ವೈಜ್ಞಾನಿಕವಾಗಿ ಎಲ್ಲ ಮನುಷ್ಯರ ಮೆದುಳು ಒಂದೇಯಾಗಿದ್ದು, ಎಲ್ಲರಲ್ಲಿಯೂ ಸಮಾನವಾದ ಶಕ್ತಿವಂತಿಕೆ ಇದೆ. ಆದರೆ ಅದರ ಅರಿವಿನ ಕೊರತೆ ಇದೆ.

ಪಠ್ಯೇತರ ಚಟುವಟಿಕೆಗಳ ಸಮಾರೋಪ, ಬಹುಮಾನ ವಿತರಣಾ ಸಮಾರಂಭದಲ್ಲಿ ಹಿರಿಯ ವಿಜ್ಞಾನಿ

ಕನ್ನಡಪ್ರಭ ವಾರ್ತೆ ದಾಂಡೇಲಿ

ವೈಜ್ಞಾನಿಕವಾಗಿ ಎಲ್ಲ ಮನುಷ್ಯರ ಮೆದುಳು ಒಂದೇಯಾಗಿದ್ದು, ಎಲ್ಲರಲ್ಲಿಯೂ ಸಮಾನವಾದ ಶಕ್ತಿವಂತಿಕೆ ಇದೆ. ಆದರೆ ಅದರ ಅರಿವಿನ ಕೊರತೆ ಇದೆ. ಯುವಜನರೇ ಹೆಚ್ಚಿರುವ ಭಾರತದಲ್ಲಿ ಯುವಶಕ್ತಿ ತನ್ನೆಲ್ಲ ಶಕ್ತಿ ಸಾಮರ್ಥ್ಯದೊಂದಿಗೆ ಅಭಿವ್ಯಕ್ತಗೊಳ್ಳುತ್ತಿಲ್ಲ. ತನ್ನನ್ನು ತಾನು ತಿಳಿಯದೇ ಇರುವುದೇ ಯುವ ಸಮುದಾಯದ ದೊಡ್ಡ ಸಮಸ್ಯೆಯಾಗಿದೆ. ಕೀಳರಿಮೆಗಳಿಂದ ಹೊರಬಂದು ತಮ್ಮ ಅಂತರಂಗದ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎಂದು ಹಿರಿಯ ವಿಜ್ಞಾನಿ ಡಾ. ಎಸ್.ಎಂ. ಶಿವಪ್ರಸಾದ ಹೇಳಿದರು.

ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ತರಬೇತಿಗಿಂತ ಸಮಾಜಮುಖಿಯಾದ ದ್ವೇಷರಹಿತ ಪ್ರೀತಿ ತುಂಬಿದ ಎಲ್ಲರೊಳಗೊಂದಾಗಿ ಬದುಕುವ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಆದ್ಯತೆಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ದ್ವೇಷ, ಅಸೂಯೆ, ಹಿಂಸೆಗಳ ರೋಗಗ್ರಸ್ಥ ಸ್ಥಿತಿಯಿಂದ ಮನುಷ್ಯರನ್ನು ಪಾರು ಮಾಡುವ ಶಕ್ತಿಯನ್ನು ಹೊಂದಿವೆ. ಸಾಮಾಜಿಕ ಜವಾಬ್ದಾರಿಯನ್ನು ಕಲಿಸಿಕೊಡುತ್ತವೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ ಯಾಸ್ಮಿನ ಕಿತ್ತೂರ ಬಹುಮಾನ ವಿತರಿಸಿದರು. ಡಾ. ವಿನಯಾ ಜಿ.ನಾಯಕ, ಡಾ. ಚಂದ್ರಶೇಖರ ಲಮಾಣಿ, ಬಸವರಾಜ ಹೂಲಿಕಟ್ಟಿ ಮತ್ತು ಮನೋಹರ ಉಡಚಂಚಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವರ್ಷಾ ಪ್ರಾರ್ಥಿಸಿದರು. ಲಾವಣ್ಯ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಮೃತಾ ಅತಿಥಿಗಳನ್ನು ಪರಿಚಯಿಸಿದರು. ಸರಿತಾ ಮತ್ತು ಗುರುನಾಥ ಕಾರ್ಯಕ್ರಮ ನಿರೂಪಿಸಿದರು. ಶಾರದಾ ವಂದಿಸಿದರು. ಉಮೇಶಗೌಡ ಪಾಟೀಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭ ನಿರ್ವಹಿಸಿದರು.