ಸಾರ್ವಜನಿಕ ಸ್ಥಳ ಮತ್ತು ಉದ್ಯೋಗದ ಸ್ಥಳದಲ್ಲಿ ದೌರ್ಜನ್ಯಗಳು ನಡೆದರೆ ಮಹಿಳೆಯರು ಧೈರ್ಯದಿಂದ ಧ್ವನಿ ಎತ್ತಬೇಕು.

ಕುರುಗೋಡು: ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಕಾನೂನುಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದರೆ ಮಾತ್ರ ಸುರಕ್ಷಿತ ಜೀವನ ಸಾಗಿಸಲು ಸಾಧ್ಯ ಎಂದು ಉಪನ್ಯಾಸಕಿ ರಿನಿ ಸಿದ್ದರಾಮೇಶ್ವರ ಅಭಿಪ್ರಾಯಪಟ್ಟರು.

ಇಲ್ಲಿನ ಕೊಟ್ಟೂರು ಸ್ವಾಮಿ ಶಾಖಾ ವಿರಕ್ತ ಮಠದಲ್ಲಿ ಸೋಮವಾರ ಆಯೋಜಿಸಿದ್ದ ನಾಲ್ಕನೇ ಮಾಸಿಕ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕ ಸ್ಥಳ ಮತ್ತು ಉದ್ಯೋಗದ ಸ್ಥಳದಲ್ಲಿ ದೌರ್ಜನ್ಯಗಳು ನಡೆದರೆ ಮಹಿಳೆಯರು ಧೈರ್ಯದಿಂದ ಧ್ವನಿ ಎತ್ತಬೇಕು. ಇಲ್ಲವಾದರೆ ನಿರಂತರ ತುಳಿತಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಹಿಳೆ ಮತ್ತು ಪುರುಷ ಎಂಬ ತಾರತಮ್ಯ ಮಾಡದೇ ಸಮಾನ ವೇತನ ನೀಡಬೇಕೆಂಬ ಕಾನೂನು ಜಾರಿಯಲ್ಲಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆ, ಹೆರಿಗೆ ರಜೆ ಕಾಯ್ದೆಗಳ ಬಗ್ಗೆ ತಿಳಿದುಕೊಂಡಿರಬೇಕು. ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಅನೈತಿಕ ಸಾಗಾಟ ಮತ್ತು ವೇಶ್ಯಾವಾಟಿಕೆ ತಡೆಗಟ್ಟು ಕಾನೂನುಗಳು ಜಾರಿಯಲ್ಲಿಗೆ ಇವುಗಳನ್ನು ಸದುಪಯೋಗ ಪಡಿಸಿಕೊಂಡು ಸುರಕ್ಷಿತ ಜೀವನ ನಡೆಸಬೇಕು. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಹಿಳಾ ಆಯೋಗಗಳಿವೆ. ಕೆಲವು ಸಂದರ್ಭಗಳಲ್ಲಿ ಅವುಗಳ ಸಹಾಯವೂ ಪಡೆಯಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಿರಂಜನ ಪ್ರಭು ಮಹಾಸ್ವಾಮಿ ಮಾತನಾಡಿ, ಮಕ್ಕಳಿಗೆ ಆರಂಭಿಕ ಹಂತದಲ್ಲಿಯೇ ಸಂಸ್ಕೃತಿ ಮತ್ತು ಸಂಸ್ಕಾರಯುಕ್ತ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗುವ ಪ್ರಸಂಗಗಳು ಬರುವುದಿಲ್ಲ ಎಂದರು. ಮಗು ಬಾಲ್ಯದಲ್ಲಿ ತಪ್ಪು ಮಾಡಿದರೆ ಅವುಗಳನ್ನು ಸಮರ್ಥಿಸಿಕೊಳ್ಳದೇ ತಿಳಿಹೇಳಿ ಸರಿದಾರಿಗೆ ತರಬೇಕು. ಮಕ್ಕಳನ್ನು ಸರಿದಾರಿಯಲ್ಲಿ ನಡೆಸಬೇಕದರೆ ತಾಯಿ ಮೊದಲು ಕಾನೂನಿನ ಸಾಮಾನ್ಯ ಜ್ಞಾನ ಹೊಂದಿರುವ ಅಗತ್ಯವಿದೆ ಎಂದರು.

ಎಸ್‌ಟಿಎಂ ಸದಾಶಿವ ಸ್ವಾಮಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಟಿ.ಮಲ್ಲಿಕಾರ್ಜುನ, ಭಕ್ತರು ಇದ್ದರು.

ಕುರುಗೋಡು ಪಟ್ಟಣದ ಕೊಟ್ಟೂರು ಸ್ವಾಮಿ ವಿರಕ್ತ ಶಾಖಾ ಮಠದಲ್ಲಿ ಸೋಮವಾರ ಜರುಗಿದ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ರಿನಿ ಸಿದ್ದರಾಮೇಶ್ವರ ಮಾತನಾಡಿದರು.