ಸರ್ಕಾರದ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ವತಿಯಿಂದ ತಾಪಂ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಸರ್ಕಾರದ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ವತಿಯಿಂದ ತಾಪಂ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಸೋಮವಾರಪೇಟೆ: ಸರ್ಕಾರದ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ವತಿಯಿಂದ ತಾಪಂ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಕೊಡಗು ಜಿಪಂ ಸಿಇಒ ಆನಂದ್‌ಪ್ರಕಾಶ್ ಮೀನಾ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ನೋಂದಣಿ ಮಾಡಲು ಮುಂದಾಗಿದ್ದು, ರಾಜ್ಯದ ಉಳಿದೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದರೂ, ಕೊಡಗು ಜಿಲ್ಲೆಯಲ್ಲಿ ಸರಿಯಾದ ಸ್ಪಂದನೆ ಸಿಗದೆ, ನೋಂದಣಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಎಂದರು.

ಈ ಯೋಜನೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದು ಸಂಘವನ್ನು ಸ್ಥಳೀಯ ಗ್ರಾಪಂ ವ್ಯಾಪ್ತಿಯ ೧೬ರಿಂದ ೩೫ ವಯೋಮಾನದ ಯುವಜನರನ್ನು ನೋಂದಾಯಿಸಿಕೊಳ್ಳುತ್ತಿದೆ. ಈ ಸಂಘಕ್ಕೆ ವಿವಿಧ ಚಟುವಟಿಕೆಗಳಿಗೆ ೧೦ ಲಕ್ಷ ರು. ತನಕ ಹಣಕಾಸು ನೀಡಲಾಗುವುದು. ಸಂಘದ ಸದಸ್ಯರು ಒಂದು ಆಡಳಿತ ಮಂಡಳಿಯನ್ನು ರಚಿಸಿಕೊಂಡು ವಿವಿಧ ಚಟುವಟಿಕೆಗಳೊಂದಿಗೆ ಗ್ರಾಪಂ ಅಭಿವೃದ್ಧಿಗೆ ಕೈ ಜೋಡಿಸಬೇಕಿದೆ. ಈ ಸಂಘಕ್ಕೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸದಸ್ಯರನ್ನು ಎಲ್ಲರೂ ಮಾಡಬೇಕು ಎಂದು ಮನವಿ ಮಾಡಿದರು.ತಾಲೂಕು ಆಹಾರ ಇಲಾಖೆಯ ಆಹಾರ ನಿರೀಕ್ಷಕಿ ಯಶಸ್ವಿನಿ ಮಾತನಾಡಿ, ಬಿಪಿಎಲ್ ಕಾರ್ಡುದಾರರು ಪ್ರತಿ ೫ ವರ್ಷಗಳಿಗೊಮ್ಮೆ ತಮ್ಮ ಕಾರ್ಡಿನ ಈಕೆವೈಸಿ ತಪ್ಪದೆ ಮಾಡಿಸಬೇಕು. ಈಗಾಗಲೇ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಈಕೆವೈಸಿ ಮಾಡುತ್ತಿದ್ದು, ಪಡಿತರ ಚೀಟಿದಾರರು ತಪ್ಪದೆ ಮಾಡಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥ ನೀಡುವುದಿಲ್ಲ ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ ೬ ರಿಂದ ರಾತ್ರಿ ೧೦ರ ವರೆಗೆ ಪಡಿತರ ವಿತರಿಸಬೇಕು. ಅಂಗಡಿಗಳಲ್ಲಿ ಮಾಹಿತಿ ಫಲಕಗಳನ್ನು ಹಾಕಬೇಕು. ಆದರೆ ಇದಾವುದನ್ನೂ ನ್ಯಾಯ ಬೆಲೆ ಅಂಗಡಿಯವರು ಪಾಲಿಸುತ್ತಿಲ್ಲ. ಶನಿವಾರಸಂತೆ ವ್ಯಾಪ್ತಿಯಲ್ಲಿ ಪಡಿತರಗಾರರೊಂದಿಗೆ ಅಂಗಡಿಯವರು ದುರ್ನಡತೆಯಿಂದ ವರ್ತಿಸುತ್ತಿದ್ದಾರೆ ಎಂದು ಸದಸ್ಯ ಶನಿವಾರಸಂತೆಯ ರಂಗಸ್ವಾಮಿ ಸಭೆಗೆ ತಿಳಿಸಿದರು.

ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅಧ್ಯಕ್ಷರು ಅಧಿಕಾರಿಗೆ ಸೂಚಿಸಿದರು.

ಗಣಗೂರು ಗ್ರಾಮದ ಅಂಗನವಾಡಿಯಲ್ಲಿ ಬಾಣಂತಿಯರಿಗೆ ಅವಧಿ ಮೀರಿದ ಆಹಾರ ಪದಾರ್ಥ ಮತ್ತು ಹುಳು ಹಿಡಿದ ಅಕ್ಕಿಯನ್ನು ನೀಡುತ್ತಿರುವ ಬಗ್ಗೆ ಸೂಕ್ತ ತನಿಖೆ ಮಾಡಿ, ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯ ಎಸ್.ಎಂ. ಡಿಸಿಲ್ವ ಸಭೆಗೆ ತಿಳಿಸಿದರು. ಅಂಗನವಾಡಿಗಳಲ್ಲಿ ಅವಧಿ ಮೀರಿದ ಕೊಳೆತ ಮೊಟ್ಟೆ ವಿತರಿಸುತ್ತಿರುವುದಾಗಿ ಶೀಲಾ ಡಿಸೋಜಾ ತಿಳಿಸಿದರು. ಈ ಸಂದರ್ಭ ಅದ್ಯಕ್ಷರು ಮಾತನಾಡಿ, ಕಳಪೆ ಆಹಾರ ಸರಬರಾಜು ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕಿ ಶೃತಿಗೆ ತಿಳಿಸಿದರು. ಮುಂದಿನ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಸೆಸ್ಕ್ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಇಲಾಖಾಧಿಕಾರಿ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಭೆಗೆ ತಮ್ಮ ಇಲಾಖೆಯ ಮಾಹಿತಿ ನೀಡಿದರು.