ಮೊಬೈಲ್‌ ಸಹವಾಸದಿಂದ ವಿದ್ಯಾರ್ಥಿಗಳು ನಿರೀಕ್ಷಿತ ಅಂಕ ಗಳಿಸುವಲ್ಲಿ ವಿಫಲರಾಗಿ ಹಿನ್ನಡೆಯಾಗುತ್ತಿದೆ. ಹೀಗಾಗಿ, ಪರೀಕ್ಷೆಗಳಲ್ಲಿ ಕಳಪೆ ಸಾಧನೆ ತೋರುತ್ತಿದ್ದಾರೆ.

ಧಾರವಾಡ:

ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆ, ನಿದ್ರೆ ಹಾಗೂ ಕಣ್ಣಿನ ದೃಷ್ಟಿಯ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ ಎಂದು ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.

ತಾಲೂಕಿನ ಮಾರಡಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಹೇಗೆ? ಎಂಬ ವಿಷಯದ ಕುರಿತು ಮಾತನಾಡಿದರು.

ಮೊಬೈಲ್‌ ಸಹವಾಸದಿಂದ ವಿದ್ಯಾರ್ಥಿಗಳು ನಿರೀಕ್ಷಿತ ಅಂಕ ಗಳಿಸುವಲ್ಲಿ ವಿಫಲರಾಗಿ ಹಿನ್ನಡೆಯಾಗುತ್ತಿದೆ. ಹೀಗಾಗಿ, ಪರೀಕ್ಷೆಗಳಲ್ಲಿ ಕಳಪೆ ಸಾಧನೆ ತೋರುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಶೈಕ್ಷಣಿಕ ಸಾಧನೆಯಲ್ಲಿಯೂ ತೀವ್ರ ಹಿನ್ನಡೆ ಆಗುತ್ತಿರುವುದರಿಂದ ಮೊಬೈಲ್ ಬಿಟ್ಟು, ಪುಸ್ತಕ ಹಿಡಿಯುವುದನ್ನು ರೂಢಿಸಿಕೊಳ್ಳಲು ಸಲಹೆ ನೀಡಿದರು.

ಆನ್‌ಲೈನ್ ಆಟ, ರೀಲ್ಸ್‌ ನೋಡುವುದು ಮತ್ತು ಸಾಮಾಜಿಕ ಜಾಲತಾಣಗಳಿಂದ ಸಮಯ ವ್ಯರ್ಥವಾಗುತ್ತದೆ. ರಾತ್ರಿ ಮೊಬೈಲ್ ನೋಡುವುದರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ಕುತ್ತಿಗೆ ಮತ್ತು ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಆತಂಕ ಮತ್ತು ಕಿರಿಕಿರಿ ಹೆಚ್ಚಾಗುತ್ತದೆ. ನಿಜವಾದ ಸ್ನೇಹಿತರು ಮತ್ತು ಕುಟುಂಬದಿಂದ ಮೊಬೈಲ್‌ ಹೆಚ್ಚಿನ ಬಳಕೆಯಿಂದ ದೂರ ಇರುವಂತಾಗಿದೆ. ಕೊನೆಗೆ ಮೊಬೈಲ್ ಬಳಕೆ ವ್ಯಸನವಾಗಿ ಅದನ್ನು ಬಿಡಲಾರದ ಸ್ಥಿತಿಗೆ ತಲುಪುತ್ತಾರೆ. ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡುವ ಜತೆಗೆ ಶೈಕ್ಷಣಿಕ ಪ್ರಗತಿಯಲ್ಲಿ ತಮ್ಮ ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಫಕೀರಪ್ಪ ಕಾಲವಾಡ, ಗ್ರಾಪಂ ಅಧ್ಯಕ್ಷರಾದ ಸುರೇಶ ಶಾನವಾಡ, ಗಂಗಾಧರ ಪಾಟೀಲ್ ಕುಲಕರ್ಣಿ, ಶಿವರಾಜ ಬಳ್ಳಾರಿ, ಹನುಮಂತಪ್ಪ ಮಾರಡಗಿ ಇದ್ದರು.