ರಸಾಯನಿಕ ಬೆರೆಸಿದ ಗಣೇಶಮೂರ್ತಿಗಳನ್ನು ಕೆರೆ, ನದಿ, ಸಮುದ್ರಕ್ಕೆ ವಿಸರ್ಜಿಸಿ ಸಂಭ್ರಮಿಸುವುದು ಗಣೇಶನಿಗೆ ಇಷ್ಟ ಆಗುವುದಿಲ್ಲ. ಮಣ್ಣಿನ ಮೂರ್ತಿಯನ್ನು ಮನೆಯಲ್ಲಿ ಕೂರಿಸಿ ಸಂಭ್ರಮಿಸುವುದೇ ಗಣೇಶನಿಗೆ ಇಷ್ಟ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಮಕ್ಕಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸಾಯನಿಕ ಬೆರೆಸಿದ ಗಣೇಶಮೂರ್ತಿಗಳನ್ನು ಕೆರೆ, ನದಿ, ಸಮುದ್ರಕ್ಕೆ ವಿಸರ್ಜಿಸಿ ಸಂಭ್ರಮಿಸುವುದು ಗಣೇಶನಿಗೆ ಇಷ್ಟ ಆಗುವುದಿಲ್ಲ. ಮಣ್ಣಿನ ಮೂರ್ತಿಯನ್ನು ಮನೆಯಲ್ಲಿ ಕೂರಿಸಿ ಸಂಭ್ರಮಿಸುವುದೇ ಗಣೇಶನಿಗೆ ಇಷ್ಟ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಮಕ್ಕಳಿಗೆ ಕಿವಿಮಾತು ಹೇಳಿದರು.

ಸೋಮವಾರ ಅವರು, ಕಬ್ಬನ್‌ಪಾರ್ಕ್‌ನಲ್ಲಿರುವ ಜವಾಹರಲಾಲ್‌ ನೆಹರು ಬಾಲ ಭವನ ಹಮ್ಮಿಕೊಂಡಿದ್ದ, ‘ಮಕ್ಕಳಿಗೆ ಜೇಡಿ ಮಣ್ಣಿನ ಗಣಪ ಮಾಡುವ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.

ಹೊಟ್ಟೆಗೆ ಹಾವನ್ನು ಸುತ್ತಿಕೊಂಡು, ಇಲಿಯನ್ನು ವಾಹನ ಮಾಡಿಕೊಂಡಿರುವ ಶ್ರಮ ಮತ್ತು ಬೆವರಿನ ಸಂಸ್ಕೃತಿ ಎತ್ತಿ ಹಿಡಿಯುವ ಗಣಪ ನಿಜವಾದ ಪರಿಸರ ಪ್ರೇಮಿ. ಆದ್ದರಿಂದ ಪ್ರತೀ ಮನೆಯಲ್ಲೂ ಪರಿಸರ ಸ್ನೇಹಿ ಗಣೇಶನನ್ನೇ ಕೂರಿಸಬೇಕು. ಮಣ್ಣಿನ‌ ಗಣಪ ಮಾಡುವ ಕಾರ್ಯಾಗಾರ ಅತ್ಯಂತ ಸೃಜನಶೀಲವಾದದು.‌ ಮಕ್ಕಳ ಸುಪ್ತ ಪ್ರತಿಭೆಗಳನ್ನು ವ್ಯಕ್ತಪಡಿಸಲು ಇಂತಹ ವೇದಿಕೆ ಕಲ್ಪಿಸಿಕೊಟ್ಟ ಬಾಲ ಭವನದ ಅಧ್ಯಕ್ಷ ಬಿ.ಆರ್.ನಾಯ್ಡು ಅವರ ಕಾಳಜಿ ಮತ್ತು‌ ಶ್ರಮ ಅಭಿನಂದನೀಯ ಎಂದರು.

ಇದೇ ವೇಳೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಇದಕ್ಕೆ ಪ್ರತಿಯಾಗಿ ಮಕ್ಕಳು ತಾವು ಮಾಡಿದ್ದ ಗಣಪನನ್ನು ಪ್ರಭಾಕರ್ ಅವರಿಗೆ ಕಾಣಿಕೆಯಾಗಿ ನೀಡಿದರು. ಚಲನಚಿತ್ರ ನಟಿ ಪ್ರೇಮಾ, ಬಾಲ ಭವನದ ಅಧ್ಯಕ್ಷ ಬಿ.ಆರ್.ನಾಯ್ಡು ಉಪಸ್ಥಿತರಿದ್ದರು.ಕಬ್ಬನ್‌ಪಾರ್ಕ್‌ನಲ್ಲಿರುವ ಜವಾಹರಲಾಲ್‌ ನೆಹರು ಬಾಲಭವನ ಹಮ್ಮಿಕೊಂಡಿದ್ದ, ‘ಮಕ್ಕಳಿಗೆ ಜೇಡಿ ಮಣ್ಣಿನ ಗಣಪ ಮಾಡುವ ಕಾರ್ಯಾಗಾರ’ವನ್ನು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಉದ್ಘಾಟಿಸಿದರು.