ಶಿಥಲಾವಸ್ಥೆಯ ತಹಸೀಲ್ದಾರ್ ವಸತಿ ಗೃಹಗಳಲ್ಲಿ ಅಧಿಕಾರಿಗಳ ಕಾರ್ಯನಿರ್ವಹಣೆ. ಜೀವ ಭಯದ ನಡುವೆ ಜನರ ಸೇವೆ
ಬಿಜಿಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರುಕಂದಾಯ ಇಲಾಖೆಯಲ್ಲಿ ಸಾರ್ವಜನಿಕರೊಂದಿಗೆ ಪ್ರಮುಖ ಕೊಂಡಿಯಾಗಿ ಸೇವೆ ಸಲ್ಲಿಸುವ ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಕ್ತವಾದ ಕಚೇರಿ ಇಲ್ಲದೆ ಶಿಥಿಲಾವಸ್ಥೆಯಲ್ಲಿರುವ ತಹಸೀಲ್ದಾರ್ ವಸತಿ ಗೃಹದಲ್ಲಿ ಜೀವ ಭಯದ ನಡುವೆ ಜನಸಾಮಾನ್ಯರ ಕೆಲಸ ನಿರ್ವಹಿಸುತ್ತಿದ್ದು ತಾಲೂಕು ಆಡಳಿತದ ಕಾರ್ಯವೈಖರಿಯನ್ನು ಅಣಕಿಸುವಂತೆ ಮಾಡಿದೆ.
ಮೊಳಕಾಲ್ಮೂರು ಪಟ್ಟಣದ ಹೃದಯ ಭಾಗದಲ್ಲಿರುವ ತಹಸೀಲ್ದಾರರ ಹಳೆಯ ವಸತಿಗೃಹವನ್ನು ಗ್ರಾಮ ಆಡಳಿತಾಧಿಕಾರಿಗಳು ಕಚೇರಿಯನ್ನಾಗಿಸಿಕೊಂಡಿದ್ದಾರೆ.ಇಡೀ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು ಮೇಲ್ಛಾವಣಿ ಕುಸಿಯುತ್ತಿದೆ. ಮಳೆಗಾಲದಲ್ಲಿ ನೀರು ಸೋರುವ ಮೂಲಕ ಇಡೀ ಕಟ್ಟಡ ರೋಗ ಪೀಡಿತವಾಗಿ ಗ್ರಾಮ ಆಡಳಿತಾಧಿಕಾರಿಗಳು ಜೀವ ಭಯದಲ್ಲಿ ಕಾರ್ಯನಿರ್ವಹಿಸುವಂತಾಗಿದೆ.
ಕಟ್ಟಡದ ಮೇಲ್ಛಾವಣಿಯ ಕಾಂಕ್ರೀಟ್ ಪದರಗಳು ಕಿತ್ತು ಹೋಗಿ, ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಬಾಯ್ತೆರೆದು ನಿಂತಿವೆ. ಕಚೇರಿಯಲ್ಲಿ ಫ್ಯಾನ್ ಹಾಕಲು ಹೆದರುವ ಸ್ಥಿತಿ ಇದೆ. ಮತ್ತೊಂದೆಡೆ ಕಟ್ಟಡದ ಸುತ್ತಲೂ ಹಳೆಯ ತ್ಯಾಜ್ಯಗಳು ರಾಶಿ ಬಿದ್ದಿದ್ದು, ಗಿಡಗಂಟಿಗಳು ಬೆಳೆದು ನಿಂತಿವೆ. ಸಮರ್ಪಕ ನಿರ್ವಹಣೆ ಇಲ್ಲದೆ ವಿಷ ಜಂತುಗಳ ಹಾವಳಿ ಎದುರಾಗಿದೆ. ಇದು ಕೇವಲ ಕಟ್ಟಡದ ಶಿತಿಲಾವಸ್ಥೆಯಲ್ಲ, ಆಡಳಿತ ವ್ಯವಸ್ಥೆಯ ದುಸ್ಥಿತಿಗೆ ಹಿಡಿದ ಕೈಗನ್ನಡಿಯಂತಾಗಿದೆ.ಬಡ ರೈತರು, ವೃದ್ಧರು ತಮ್ಮ ತಿದ್ದುಪಡಿ, ಪಹಣಿ ಕೆಲಸಗಳಿಗಾಗಿ ಇಲ್ಲಿಗೆ ಬರುತ್ತಾರೆ. ಕೆಲಸದ ವೇಳೆಯಲ್ಲೇ ಮೇಲ್ಛಾವಣಿ ಕುಸಿದು ಬೀಳುವ ಆತಂಕ ಮನೆ ಮಾಡಿದೆ. ಸಾರ್ವಜನಿಕ ಸೇವೆಯ ಕೇಂದ್ರವಾಗಿರಬೇಕಾದ ಈ ಕಟ್ಟಡ ಸ್ಮಶಾನ ಸದೃಶವಾಗಿ ಮಾರ್ಪಟ್ಟಿದೆ. ಅಪಾಯಕಾರಿ ಪರಿಸ್ಥಿತಿಯಲ್ಲೂ ಗ್ರಾಮ ಆಡಳಿತಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವುದು ತಾಲೂಕು ಆಡಳಿತದ ಕಾರ್ಯವೈಖರಿಯನ್ನು ಅಣಕಿಸುವಂತೆ ಮಾಡಿದೆ.
ಕಟ್ಟಡಕ್ಕೆ ನಿರ್ವಹಣೆ ಎನ್ನುವ ಪದವೇ ಅಪರಿಚಿತವಾಗಿದೆ. ಕಚೇರಿಯ ಸುತ್ತಲೂ ಕಸ, ಒಡೆದ ಪೀಠೋಪಕರಣಗಳಿದ್ದು ಕಚೇರಿಯ ಒಳಗೆ ಕಾಲಿಟ್ಟರೆ ಸಾಕು ವರ್ಷಗಟ್ಟಲೆ ಜಮೆಯಾದ ದೂಳು ಸಾರ್ವಜನಿಕರು ಸ್ವಾಗತಿಸುತ್ತಿದ್ದು ಕಟ್ಟಡದ ಹಿಂಭಾಗ ಕೊಳೆತ ಕಸದ ರಾಶಿ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಕಿಟಕಿಗಳು ಮುರಿದಿವೆ. ತ್ಯಾಜ್ಯ ಆವರಿಸಿರುವ ಶಿಥಿಲಾವಸ್ಥೆಯ ಕಟ್ಟಡದ ಮಧ್ಯೆ ಅಧಿಕಾರಿಗಳ ತಪಸ್ಸು ಮಾಡುವ ಸ್ಥಿತಿ ನಿರ್ಮಾಣವಾಗಿದೆ.ಕಂದಾಯ ಇಲಾಖೆಯ ಮುಖ್ಯ ಕೊಂಡಿಯಂತಿರುವ ಗ್ರಾಮ ಆಡಳಿತಾಧಿಕಾರಿಗಳು ಕೆಲಸದಲ್ಲಿ ಮಗ್ನರಾಗಿರುವಾಗ ಅಥವಾ ಸಾರ್ವಜನಿಕರು ಬರುವಾಗ ಯಾವಾಗ ತಲೆಯ ಮೇಲೆ ಸಿಮೆಂಟ್ ಹಂಚುಗಳು ಬೀಳುತ್ತವೆಯೋ ಎಂಬ ಭಯ ಕಾಡುತ್ತಿದೆ. ಹಳೆ ವಸತಿ ಗೃಹವನ್ನು ನವೀಕರಿಸುವ ಅಥವಾ ಗ್ರಾಮ ಆಡಳಿತಾಧಿಕಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಎನ್ನುವ ಆರೋಪ ವ್ಯಾಪಕವಾಗಿವೆ.
ನಿರ್ವಹಣೆ ಇಲ್ಲದೆ ದೂಳು ಹಿಡಿದ ಕಟ್ಟಡದೊಳಗೆ ಬರುವ ಸಾರ್ವಜನಿಕರು ತಲೆ ಮೇಲಿನ ಮೇಲ್ಚಾವಣಿ ಕಂಡು ಭಯ ಪಡುವಂತಾಗಿದ್ದು ಸ್ಮಾರ್ಟ್ ಕರ್ನಾಟಕದ ಕನಸು ಕಾಣುವ ಸರ್ಕಾರಕ್ಕೆ ತನ್ನದೇ ಬೆನ್ನೆಲುಬಾದ ಅಧಿಕಾರಿಗಳಿಗೆ ಒಂದು ಸುರಕ್ಷಿತ ಸೂರು ಒದಗಿಸುತ್ತಿಲ್ಲ ಎನ್ನುವ ಆರೋಪಗಳು ವ್ಯಾಪಕವಾಗಿದೆ.ಇನ್ನಾದರೂ ಅಧಿಕಾರಿಗಳು ಅನಾಹುತ ಸಂಭವಿಸುವ ಮುನ್ನ ಗ್ರಾಮ ಆಡಳಿತಾಧಿಕಾರಿಗಳಿಗೆ ಗುಣ ಮಟ್ಟದ ಕೊಠಡಿ ಒದಗಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.