ಸಾರಾಂಶ
ಜಮಖಂಡಿ ತಾಲೂಕಿನ ಚಿಕ್ಕಜಂಬಗಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ನಾಲ್ಕು ದಿನಗಳಿಂದ ಗ್ರಾಮದೊಳಗೆ ದಾಳಿ ಮಾಡಿ ಆಡು, ನಾಯಿಗಳ ಬೇಟೆಯಾಡುತ್ತಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಚಿಕ್ಕಜಂಬಗಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ನಾಲ್ಕು ದಿನಗಳಿಂದ ಗ್ರಾಮದೊಳಗೆ ದಾಳಿ ಮಾಡಿ ಆಡು, ನಾಯಿಗಳ ಬೇಟೆಯಾಡುತ್ತಿದೆ. ರಾತ್ರಿ ಸಮಯದಲ್ಲಿ ದಾಳಿ ಮಾಡುತ್ತಿರುವ ಚಿರತೆ ರೈತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಣ್ಣಿಗೆ ಬೀಳುತ್ತಿಲ್ಲ. ಗುರುವಾರ ಅರಣ್ಯ ಇಲಾಖೆಯ ಡಿಎಫ್ಒ ಮಹೇಶ, ವಲಯ ಅರಣ್ಯ ಇಲಾಖೆಯ ಆರ್ಎಫ್ಓ ಕಿರಣ ದಾಸಿರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆಯ ಹೆಜ್ಜೆಯ ಗುರುತು ಪತ್ತೆ ಹಚ್ಚಿದ್ದಾರೆ. ಚಿರತೆ ಕೊಂದು ಹಾಕಿರುವ ನಾಯಿಯ ಕಳೆಬರ ವೀಕ್ಷಿಸಿ ಖಚಿತ ಪಡಿಸಿದ್ದು, ಗ್ರಾಮದಲ್ಲಿ 3 ಸಿಸಿ ಕ್ಯಾಮೆರಾ ಹಾಗೂ ಬಲೆಗಳನ್ನು ಅಳವಡಿಸಿದ್ದಾರೆ. ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿದ್ದು, ರಾತ್ರಿ ಸಮಯದಲ್ಲಿ ಒಂಟಿಯಾಗಿ ಓಡಾಡದಂತೆ ಸೂಚನೆ ನೀಡಿದ್ದಾರೆ.ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಕಟ್ಟಿಕೊಳ್ಳುವಂತೆ ತಿಳಿಸಿದ್ದಾರೆ.ಗ್ರಾಮದ ಹಣಮಕ್ಕನವರ ಎಂಬುವರಿಗೆ ಸೇರಿದ 4 ಆಡುಗಳನ್ನು, ಗಿರಿಮಲ್ಲ ಬಿರಾದಾರ ಎಂಬುವವರ ಸಾಕು ನಾಯಿಯನ್ನು ತಿಂದುಹಾಕಿದೆ. ರಾತ್ರಿಹೊತ್ತು ದಾಳಿ ನಡೆಸಿ ಕಬ್ಬಿನ ಗದ್ದೆಗಳಲ್ಲಿ ಓಡಿಹೋಗಿ ಕಬ್ಬಿನ ಗದ್ದೆಯಲ್ಲಿ ಅಡಗಿಕೊಳ್ಳುತ್ತಿದ್ದು ರೈತರ ಕಣ್ಣಿಗೆ ಕಾಣುತ್ತಿಲ್ಲ. ಬೆಳಗಿನ ಜಾವ 3 ರಿಂದ 5 ಗಂಟೆಯ ಸಮಯದಲ್ಲಿ ದಾಳಿ ನಡೆಸುತ್ತಿದೆ. ತೋಟದ ಮನೆಗಳಲ್ಲಿ ವಾಸವಾಗಿರುವ ರೈತರು ಗಾಬರಿಗೊಂಡಿದ್ದಾರೆ ಎಂದು ಅಶೋಕ ಮಲಕಪ್ಪನವರ ತಿಳಿಸಿದ್ದಾರೆ. ಅರಣ್ಯ ಇಲಾಖೆ ಹಾಗೂ ವನ್ಯಜೀವಿಗಳ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.