ಪ್ರತಿ ಯೊಬ್ಬರಿಗೂ ಸಾಮಾನ್ಯ ಜ್ಞಾನ ಮುಖ್ಯ, ದೇಶ, ದೇಶದ ಭೌಗೋಳಿಕ, ರಾಜಕೀಯ, ಸಂಸ್ಕೃತಿಯ ಕುರಿತಾಗಿ ಜ್ಞಾನ ಇರಬೇಕು. ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ವಿಕಸನ ಸಾಧ್ಯ. ಪ್ರಪಂಚದ ಹಲವು ದೇಶಗಳ ಆರ್ಥಿಕತೆ ನೆಲಕಚ್ಚುತ್ತಿರುವ ದಿನಗಳಲ್ಲಿಯೂ ನಮ್ಮ ದೇಶದ ಆರ್ಥಿಕತೆ ಸುಭದ್ರವಾಗಿದೆ ಎಂದರೆ ನಮ್ಮ ದೇಶದ ಸಂವಿಧಾನದಡಿಯಲ್ಲಿರುವ ಕಾನೂನು ತಿದ್ದುಪಡಿಗಳು ಕಾರಣವಾಗಿವೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುವ ಬದಲು ದಿನದಲ್ಲಿ ೧ ಗಂಟೆಯಾದರೂ ಸಂವಿಧಾನದ ಪೀಠಿಕೆ, ಅನುಚ್ಛೇದಗಳನ್ನು ಓದುವ ಹವ್ಯಾಸ ಬೆಳೆಸಿ ಕೊಳ್ಳಬೇಕೆಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.ಪಟ್ಟಣದ ಡಾ. ಬಿ. ಆರ್‌. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಮನ್ವಯ ಸಮಿತಿ ಮನುಜ ಮತ ಮತ್ತು ಡಾ.ಸಿ. ಎನ್. ಬಾಲಕೃಷ್ಣ ಜ್ಞಾನವಿಕಾಸ ಸಾಂಸ್ಕೃತಿಕ ವೇದಿಕೆಯಡಿ ನಡೆದ ೩ನೇ ವರ್ಷದ ಸಂವಿಧಾನ ಮತ್ತು ಸಾಮಾನ್ಯ ಜ್ಞಾನ ಕುರಿತಂತೆ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿ ಹಂತದಲ್ಲೇ ಸಂವಿಧಾನ ಓದುವು ದನ್ನು ರೂಢಿಸಿಕೊಂಡರೆ ಅಪಾರ ಜ್ಞಾನ ಲಭಿಸುತ್ತದೆ. ಪ್ರತಿ ಯೊಬ್ಬರಿಗೂ ಸಾಮಾನ್ಯ ಜ್ಞಾನ ಮುಖ್ಯ, ದೇಶ, ದೇಶದ ಭೌಗೋಳಿಕ, ರಾಜಕೀಯ, ಸಂಸ್ಕೃತಿಯ ಕುರಿತಾಗಿ ಜ್ಞಾನ ಇರಬೇಕು. ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ವಿಕಸನ ಸಾಧ್ಯ. ಪ್ರಪಂಚದ ಹಲವು ದೇಶಗಳ ಆರ್ಥಿಕತೆ ನೆಲಕಚ್ಚುತ್ತಿರುವ ದಿನಗಳಲ್ಲಿಯೂ ನಮ್ಮ ದೇಶದ ಆರ್ಥಿಕತೆ ಸುಭದ್ರವಾಗಿದೆ ಎಂದರೆ ನಮ್ಮ ದೇಶದ ಸಂವಿಧಾನದಡಿಯಲ್ಲಿರುವ ಕಾನೂನು ತಿದ್ದುಪಡಿಗಳು ಕಾರಣವಾಗಿವೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಾಗಿ ಸಂವಿಧಾನವನ್ನು ಓದುವುದಲ್ಲ. ಬದುಕಿನಲ್ಲಿನ ಉತ್ತಮ, ನ್ಯಾಯಯುತ ಜೀವನಕ್ಕೆ ಸಂವಿಧಾನದ ಅರಿವು ಅಗತ್ಯ. ಸಂವಿಧಾನದಲ್ಲಿ ಬರುವ ಹಕ್ಕು ಮತ್ತು ಕರ್ತವ್ಯಗಳನ್ನು ದೇಶದ ಪ್ರತಿ ಪ್ರಜೆಯೂ ತಿಳಿಯಬೇಕು. ಅಂಬೇಡ್ಕರ್‌ ನೀಡಿದ ಸಂವಿಧಾನ ಸಮಾಜದ ಎಲ್ಲ ಜನರಿಗೂ ಸಮಾನ ಹಕ್ಕು ಕಲ್ಪಿಸಿದೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿವೈಎಸ್‌ಪಿ ಎನ್. ಕುಮಾರ್‌ ಮಾತನಾಡಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಕರ್ನಾಟಕ ದಲಿತ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ದಿಂಡಗೂರು ಗೋವಿಂದರಾಜ್ ವಹಿಸಿದ್ದರು. ತಹಸೀಲ್ದಾರ್‌ ಜಿ.ಎಸ್.ಶಂಕರಪ್ಪ, ಬಿಇಒ ಎಚ್. ಎನ್. ದೀಪಾ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್. ಆರ್‌. ವೆಂಕಟೇಶ್ ಮೂರ್ತಿ, ದಿಂಡಗೂರು ಶಿವಲಿಂಗೇಗೌಡ, ಯಶೋಧ ಜೈನ್, ಕೆರೆಚಿಕ್ಕೇನಹಳ್ಳಿ ಸ್ವಾಮಿ, ಉಪನ್ಯಾಸಕ ರತ್ನಾಕರ್ ಸೇರಿ ದಲಿತ ಸಮನ್ವಯ ಸಮಿತಿಯ ಎಲ್ಲ ಪದಾಧಿಕಾರಿಗಳು, ಸದಸ್ಯರು ಇದ್ದರು.