರೀತಿಯಲ್ಲಿ ಕಥಾಹಂದರ ಹೆಣೆದಿದ್ದಾರೆ. ಉತ್ತಮ ಕಲಾವಿದರನ್ನು ಆಯ್ಕೆ ಮಾಡಿಕೊಂಡು ದೇಶ-ವಿದೇಶಗಳಲ್ಲಿ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶನ ಮಾಡುತ್ತಾ ಬರುತ್ತಿದ್ದಾರೆ. ಸ್ವತಃ ನಿರ್ದೇಶಕ ಗಿರಿರಾಜ್ ಅವರೇ ತೇಜಸ್ವಿಯವರ ಮಿತ್ರ ಕಡಿದಾಳ್ ಶ್ಯಾಮಣ್ಣ ಅವರ ಪಾತ್ರವನ್ನ ತಮಗಿರುವ ಇರುವ ಮಿತಿಯಲ್ಲಿ ಚೆನ್ನಾಗಿ ಅಭಿನಯಿಸಿದರು.

ಕಳೆದ ಹಲವಾರು ದಿನಗಳಿಂದ ನೆಲದನಿ ತಂಡವು ಕಾರ್ಯಕ್ರಮದ ಯಶಸ್ವಿಗೆ ದುಡಿದಿತ್ತು, ಅದಕ್ಕೆ ಸಾಕ್ಷಿಯೆಂಬಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ಕಿಕ್ಕಿರಿದು ತುಂಬಿತ್ತು. ನಾಟಕ ಮುಗಿಯುವವರೆಗೂ ಎಲ್ಲರನ್ನೂ ಹಿಡಿದು ಕೂರಿಸಿದ್ದು ವಿಶೇಷವಾಗಿತ್ತು.