ಸಾರಾಂಶ
ಸರ್ಕಾರದ ನಿಯಮದಂತೆ ಕೇಂದ್ರದ ಕಾರ್ಡ್ಗಳ ಪ್ರತಿ ಫಲಾನುಭವಿಗಳಿಗೆ ೮ ಕೆಜಿ ಅಕ್ಕಿ ಮತ್ತು ೨ ಕೆಜಿ. ಜೋಳ ವಿತರಿಸುತ್ತಿದ್ದು ರಾಜ್ಯ ಸರ್ಕಾರದ ವ್ಯಾಪ್ತಿಯ ಕಾರ್ಡ್ಗಳಿಗೆ ೧೦ ಕೆಜಿ ಅಕ್ಕಿ ವಿತರಿಸಲಾಗುತ್ತದೆ.
ಕನಕಗಿರಿ:
ಗ್ರಾಮೀಣ ಭಾಗದ ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ಹೊರಗುಳಿಯದಂತೆ ಅನುಷ್ಠಾನಗೊಳಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ನಡೆ ಗ್ರಾಮ ಪಂಚಾಯಿತಿ ಕಡೆ ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಘಟಕದ ಅಧ್ಯಕ್ಷ ಹಜರತ್ ಹುಸೇನ ಮುಜಾವರ ಹೇಳಿದರು.ತಾಲೂಕಿನ ಜೀರಾಳ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ನಡೆ ಗ್ರಾಮ ಪಂಚಾಯಿತಿ ಕಡೆ, ಫಲಾನುಭವಿಗಳ ಜತೆಗೆ ಸಂವಾದ ಹಾಗೂ ಶಿಬಿರ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನ್ನಭಾಗ್ಯದ ಪ್ರಗತಿ ಕುರಿತು ಮಾತನಾಡುವಾಗ ಜೋಳ ವಿತರಣೆಯಾಗಿಲ್ಲ ಎಂಬ ಕೂಗು ಸಾರ್ವಜನಿಕರಿಂದ ಕೇಳಿಬಂದಿತು. ಸರ್ಕಾರದ ನಿಯಮದಂತೆ ಕೇಂದ್ರದ ಕಾರ್ಡ್ಗಳ ಪ್ರತಿ ಫಲಾನುಭವಿಗಳಿಗೆ ೮ ಕೆಜಿ ಅಕ್ಕಿ ಮತ್ತು ೨ ಕೆಜಿ. ಜೋಳ ವಿತರಿಸುತ್ತಿದ್ದು ರಾಜ್ಯ ಸರ್ಕಾರದ ವ್ಯಾಪ್ತಿಯ ಕಾರ್ಡ್ಗಳಿಗೆ ೧೦ ಕೆಜಿ ಅಕ್ಕಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.ಜಿಎಸ್ಟಿ ತೆರಿಗೆ ಭರಿಸುವ, ಅನಾರೋಗ್ಯಕ್ಕೆ ತುತ್ತಾದವರನ್ನು ಹೊರತುಪಡಿಸಿ ಗೃಹಲಕ್ಷ್ಮೀ ಯೋಜನೆ ಎಲ್ಲರಿಗೂ ತಲುಪುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ೮೩೭ ಗ್ರಾಹಕರಿದ್ದು ಈ ಪೈಕಿ ೮೧೬ ಗ್ರಾಹಕರು ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಇನ್ನುಳಿದ ಅರ್ಹರನ್ನು ಯೋಜನಾ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಹಜರತ್ ಸೂಚಿಸಿದರು. ಶಕ್ತಿ ಯೋಜನೆ ಸದ್ಬಳಕೆಯಾಗಲು ಸಮರ್ಪಕ ಬಸ್ ಸಂಚಾರ ಅವಶ್ಯವಾಗಿದೆ. ಯುವನಿಧಿ ಯೋಜನೆಗೆ ಪ್ರಸ್ತಕ ತಿಂಗಳಲ್ಲಿ ೧೪೭ ನೋಂದಣಿ ಆಗಿವೆ ಎಂದು ಅಧಿಕಾರಿಗಳು ವರದಿ ಮಂಡಿಸಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಕಟ್ಟಿಮನಿ, ಕಾರ್ಯದರ್ಶಿ ರೇಣುಕಮ್ಮ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಯಮನೂರಪ್ಪ ಕಲಿಕೇರಿ, ಹನುಮಮ್ಮ ಪಾಟೀಲ್, ಭೀಮೇಶ, ಕರಿಯಪ್ಪ, ಗ್ಯಾನಪ್ಪ, ಜಗದೀಶ ರಾಠೋಡ ಇದ್ದರು.