ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಎಲ್ಲಾ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರವನ್ನು ಅನಾವರಣಗೊಳಿಸಲಾಗಿದ್ದು, ಬಸವೇಶ್ವರ ಪೋಟೋದಲ್ಲಿ ಅಲ್ಲ, ನಮ್ಮೆಲ್ಲರ ಹೃದಯದಲ್ಲಿ ಅನಾವರಣಗೊಳ್ಳಬೇಕು. ಆಗ ಮಾತ್ರ ಬಸವೇಶ್ವರರ ತತ್ವಗಳನ್ನು ರೂಢಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪ ನಮನ ಸಮರ್ಪಿಸಿ ಮಾತನಾಡಿದ ಅವರು, ದುಡಿಮೆ ಹಾಗೂ ದಾಸೋಹ ಎಂಬ ಎರಡು ತತ್ವಗಳನ್ನು ಬಸವೇಶ್ವರರು ನಾಡಿಗೆ ಪರಿಚಯಿಸಿದ್ದಾರೆ. ಕಾಯಕದಲ್ಲಿ ಕೈಲಾಸ ಕಂಡವರು ಶಿವಶರಣರು ಎಂದರು.
12ನೇ ಶತಮಾನ ಅನುಭವ ಮಂಟಪದಲ್ಲಿ ನಿಜವಾದ ಪ್ರಜಾಪ್ರಭುತ್ವದ ಕುರುಹುಗಳಿದ್ದವು. ಎಲ್ಲ ಜಾತಿಯ ಮಹನೀಯರು ಅನುಭವ ಮಂಟಪದ ಸದಸ್ಯರಾಗಿದ್ದರು. ಎಲ್ಲಾ ಶಿವಶರಣರು ಕಾಯಕ ತತ್ವದಲ್ಲಿ ನಂಬಿಕೆಯಿಟ್ಟು, ಒಂದಲ್ಲ ಒಂದು ದುಡಿಮೆಯಲ್ಲಿ ತೊಡಗಿದ್ದರು. ಇದರಿಂದ ಬಂದ ಆದಾಯವನ್ನು ದಾಸೋಹಕ್ಕೆ ಬಳಸಿಕೊಳ್ಳುತ್ತಿದ್ದರು. ಬಿಜ್ಜಳ ರಾಜನ ಕೋಶದ ಮಂತ್ರಿಯಾಗಿ ಬಸವಣ್ಣ ಕೆಲಸ ನಿರ್ವಹಿಸಿದರೂ, ಒಂದು ಬಿಡಿಗಾಸನ್ನು ರಾಜ್ಯದ ಕೋಶದಿಂದ ದಾಸೋಹಕ್ಕೆ ಬಳಸಿಕೊಳ್ಳಲಿಲ್ಲ. ಕೋಶದ ಹಣ ಅಪವ್ಯಯದ ಮಾತು ಬಂದಾಗ ತಕ್ಷಣ ಬಸವೇಶ್ವರರು ಸ್ಥಾನ ತೊರೆದರೆಂದರು.ಬಸವೇಶ್ವರರು ಸಾಂಸ್ಕೃತಿಕವಾಗಿಯೂ ನಾಡಿನ ಹಿರಿಮೆಯಾಗಿದ್ದಾರೆ. ಬಸವೇಶ್ವರರ ವಚನಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಅಧ್ಯಾಯ ಬರೆದವು. ಜನ ಸಾಮಾನ್ಯರ ಅಡು ಭಾಷೆಯಲ್ಲಿಯೇ ವಚನಗಳಿದ್ದು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಯಶ ಕಂಡಿವೆ ಎಂದು ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಓರ್ವ ಗೃಹಿಣಿಯಾಗಿ ಮಹಾಸಾಧ್ವಿತನಕ್ಕೆ ಏರಿದವಳು. ವಿಷಯಲಂಪಟ ವೇಮನನ್ನು ಮಹಾಯೋಗಿ ವೇಮನನ್ನಾಗಿ ಮಾಡಿದ್ದು, ಹೇಮರೆಡ್ಡಿ ಮಲ್ಲಮ್ಮ. ಅವಳ ಭಕ್ತಿ ಹಾಗೂ ಉದಾರ ಗುಣ ನಮ್ಮೆಲರಿಗೂ ಮಾದರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ವೀರಶೈವ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಬಸವಣ್ಣನವರ ನಡೆ-ನುಡಿ ಪಾಲನೆಯಿಂದ ನಮಗೆ ಯಾವುದೇ ವಿಚಾರದಲ್ಲಿಯೂ ಹಿನ್ನಡೆಯಾಗುವುದಿಲ್ಲ. ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ, ಜಾತಿವ್ಯವಸ್ಥೆಯನ್ನು ತೊಡೆದು ಹಾಕಿದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದರಿಂದ ರಾಜ್ಯದ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಲಾಗಿದೆ. ಅದರಂತೆ ನಮ್ಮ ಬಹಳ ವರ್ಷಗಳ ಬೇಡಿಕೆಯಾದ ಬಸವಣ್ಣ ನವರ ಪುತ್ಥಳಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸ್ಥಾಪನೆ ಮಾಡುವುದು ಸೂಕ್ತ ಎಂದರು.ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಚಿದಾನಂದಪ್ಪ ಮಾತನಾಡಿ, ಸ್ತ್ರೀ ಕುಲಕ್ಕೆ ಮಾದರಿಯಾಗಿ, ಸಮಾಜದ ಉದ್ಧಾರಕ್ಕಾಗಿ, ಭಕ್ತಿಯ ಸಾಕಾರಮೂರ್ತಿಯಾಗಿ ಹೇಮರೆಡ್ಡಿ ಮಲ್ಲಮ್ಮರವರ ಜೀವನ ಆದರ್ಶಪ್ರಾಯವಾಗಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಪ್ರಾಸ್ತಾವಿಕ ಮಾತನಾಡಿದರು. ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ನಿರೂಪಿಸಿದರು.
ತಹಶೀಲ್ದಾರ್ ಡಾ.ನಾಗವೇಣಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಗ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ವೀರಶೈವ ಸಮಾಜದ ಕಾರ್ಯದರ್ಶಿ ವೀರೇಂದ್ರ ಕುಮಾರ್, ಸಹಕಾರ್ಯದರ್ಶಿ ಜಿತೇಂದ್ರ ಹುಲಿಕುಂಟೆ, ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಿ.ಎನ್. ಮಹೇಶ್, ಕಾರ್ಯದರ್ಶಿ ದಿವಾಕರ್, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ ಬಸವರಾಜ್, ಕಾರ್ಯದರ್ಶಿ ರೀನಾ ವೀರಭದ್ರಪ್ಪ, ಮುಖಂಡರಾದ ಮೋಕ್ಷಾರುದ್ರಸ್ವಾಮಿ, ರುದ್ರೇಶ್ ಐಗಳ್, ಹೇಮರೆಡ್ಡಿ ಮಲ್ಲಮ್ಮ ಸಮಾಜದ ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ, ಉಪಾಧ್ಯಕ್ಷ ನಾಗರಾಜ್ ಸಂಗಮ್, ಕೆ.ಪಿ.ಬಸವರಾಜ್, ಖಜಾಂಚಿ ದಯಾನಂದ ಪಾಟೀಲ್, ಶಿವಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಜಯದೇವಪ್ಪ ಇದ್ದರು.