ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತ್ನಿಯನ್ನು ಕೊಂದು ಬಡಗಿ (ಕಾರ್ಪೆಂಟರ್‌)ವೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತ್ನಿಯನ್ನು ಕೊಂದು ಬಡಗಿ (ಕಾರ್ಪೆಂಟರ್‌)ವೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಸಿ.ಕೆ.ಅಚ್ಚುಕಟ್ಟು ಸಮೀಪದ ನಿವಾಸಿ ಸ್ವಪ್ನ (29) ಹಾಗೂ ಆಕೆಯ ಪತಿ ಮನೋಜ್ (30) ಮೃತರು. ಕೌಟುಂಬಿಕ ವಿಚಾರವಾಗಿ ಮನೆಯಲ್ಲಿ ದಂಪತಿ ಮಧ್ಯೆ ಜಗಳವಾಗಿದೆ. ಆಗ ಕೋಪಗೊಂಡ ಮನೋಜ್‌, ತನ್ನ ಪತ್ನಿಯನ್ನು ಬೆಲ್ಟ್‌ನಿಂದ ಕುತ್ತಿಗೆ ಬಿಗಿದು ಕೊಂದಿದ್ದಾನೆ. 

ಬಳಿಕ ತಾನು ನೇಣು ಹಾಕಿಕೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಮೃತನ ಮನೆಗೆ ಮನೆ ಮಾಲೀಕರು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 4 ವರ್ಷಗಳ ಹಿಂದೆ ಮನೋಜ್ ಹಾಗೂ ಸ್ವಪ್ನ ವಿವಾಹವಾಗಿದ್ದು, ಮದುವೆ ಬಳಿಕ ಸಿ.ಕೆ.ಅಚ್ಚುಕಟ್ಟು ಸಮೀಪ ದಂಪತಿ ನೆಲೆಸಿದ್ದರು. ಆದರೆ ಬಡಗಿ ಕೆಲಸ ಮಾಡಿಕೊಂಡು ಮನೋಜ್ ಜೀವನ ಸಾಗಿಸುತ್ತಿದ್ದ. ಇತ್ತೀಚಿಗೆ ಸಾಂಸಾರಿಕ ವಿಚಾರಗಳಿಗೆ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು. ಈ ಭಿನ್ನಾಭಿಪ್ರಾಯ ಕೊನೆಗೆ ದುರಂತ ಅಂತ್ಯ ಕಂಡಿದೆ ಎಂದು ಪೊಲೀಸರು ಹೇಳಿದ್ದಾರೆ.