ಸಾರಾಂಶ
215ನೇ ಫಲಪುಷ್ಪ ಪ್ರದರ್ಶನದ ಬಗ್ಗೆ ಆಯೋಜಕರಿಗೆ ಭಾರಿ ನಿರಾಸೆ । ನಿರೀಕ್ಷೆಯ 6 ಲಕ್ಷ ಜನರಲ್ಲಿ ಕೇವಲ 1.17 ಲಕ್ಷ ಮಂದಿ ಭೇಟಿ
ಕನ್ನಡಪ್ರಭ ವಾರ್ತೆ ಬೆಂಗಳೂರುಸಸ್ಯಕಾಶಿ ಲಾಲ್ಬಾಗ್ನಲ್ಲಿ ತೋಟಗಾರಿಕೆ ಇಲಾಖೆ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿರುವ ‘ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ’ 215ನೇ ಫಲಪುಷ್ಪ ಪ್ರದರ್ಶನದಲ್ಲಿ ವೀಕ್ಷಕರ ಕೊರತೆ ಕಂಡು ಬಂದಿದ್ದು, ಆಯೋಜಕರಿಗೆ ನಿರಾಸೆಯುಂಟು ಮಾಡಿದೆ.
ಈ ಬಾರಿಯ ಕಾಯಕಯೋಗಿ ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನರು ಬರಬಹುದೆಂದು ಅಂದಾಜಿಸಲಾಗಿತ್ತು. ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ದಿನಕ್ಕೆ 42ರಿಂದ 43 ಸಾವಿರ ಮಂದಿ ವೀಕ್ಷಕರು ಆಗಮಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಶನಿವಾರ 29,100 ಮತ್ತು ಭಾನುವಾರ 34,200 ವೀಕ್ಷಕರು ಮಾತ್ರ ಫುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದು ಹೊರತುಪಡಿಸಿ ಉಳಿದ ದಿನಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಬಾರದಿರುವುದು ಇಲಾಖೆ ಅಧಿಕಾರಿಗಳ ಬೇಸರಕ್ಕೆ ಕಾರಣವಾಗಿದೆ.ತೋಟಗಾರಿಕೆ ಇಲಾಖೆ ಅಧಿಕಾರಿಗಳ ನಿರೀಕ್ಷೆಯಂತೆ ಜ. 18ರಿಂದ 28ರವರೆಗೆ ಹನ್ನೊಂದು ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಬರೋಬ್ಬರಿ 10ರಿಂದ 11 ಲಕ್ಷ ವೀಕ್ಷಕರು ಆಗಮಿಸುತ್ತಾರೆಂದು ನಿರೀಕ್ಷಿಸಲಾಗಿದೆ ಈಗಾಗಲೇ ಆರು ದಿನಗಳು ಪೂರ್ಣಗೊಂಡಿದ್ದು ಈವರೆಗೆ 1.17 ಲಕ್ಷ ಜನರು ಲಾಲ್ಬಾಗ್ಗೆ ಭೇಟಿ ಕೊಟ್ಟಿದ್ದಾರೆ. ಈ ಮೂಲಕ ಟಿಕೆಟ್ ಶುಲ್ಕ 68.54 ಲಕ್ಷ ರು. ಸಂಗ್ರಹವಾಗಿದೆ. ಇನ್ನೂ ಫಲಪುಷ್ಪ ಪ್ರದರ್ಶನ ಐದು ದಿನ ನಡೆಯಲಿದ್ದು, ಜ.28ರಂದು ಸಂಜೆ 6.30ಕ್ಕೆ ಮುಕ್ತಾಯವಾಗಲಿದೆ. ಜ.26ರಂದು ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ರಜೆ ಮತ್ತು ವಿಕೆಂಡ್ನಲ್ಲಿ ಎರಡು ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಬರುವ ನಿರೀಕ್ಷೆಯಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಹೆಚ್ಚಾಗಿ ಮುಸ್ಲಿಂ ಸಮುದಾಯದವರು ಕಂಡು ಬರುತ್ತಿದ್ದರು. ಆದರೆ, ಈ ಬಾರಿ ಏಕೋ ಬೆರಳೆಣಿಕೆಯಷ್ಟು ಜನರು ಸಹ ಕಾಣಲು ಸಿಕ್ಕಿಲ್ಲ. ಬಹುಶಃ ಬಸವಾದಿ ಶರಣರು ಮತ್ತು ವಚನ ಸಾಹಿತ್ಯವನ್ನು ಧಾರ್ಮಿಕ ದೃಷ್ಟಿಕೋನದಲ್ಲಿ ನೋಡಿದ್ದರ ಪರಿಣಾಮ ಇರಬಹುದು. ಆದರೆ, ನಿಜವಾದ ಕಾರಣ ಏನೆಂಬುದು ಅರ್ಥವಾಗುತ್ತಿಲ್ಲ. ಹಿಂದೆಂದಿಗಿಂತ ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆಯಿದೆ ಎಂದು ಅಧಿಕಾರಿಯೊಬ್ಬರು ಅಳಲು ತೋಡಿಕೊಂಡರು.2022 ಆಗಸ್ಟ್ನಲ್ಲಿ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ನಡೆದಿದ್ದ 212ನೇ ಫಲಪುಷ್ಪ ಪ್ರದರ್ಶನಕ್ಕೆ ಬಂದವರ ಸಂಖ್ಯೆ 9.5 ಲಕ್ಷವಿದ್ದು, ಮೊದಲ ಸ್ಥಾನದಲ್ಲಿದೆ. ಅಂದು ₹3.15 ಕೋಟಿ ಸಂಗ್ರಹಿಸಲಾಗಿತ್ತು. ಈ ಬಾರಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ವೇಳೆ 11 ದಿನಗಳಲ್ಲಿ 8.26 ಲಕ್ಷ ಜನರು ಆಗಮಿಸಿದ್ದು, 2ನೇ ಸ್ಥಾನದಲ್ಲಿದೆ. ಆದರೆ, ಅತ್ಯಧಿಕ ಮೊತ್ತ ಗಳಿಸಿದ ಪ್ರದರ್ಶನದಲ್ಲಿ ಮೊದಲ ಸ್ಥಾನದಲ್ಲಿದ್ದು, 3.98 ಕೋಟಿ ರು. ಆದಾಯ ಗಳಿಸಿತ್ತು.
ತಾಜಾ ಪುಷ್ಪದ ಆಕರ್ಷಣೆಫಲಪುಷ್ಪ ಪ್ರದರ್ಶನ ಆರಂಭಗೊಂಡು ಆರು ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅನುಭವ ಮಂಟಪ ಸೇರಿದಂತೆ ಇತರೆ ಪುಷ್ಪಮಾದರಿಗಳಿಗೆ ಅಳವಡಿಸಲಾದ ಹೂವುಗಳು ಕಳೆಗುಂದಿದ್ದು, ಬಾಡಿ ಹೋಗುವ ಸ್ಥಿತಿಗೆ ತಲುಪಿದ್ದವು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 6.30ರಿಂದ ಅಹೋರಾತ್ರಿ ಸುಮಾರು 180 ಸಿಬ್ಬಂದಿ ಅನುಭವ ಮಂಟಪಕ್ಕೆ ಸುಮಾರು ವಿವಿಧ ತಳಿಯ10 ಲಕ್ಷಕ್ಕೂ ಹೆಚ್ಚು ತಾಜಾ ಹೂವುಗಳಿಂದ ಅನುಭವ ಮಂಟಪವನ್ನು ಶೃಂಗರಿಸಿದ್ದು ಬುಧವಾರದಿಂದ ಪುಷ್ಪ ಪ್ರದರ್ಶನ ಇನ್ನಷ್ಟು ಮೆರುಗಿನಿಂದ ವೀಕ್ಷಕರನ್ನು ಸೆಳೆಯಲಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಪಾರ್ಕ್ಸ್ ಆ್ಯಂಡ್ ಗಾರ್ಡನ್ಸ್) ಡಾ.ಎಂ.ಜಗದೀಶ್ ಅವರು ಕನ್ನಡಪ್ರಭಕ್ಕೆ ತಿಳಿಸಿದರು.
- - -ಫೋಟೋ
ಲಾಲ್ಬಾಗ್ ಗಾಜಿನಮನೆಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ವೀಕ್ಷಕರಿಲ್ಲದೆ ಖಾಲಿ ಖಾಲಿಯಾಗಿರುವ ದೃಶ್ಯ.