ಸಾರಾಂಶ
ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ ಯೋಜನೆಯಡಿ ₹15 ಲಕ್ಷ, ವಿಧಾನ ಪರಿಷತ್ ಸದಸ್ಯರಾದ ಎಂ ಎಲ್ ಅನಿಲ್ ಕುಮಾರ್ ವಿಶೇಷ ಅನುದಾನದಲ್ಲಿ 5 ಲಕ್ಷ ರು. ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹40 ಲಕ್ಷ ಮೂಂಜೂರು ಮಾಡಲಾಗಿತ್ತು. ಕಟ್ಟಡ ಪೂರ್ಣಗೊಳಿಸಲು ಹಣದ ಕೊರತೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಅನುದಾನ ಕೊರತೆಯಿಂದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದ್ದು ಕಟ್ಟಡ ರಾತ್ರಿ ವೇಳೆ ಅನೈತಿಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ತಾಲೂಕಿನ ಹುಲಿಬೆಲೆ ಗ್ರಾಮ ಪಂಚಾಯಿತಿಯ ಹಾಲಿ ಕಟ್ಟಡವು ಶಿಥಿಲಗೊಂಡದ್ದು ಹಾಗೂ ಕಿರಿದಾಗಿದ್ದು, ಈ ಕಿರಿದಾದ ಕಟ್ಟಡದಲ್ಲಿ ಸಾಮಾನ್ಯ ಸಭೆ ಮಾಡಲು ಅಡ್ಡಿಯಾಗಿತ್ತು, ದಿನ ನಿತ್ಯದ ಕೆಲಸ ಕಾರ್ಯಗಳಿಗೂ ತೊಂದರೆ ಉಂಟಾಗಿತ್ತು. ಹೀಗಾಗಿ ಗ್ರಾಮ ಪಂಚಾಯಿತಿ ಕೆಲಸ ಕಾರ್ಯಗಳನ್ನು ಸುಗಮವಾಗಿ ಮಾಡಲು ನೂತನ ಕಟ್ಟಡದ ಅವಶ್ಯಕತೆ ಇರುವ ಕಾರಣ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.ಕಟ್ಟಡ ಕಟ್ಟಲು ಹಣದ ಕೊರತೆ
ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ ಯೋಜನೆಯಡಿ ₹15 ಲಕ್ಷ, ವಿಧಾನ ಪರಿಷತ್ ಸದಸ್ಯರಾದ ಎಂ ಎಲ್ ಅನಿಲ್ ಕುಮಾರ್ ವಿಶೇಷ ಅನುದಾನದಲ್ಲಿ 5 ಲಕ್ಷ ರು. ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹40 ಲಕ್ಷ ಮೂಂಜೂರು ಮಾಡಲಾಗಿತ್ತು. ಕಾಮಗಾರಿ ಪ್ರಾರಂಭ ಮಾಡಿ ಹಲವು ವರ್ಷಗಳು ಕಳೆದರೂ ಅನುದಾನ ಕೊರತೆಯಿಂದ ಕಾಮಗಾರಿ ಅರ್ಧಕ್ಕೇ ನಿಂತಿದೆ.ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನು ನಿರ್ಮಾಣ ಮಾಡಲು ಕೆ ಆರ್ ಡಿ ಎಲ್ ಸಂಸ್ಥೆಯ ಗುತ್ತಿಗೆಯನ್ನು ಪಡೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸಿತು. ಆದರೆ ಪೂರ್ಣಗೊಳಿಸಿದೆ ಅರ್ಧಕ್ಕೆ ನಿಲ್ಲಿಸಿದೆ. 20 ಲಕ್ಷ ರುಪಾಯಿಗಳಲ್ಲಿ ನೆಲ ಮಹಡಿ ನಿರ್ಮಿಸಿದ್ದು, ಮೊದಲ ಮಹಡಿಗೆ ಅರ್ಧ ಗೋಡೆಗಳನ್ನು ನಿರ್ಮಾಣ ಮಾಡಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕಟ್ಟಡದ ನಿರ್ಮಾಣಕ್ಕೆ ಉಪಯೋಗಿಸಿರುವ ಕಬ್ಬಿಣದ ಕಂಬಿಗಳು ಮತ್ತು ಕಿಟಕಿಗಳು ತುಕ್ಕು ಹಿಡಿಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಗಲು ವೇಳೆ ಕುರಿ ದೊಡ್ಡಿ
ಅರ್ಧಕ್ಕೆ ನಿಲ್ಲಿಸಿರುವ ಕಟ್ಟಡದಲ್ಲಿ ರಾತ್ರಿ ಸಮಯದಲ್ಲಿ ಕುಡುಕರ ಅಡ್ಡವಾಗಿ ಮಾರ್ಪಟ್ಟಿದೆ. ಇದಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿಯೂ ಬದಲಾಗುತ್ತಿದೆ, ಹಗಲಿನಲ್ಲಿ ಕುರಿಗಳ ದೊಡ್ಡಿಯನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದರೂ ಸಹ ಪಂಚಾಯ್ತಿ ಆಡಳಿತ ಮಂಡಳಿ ಮಾತ್ರ ಈ ಬಗ್ಗೆ ಯಾಕೋ ಗಮನಹರಿಸದೆ ಇರುವುದು ದುರಂತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಪಂಚಾಯಿತಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅನುಕೂಲ ಮಾಡಿಕೊಡಬೇಕಿದೆ.ಕೋಟ್.......................
ಹುಲಿಬೆಲೆ ಪಂಚಾಯಿತಿ ಹೊಸ ಕಟ್ಟಡ ಕಾಮಗಾರಿ ವಿಂಬಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ₹40 ಲಕ್ಷ ಬಿಡುಗಡೆ ವಿಳಂಬದಿಂದ ಕಾಮಗಾರಿ ತಡವಾಗಿದೆ. ಈಗ ಅನುದಾನ ಬಿಡುಗಡೆಯಾಗಿದ್ದು ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಹೊಣೆ ನೀಡಿದ್ದು ಅವರು ಈಗ ಕಾಮಗಾರಿ ಆರಂಭಿಸಲಿದ್ದಾರೆ.ಚಿತ್ರಾ, ಪಿಡಿಒ, ಹುಲಿಬೆಲೆ ಗ್ರಾಪಂ