ಸಾರಾಂಶ
ಹಾಸನ : ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಅಮೆರಿಕಾ ಪ್ರವಾಸಕ್ಕೆ ಹೊರಟಿರುವುದಕ್ಕೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿರುವುದನ್ನು ಖಂಡಿಸುವುದಾಗಿ ವಕೀಲರಾದ ಬಿ.ಸಿ. ರಾಜೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಅಮೆರಿಕಾದಲ್ಲಿ ನಡೆಯುವ ಕಾನ್ಫರೆನ್ಸ್ ನಲ್ಲಿ ಭಾಗವಹಿಸುವುದರ ಮೂಲಕ ಈ ರಾಜ್ಯಕ್ಕೆ ಬಂಡವಾಳ ಹೂಡಲು ಆಕರ್ಷಣೆ ಮಾಡುವ ಉದ್ದೇಶದಲ್ಲಿ ಇಲಾಖೆ ವತಿಯಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅವರು ಮೋಜು, ಮಸ್ತಿ ಮಾಡಲು ಹೊರಟಿಲ್ಲ. ಈ ಕಾರ್ಯ ವೈಖರಿ ಕಂಡು ಬಿಜೆಪಿಯವರು ಈ ಪ್ರವಾಸ ತಪ್ಪಿಸುವ ಉದ್ದೇಶದಿಂದ ಅವರಿಗೆ ಪ್ರವಾಸದ ಅನುಮತಿ ನಿರಾಕರಿಸಿದ್ದಾರೆ. ಬಂಡವಾಳ ಹೂಡಿಕೆ ಉದ್ದೇಶದಿಂದ ಸಚಿವರು ಅಲ್ಲಿಗೆ ತೆರಳುತ್ತಿದ್ದರು. ಇದರಿಂದಾಗುವ ನಷ್ಟ ತಂಬಿ ಕೊಡುವವರು ಯಾರು ಎಂದು ಪ್ರಶ್ನೆ ಮಾಡಿದರು. ಇದು ರಾಜ್ಯಕ್ಕೆ ಮಾಡಿರುವ ಅನ್ಯಾಯ. ಮೋದಿ ಒಬ್ಬರೇ ವಿದೇಶ ಪ್ರವಾಸ ಮಾಡಬೇಕಾ? ಹಿಂದುಳಿದ ವರ್ಗದ ಯಾರೂ ತಮ್ಮ ಪಾಂಡಿತ್ಯ ಪ್ರದರ್ಶಿಸಬಾರದಾ? ತಾವು ಮಾತ್ರ ಶ್ರೇಷ್ಠ ಎಂಬ ಭಾವನೆ ಬಿಜೆಪಿ ಅವರಿಗಿದೆ ಎಂದು ಕಿಡಿಕಾರಿದರು.
ದಲಿತ ಹಿರಿಯ ಮುಖಂಡರಾದ ಎಚ್.ಕೆ. ಸಂದೇಶ್ ಮಾತನಾಡುತ್ತಾ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಮೆರಿಕಾ ಪ್ರವಾಸ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸಿದೆ. ಈ ದೇಶದಲ್ಲಿ ದಲಿತರು ವಿದೇಶ ಪ್ರವಾಸ ಮಾಡಬಾರದು ಎಂಬ ಕಾನೂನು ಇದೆಯಾ? ಪ್ರಧಾನಿ ಮೋದಿ ಅವರು ಮಾತ್ರ ಲಕ್ಷಾಂತರ ಬೆಲೆ ಬಾಳುವ ಸೂಟು ಬೂಟು ಧರಿಸಿ ವಿದೇಶ ಪ್ರವಾಸ ಮಾಡುತ್ತಾರೆ. ಅದೇ ಒಬ್ಬ ದಲಿತ ಸಚಿವ ವಿದೇಶ ಪ್ರವಾಸಕ್ಕೆ ಅನುಮತಿ ಕೇಳಿದರೆ ನಿರಾಕರಣೆ ಮಾಡಿದ್ದಾರೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ದೇವರಾಜ್, ಪರಮೇಶ್, ಪುಟ್ಟಯ್ಯ, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್ ಇತರರು ಇದ್ದರು.