ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಧರ್ಮ ಅಶಾಂತಿಗೆ ಕಾರಣವಲ್ಲ, ಧಾರ್ಮಿಕ ಜ್ಞಾನದ ಕೊರತೆಯೆ ಅಶಾಂತಿಗೆ ಕಾರಣವಾಗುತ್ತದೆ ಎಂದು ಜಮಾತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರೋ.ಮೋಹ್ಮದ ಸಲೀಂ ನುಡಿದರು.ಭಾನುವಾರ ಬೀದರ್ನಲ್ಲಿ ನಡೆದ ಸದ್ಭಾವನಾ ಸೌಹಾರ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮವೂ, ಶಾಂತಿ, ಸಹೋದರತೆ ಹಾಗೂ ಮಾನವತೆಯನ್ನು ಬೋಧಿಸುತ್ತಾ, ಮೇಲು-ಕೀಳು, ಬಡವ-ಬಲ್ಲಿದ, ಶ್ರೇಷ್ಠ ಕನಿಷ್ಠರ ಭೇದಭಾವ ಹೋಗಲಾಡಿಸಿ, ಮಾನವರೆಲ್ಲ ಒಂದೇ ತಂದೆ-ತಾಯಿಯ ಮಕ್ಕಳು ಎನ್ನುವ ಸಹೋದರತೆಯ ಭಾವನೆ ಬೆಳೆಸುತ್ತದೆ. ಪ್ರತಿಯೊಬ್ಬರು ತಮ್ಮ ಧರ್ಮದ ಪಾಲನೆ ಚಾಚೂ ತಪ್ಪದೇ ಮಾಡುತ್ತಾ, ಬೇರೆಯವರನ್ನು ಗೌರವದಿಂದ ಕಾಣಬೇಕು ಎಂದರು.
ಧರ್ಮ, ಸಂಸ್ಕೃತಿ, ಭಾಷೆ, ಆಚಾರ-ವಿಚಾರದಲ್ಲಿ ಭಿನ್ನತೆ ಇದ್ದರೂ ತಮ್ಮಲ್ಲಿ ಏಕತೆ ಇದೆ, ಇದು ನನ್ನ ಮೇಲೆ ಭಾವನಾತ್ಮಕವಾಗಿ ಗಾಢ ಪರಿಣಾಮ ಬೀರಿದ್ದು, ಇಂದಿನ ಸಮಾರಂಭ ತಮ್ಮ ಏಕತೆಯ ಪ್ರಾಯೋಗಿಕ ಉದಾಹರಣೆ ಎಂದು ಕನ್ನಡಿಗರನ್ನು ಕೊಂಡಾಡಿದರು.ಭಾರತ ಸಂವಿಧಾನದ ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭಾತೃತ್ವದ ತತ್ವಗಳು ಶ್ರೇಷ್ಠವಾಗಿದ್ದು, ಅವುಗಳ ಅನುಸರಣೆಯನ್ನು ಚಾಚೂ ತಪ್ಪದೇ ಅನುಸರಿಸಿದರೆ ಭಾರತ ಜಗತ್ತಿಗೆ ಮಾರ್ಗದರ್ಶಿಯಾಗಬಲ್ಲದು.
ಇಂದು ನಮ್ಮ ಮಧ್ಯ ಒಡಕು ಮೂಡಿಸುವಲ್ಲಿ ಕೆಲವು ಮಾಧ್ಯಮ ಮತ್ತು ರಾಜಕೀಯ ವ್ಯಕ್ತಿಗಳ ಪಾತ್ರವಿದೆ. ಇವು ನಮ್ಮ ಧರ್ಮ, ಆಚಾರ-ವಿಚಾರ, ಪರಂಪರೆಯ ಕುರಿತು ತಪ್ಪು ಮಾಹಿತಿ ನೀಡುತ್ತಿದ್ದು, ಪರಸ್ಪರ ಅಪನಂಬಿಕೆ ಹೆಚ್ಚುತ್ತಿದೆ. ಇದನ್ನು ತಡೆಯುವ ಕಲಸ ಮಾಡಬೇಕು ಎಂದು ಕರೆ ನೀಡಿದರು.ಚನ್ನಬಸವೇಶ್ವರ ಜ್ಞಾನಪೀಠ ಬಸವ ಗಂಗೋತ್ರಿ ಕುಂಬಳಗೋಳ ಬೆಂಗಳೂರಿನ ಪೀಠಾಧ್ಯಕ್ಷರಾದ ಜಗದ್ಗುರು ಚನ್ನಬಸವಾನಂದ ಸ್ವಾಮೀ ಮಾತನಾಡಿ, ದೇಶದ ಸ್ವಾತಂತ್ರಕ್ಕಾಗಿ ಎಲ್ಲಾ ಧರ್ಮದ ಜನ ಒಗ್ಗಟ್ಟಾಗಿ ಹೋರಾಡಿದ್ದಾರೆ. ಅದರಂತೆ ಈ ಭಾರತ ನಮ್ಮೆಲ್ಲರ ದೇಶ, ಯಾರೊಬ್ಬರ ದೇಶವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಭಾರತದ ಸಂವಿಧಾನ ‘ಭಾರತೀಯರಾದ ನಾವು’ ಎಂದು ಪ್ರಾರಂಭವಾಗುತ್ತದೆ. ನಾವೆಲ್ಲ ಒಂದು ಎಂದು ಸಾರುತ್ತದೆ ಎಂದು ಹೇಳಿ ದೇಶದ ಬಹುತ್ವದಲ್ಲಿ ಏಕತೆಯನ್ನು ತಿಳಿಸಿದರು.
ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮೋಹ್ಮದ ಸಾದ್, ಬಸವಕಲ್ಯಾಣದ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮಿ, ಬ್ರಹ್ಮಕುಮಾರಿಯ ಶಿಲ್ಪಾ ದೀದಿ ಹಾಗೂ ಮೌಲಾನಾ ಮೊನಿಸ ಕಿರ್ಮಾನಿ, ಜ್ಞಾನಿ ದರ್ಬಾರಾಸಿಂಗ್ ಹಾಗೂ ವಿಮಲಾ ಚಾಲಕ್ ತಮ್ಮ ಅಮೂಲ್ಯ ವಿಚಾರಗಳನ್ನು ವ್ಯಕ್ತಪಡಿಸಿದರು.ಬಸವ ಮಹಾಮನೆಯ ಜಗದ್ಗುರು ಸಿದ್ದರಾಮೇಶ್ವರ ಮಹಾಸ್ವಾಮಿಗಳು ಹಾಗೂ ಜಮಾತೆ ಇಸ್ಲಾಮಿ ಹಿಂದ್ನ ಬೀದರ್ ಸಂಚಾಲಕರಾದ ಇಕ್ಬಾಲ್ ಗಾಜಿ ಹಾಗೂ ನಗರದ ವಿವಿದ ಗಣ್ಯರು ಉಪಸ್ಥಿತರಿದ್ದರು.