ಪ್ರಕೃತಿ ವಿಕೋಪದಿಂದಾಗುವ ವಿಪತ್ತುಗಳನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಪ್ರಕೃತಿ ವಿಕೋಪದಿಂದಾಗುವ ವಿಪತ್ತುಗಳನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.ಭಾನುವಾರ ಸಂಜೆ ಹೊಳೆಹೊನ್ನೂರು ಮತ್ತು ಆನವೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಸುರಿದ ಭಾರಿ ಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಅರಹತೊಳಲು, ವಡ್ಡರಹಟ್ಟಿ, ಮಲ್ಲಿಗೇನಹಳ್ಳಿ ಮತ್ತು ಮೈದೊಳಲು ಗ್ರಾಮಗಳಲ್ಲಿ ಪ್ರವಾಸ ಮಾಡಿದರು. ಆಲಿಕಲ್ಲು ಮಳೆಯಿಂದ ನೂರಾರು ಎಕರೆ ಪ್ರದೇಶದಲ್ಲಿ 25 ರಿಂದ 30 ವರ್ಷಗಳಿಂದ ಬೆಳೆಸಿದ್ದ ಲಕ್ಷಾಂತರ ಅಡಿಕೆ ಮರಗಳು ಧರಾಶಾಯಿಯಾಗಿರುವುದು ನೋವಿನ ಸಂಗತಿ. ಪ್ರಕೃತಿ ವಿಕೋಪದಂತಹ ವಿಪತ್ತುಗಳು ಅನಿರೀಕ್ಷಿತವಾಗಿ ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕು ಎಂದರು.ಸದ್ಯದ ಮಾಹಿತಿ ಪ್ರಕಾರ ಈ ಭಾಗದ 36 ಹಳ್ಳಿಗಳಲ್ಲಿ ಒಂದೇ ರೀತಿಯ ಹಾನಿ ಸಂಭವಿಸಿರುವುದು ಕಂಡು ಬಂದಿದೆ. ಅಧಿಕಾರಿಗಳು ಯಾವುದೇ ತಾರತಮ್ಯ ಮಾಡದೆ ನಿಖರವಾದ ಮಾಹಿತಿಯನ್ನು ಸಂಗ್ರಹಿಕೊಂಡು ಸಂತ್ರಸ್ತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಕೊಡಿಸಬೇಕು ಎಂದು ಹೇಳಿದರು. ಒಂದು ವೇಳೆ ಯಾವುದೇ ಮನೆಯು ಹಾಳಾಗಿದ್ದು, ಸಂತ್ರಸ್ತರು ರಿಪೇರಿ ಮಾಡಿಕೊಂಡಿದ್ದರೆ ಅದನ್ನೂ ಕೂಡ ಪರಿಗಣಿಸಿ ಅಂತವರಿಗೂ ಪರಿಹಾರ ದೊರಕಿಸಿಕೊಡಬೇಕು ಎಂದರು.
ಅರತೊಳಲು ವಡ್ಡರಹಟ್ಟಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಖಾತೆ ಇಲ್ಲ ಎಂದು ಸ್ಥಳೀಯರು ಸಚಿವರ ಗಮನಕ್ಕೆ ತಂದರು. ಆಗ ಸಚಿವರು ಜೊತೆಯಲ್ಲಿಯೇ ಇದ್ದ ಜಿಪಂ ಸಿಇಒ ಹಾಗೂ ತಹಶಿಲ್ದಾರರು ಈ ಬಗ್ಗೆ ಕೂಡಲೇ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಸೂಚಿಸಿದರು.ಬರುವ ತಿಂಗಳ ಒಂದನೇ ತಾರೀಗೆ ಜಿಲ್ಲೆಗೆ ಕಂದಾಯ ಸಚಿವರು ಬರುವ ನಿರೀಕ್ಷೆ ಇದೆ. ಸಾಧ್ಯವಾದರೆ ಅವರೂ ಭೇಟಿ ನೀಡುವರು. ಅಷ್ಟರಲ್ಲಿ ನಾವುಗಳು ಕೂಡ ಬೆಳೆ ಹಾನಿಯ ಬಗ್ಗೆ ಸಮಗ್ರ ವರದಿ ತೆಗೆದುಕೊಂಡು, ಎಷ್ಟು ಮೌಲ್ಯದ ಹಾನಿಯಾಗಿದೆ ಎಂಬ ನಿಖರ ಮಾಹಿತಿ ಪಡೆದು ಕಂದಾಯ ಸಚಿವರ ಗಮನಕ್ಕೆ ತರಲಾಗುವುದು. ಜೊತೆಗೆ ಬರುವ ಅಧಿವೇಶನದಲ್ಲಿ ರಾಜ್ಯದ ಗಮನ ಸೆಳೆಯಲಾಗುವುದು ಎಂದರು.
ಬೆಳೆಹಾನಿ ಮತ್ತು ಮನೆಹಾನಿ ಕುರಿತು ತೋಟಗಾರಿ ಮತ್ತು ಕಂದಾಯ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿ ಸುಇಕ್ತವಾದ ಪರಿಹಾರವನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಿಪಂ ಸಿಇಒ ಎನ್.ಹೇಮಂತ್, ತಹಸೀಲ್ದಾರ್ ಪರಸಪ್ಪ ಕುರುಬ, ಅಪರ ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು, ಶ್ರೀನಿವಾಸ್ ಕರಿಯಣ್ಣ, ಸಿ.ಹನುಮಂತು, ಆರ್.ಉಮೇಶ್, ಎಸ್.ಪಿ.ಜಯದೇವಪ್ಪ, ಕೆ.ಆರ್.ಶ್ರೀಧರ್, ಎಚ್.ಜಿ.ಮಲ್ಲಯ್ಯ, ಎಚ್.ಎನ್.ನಾಗರಾಜ್ ಇತರರು ಇದ್ದರು.