ಸಹಕಾರಿ ಯಶಸ್ಸಿಗೆ ಕಾನೂನು ಅರಿವು ಅಗತ್ಯ

| Published : Oct 11 2025, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಹಕಾರಿ ರಂಗದಲ್ಲಿರುವ ಎಲ್ಲರೂ ಪ್ರಾಮಾಣಿಕ, ಪಾರದರ್ಶಕ ಹಾಗೂ ಸೇವಾ ಮನೋಭಾವದ ಜೊತೆಗೆ ಕಾನೂನಿನ ಅರಿವಿನೊಂದಿಗೆ ಕೆಲಸ ಮಾಡಿಬೇಕಿದೆ. ಹಾಗಾದಲ್ಲಿ ಸಹಕಾರಿ ರಂಗವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಹಕಾರಿ ರಂಗದಲ್ಲಿರುವ ಎಲ್ಲರೂ ಪ್ರಾಮಾಣಿಕ, ಪಾರದರ್ಶಕ ಹಾಗೂ ಸೇವಾ ಮನೋಭಾವದ ಜೊತೆಗೆ ಕಾನೂನಿನ ಅರಿವಿನೊಂದಿಗೆ ಕೆಲಸ ಮಾಡಿಬೇಕಿದೆ. ಹಾಗಾದಲ್ಲಿ ಸಹಕಾರಿ ರಂಗವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘ ಹಾಗೂ ಸಹಕಾರಿ ಒಕ್ಕೂಟದ ಸಹಯೋಗದಲ್ಲಿ ಪಟ್ಟಣ ಸಹಕಾರಿ ಬ್ಯಾಂಕ್, ಪತ್ತಿನ ಸಹಕಾರಿ ಸಂಘಗಳು ಹಾಗೂ ವಿವಿಧೊದ್ದೇಶಗಳ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕರಿಗೆ ಹಮ್ಮಿಕೊಂಡಿದ್ದ ಸಹಕಾರಿ ಕಾಯ್ದೆಗಳಿಗೆ ತಿದ್ದುಪಡಿ, ಅಭಿವೃದ್ಧಿ ಹಾಗೂ ಎದುರಿಸುತ್ತಿರುವ ಸವಾಲುಗಳ ಸಮಾಲೋಚನೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಹಕಾರಿ ರಂಗದ ಬಲವರ್ಧನೆಗೆ ಸರ್ಕಾರಗಳು ಮೇಲಿಂದ ಮೇಲೆ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತವೆ. ಸರ್ಕಾರದ ನಿಯಮಗಳ ಪಾಲನೆಯೊಂದಿಗೆ ಸಹಕಾರಿ ಬಲವರ್ಧನೆಗೆ ಶ್ರಮಿಸಬೇಕಿದೆ ಎಂದರು.ಪ್ರಸಕ್ತ ಸ್ಪರ್ಧಾತ್ಮಕ ಯುಗದಲ್ಲಿ ಸಹಕಾರಿ ರಂಗದ ಪ್ರಗತಿ ನಿರೀಕ್ಷಿತದಂತೆ ಪ್ರಗತಿ ಕಂಡಿಲ್ಲ ಎಂಬುದು ಸತ್ಯ. ಆದರೂ ತೀರಾ ನಿರಾಶಾದಾಯವಾಗೇನೂ ಇಲ್ಲ. ಕಾನೂನು ಚೌಕಟ್ಟಿನೊಳಗಿನ ವ್ಯವಹಾರ ಒಂದೆಡೆಯಾದರೆ, ಮಾನವೀಯ ನೆಲೆಯಲ್ಲಿ ವ್ಯವಹರಿಸುವ ಮೂಲಕ ಸಹಕಾರಿ ರಂಗದಲ್ಲಿ ಅಭಿವೃದ್ಧಿಯ ಪರಿವರ್ತನೆ ತರುವ ಅಗತ್ಯವಿದೆ. ರೈತರು, ಜನ ಸಾಮಾನ್ಯರ ಆರ್ಥಿಕ ಜೀವನ ಮಟ್ಟ ಸುಧಾರಣೆಗಾಗಿ ಸಹಕಾರಿ ವ್ಯವಸ್ಥೆಯಲ್ಲಿ ಇರುವ ಎಲ್ಲರೂ ಬದ್ಧತೆಯಿಂದ ಸೇವೆ ಸಲ್ಲಿಸಬೇಕಿದೆ. ಸಹಕಾರಿ ರಂಗದಲ್ಲಿ ಉತ್ತುಂಗದಲ್ಲಿರುವ ಸಹಕಾರಿ ಸಂಸ್ಥೆಗಳೂ ಇವೆ, ಮತ್ತೆ ಕೆಲವು ಸುಧಾರಣೆ ಹಂತದಲ್ಲೂ, ಇನ್ನಷ್ಟು ಸಂಸ್ಥೆಗಳು ಸಂಕಷ್ಟದಲ್ಲಿವೆ. ಆದರೆ ಸೋತವರನ್ನು ಕೈ ಬಿಡದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.ವಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಮಾತನಾಡಿ, ಸಹಕಾರಿ ಕ್ಷೇತ್ರದ ಬಲವರ್ಧನೆಗಾಗಿ ಸಹಕಾರಿ ಪತ್ತಿನ ಸಂಘಗಳು ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಿ, ಆರ್ಥಿಕ ಸುಸ್ಥಿತಿ ಕಂಡುಕೊಳ್ಳಬೇಕು ಎಂದರು. ಸಹಕಾರಿ ಸಂಘಗಳ ವಿಶ್ರಾಂತ ಅಪರ ನಿಬಂಧಕ ಎಂ.ಜಿ.ಪಾಟೀಲ, ವಿಡಿಸಿಸಿ ನಿರ್ದೇಶಕ ಗುರುಶಾಂತ ನಿಡೋಣಿ, ಚಂದ್ರಶೇಖರಗೌಡ ಪಾಟೀಲ, ಸುರೇಶಗೌಡ ಬಿರಾದಾರ, ಎಸ್.ಎಸ್.ಜಾಗೀರದಾರ, ಶೇಖರ ದಳವಾಯಿ, ಸಿಇಒ ಎಸ್.ಎ.ಢವಳಗಿ, ಶ್ರೀಮಂತ ಇಂಡಿ, ವಿಡಿಸಿಸಿ ಹಿರಿಯ ಅಧಿಕಾರಿಗಳು ಸೇರಿ ಇತರರು ಇದ್ದರು. ವಿಶ್ರಾಂತ ಪ್ರಾಚಾರ್ಯ ಬಸವರಾಜ ಸಾವಕಾರ ನಿರೂಪಿಸಿದರು. ವಿಡಿಸಿಸಿ ಉಪ ಪ್ರಧಾನ ವ್ಯವಸ್ಥಾಪಕ ಸತೀಶ ಪಾಟೀಲ ವಂದಿಸಿದರು.