ಸಾರಾಂಶ
ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಬ್ಬಿಸಿದಂತಹ ಮಹಿಳೆಯಾಗಿದ್ದು, ಸ್ವಾತಂತ್ರ್ಯಕ್ಕಾಗಿ ಮಾಡಿದಂತಹ ಅವರ ಹೋರಾಟ ಇಂದಿನ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಬೇಕು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕೊಪ್ಪಳ
ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಬ್ಬಿಸಿದಂತಹ ಮಹಿಳೆಯಾಗಿದ್ದು, ಸ್ವಾತಂತ್ರ್ಯಕ್ಕಾಗಿ ಮಾಡಿದಂತಹ ಅವರ ಹೋರಾಟ ಇಂದಿನ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದರು. ಚೆನ್ನಮ್ಮ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದಂತ ವೀರ ಮಹಿಳೆ. ಪ್ರತಿಯೊಬ್ಬ ಮಹಿಳೆಯು ಸಮಾಜದ ಮುನ್ನೆಲೆಗೆ ಬರಬೇಕು. ರಾಜಕೀಯವಾಗಿ ಮಹಿಳೆಯರಿಗೆ ಶೇ.33 ಮೀಸಲಾತಿ ದೊರೆತಿದ್ದು, ಅದನ್ನು ಮಹಿಳೆಯರು ಬಳಸಿಕೊಂಡು ಕಿತ್ತೂರು ರಾಣಿ ಚೆನ್ನಮ್ಮ ಅವರಂತೆ ಸಾಧನೆ ಮಾಡಬೇಕು. ಜಗತ್ತನ್ನು ಆಳುವಂತ ಶಕ್ತಿ ಪ್ರತಿಯೊಬ್ಬ ಮಹಿಳೆಗೆ ಇದೆ ಎಂದು ಹೇಳಿದರು.ಶೌರ್ಯ, ಧೈರ್ಯದ ಪ್ರತೀಕವಾದ ಚೆನ್ನಮ್ಮನವರ ವಿದ್ಯೆ ಹಾಗೂ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ಹೋರಾಟದ ಪ್ರತಿಫಲದಿಂದ ಇಂದು ನಾವೆಲ್ಲರೂ ಸ್ವಾತಂತ್ರ್ಯರಾಗಿ ಬದುಕುತ್ತಿದ್ದೇವೆ. ಬ್ರಿಟಿಷರ ವಿರುದ್ಧ ಹೋರಾಡಿದಂತಹ ದೇಶದ ಮೊದಲ ಏಕೈಕ ಮಹಿಳೆ ಇವರಾಗಿದ್ದಾರೆ. ಕಿತ್ತೂರು ಚೆನ್ನಮ್ಮನವರ ಧೈರ್ಯ, ಸಂಸ್ಥಾನ ಆಳುವ ಜಾಣ್ಮೆ ಹಾಗೂ ಹೋರಾಟದ ಛಲವನ್ನು ಎಲ್ಲರೂ ಆದರ್ಶವಾಗಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ಕಟ್ಟುವುದಕ್ಕೆ ಸಾಧ್ಯ ಎಂದು ಹೇಳಿದರು.ಜಿಲ್ಲಾ ಪಂಚಮಶಾಲಿ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ಎಸ್. ಹಂಚಿನಾಳ ವಿಶೇಷ ಉಪನ್ಯಾಸ ನೀಡಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರಿಗೆ ಸೋಲುಣಿಸಿದ ಮಹಿಳೆ. ಕಿತ್ತೂರಿನ ಸ್ವಾಭಿಮಾನ, ಕೆಚ್ಚೆದೆಯ ವೀರರು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದರು ಎಂದು ತಿಳಿಸಿದ ಅವರು, ರಾಣಿ ಚೆನ್ನಮ್ಮರ ಜೀವನ ಚರಿತ್ರೆಯನ್ನು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಲತಾ ಚಿನ್ನೂರು, ಉಮಾ ಪಾಟೀಲ್, ವಿರುಪಾಕ್ಷಪ್ಪ ಮೋರನಾಳ, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಸರ್ವೇಶಗೌಡ ಹಾಗೂ ಚನ್ನಬಸಪ್ಪ ಕೋಟ್ಯಾಳ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್, ಸಮಾಜದ ಮುಖಂಡರಾದ ಬಸನಗೌಡ, ಕರಿಯಪ್ಪ ಮೇಟಿ, ವೀರಬಸಪ್ಪ, ಗವಿಸಿದ್ದಪ್ಪ ಡಂಬಳ, ಕಿಶೋರಿ ಬೂದನೂರ, ಗೀತಾ ಪಾಟೀಲ್, ಕೀರ್ತಿ ಪಾಟೀಲ್, ಪ್ರತಿಮಾ, ಸುಜಾತಾ ಪಟ್ಟಣಶೆಟ್ಟಿ ಕೊಪ್ಪಳ ಗ್ರೇಡ್-2 ತಹಸೀಲ್ದಾರ ಗವಿಸಿದ್ದಪ್ಪ ಮಣ್ಣೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಹಲವರು ಉಪಸ್ಥಿತರಿದ್ದರು. ಹನುಮಂತಪ್ಪ ಕುರಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್ .ಸಿ ಮತ್ತು ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದ ಮೆರವಣಿಗೆಯು ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾಗಿ ಅಂಬೇಡ್ಕರ್ ಸರ್ಕಲ್, ಶಾರದಾ ಟಾಕೀಸ್, ಗಡಿಯಾರ ಕಂಬ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ಜರುಗಿತು.