ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡದ ಮೊಟ್ಟಮೊದಲ ಶಾಸನದಿಂದ ಹಿಡಿದು ಇಂದು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು, ಅಷ್ಟ ದಿಗ್ಗಜರು ಜ್ಞಾನಪೀಠ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕನ್ನಡದ ಅಭಿಮಾನ ಮೂಡಿಸಿದ ಪಾವನ ಪುಣ್ಯಭೂಮಿ ನಮ್ಮದು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡದ ಮೊಟ್ಟಮೊದಲ ಶಾಸನದಿಂದ ಹಿಡಿದು ಇಂದು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು, ಅಷ್ಟ ದಿಗ್ಗಜರು ಜ್ಞಾನಪೀಠ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕನ್ನಡದ ಅಭಿಮಾನ ಮೂಡಿಸಿದ ಪಾವನ ಪುಣ್ಯಭೂಮಿ ನಮ್ಮದು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅಭಿಪ್ರಾಯಪಟ್ಟರು.ತಾಲೂಕಿನ ಹಿಟ್ಟಿನಹಳ್ಳಿಯ ಶಿವಮೂರ್ತಿ ಸ್ವಾಮಿ ಚರಂತಿಮಠ ಪ್ರೌಢಶಾಲೆಯ ಆವರಣದಲ್ಲಿ ಜರುಗಿದ ವಿಜಯಪುರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಳಗನ್ನಡ, ನಡುಗನ್ನಡ ,ಹೊಸಗನ್ನಡದ ಮೂಲಕ ವಚನ ಸಾಹಿತ್ಯ, ದಾಸ ಸಾಹಿತ್ಯದಲ್ಲಿ ಕ್ರಮವಾಗಿ ಅಣ್ಣ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುಗಳು ಹಾಗೂ ಪುರಂದರದಾಸರು, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮಹಾತ್ಮರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಾಯಿ ಕನ್ನಡಾಂಬೆಯ ಕೀರ್ತಿ ಹೆಚ್ಚಿಸೋಣ ಎಂದರು. ನಿಡಸೋಸಿ ಮಠದ ಜಗದ್ಗುರು ದುರದುಂಡೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಆಚಾರಕ್ಕರಸನಾಗು ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿಯಾಗು ನಾನು ಕಂದ ಜ್ಯೋತಿಯೇ ಆಗು ಜಗಕೆಲ್ಲ ಎಂಬಂತೆ ಮಕ್ಕಳಲ್ಲಿ ಭಾಷೆಯ ಬಗ್ಗೆ ಅಭಿಮಾನ
ಮೂಡಿಸುವ ಕಾರ್ಯ ಪಾಲಕರು, ಶಿಕ್ಷಕರು, ಸಮಾಜ ಮಾಡಿ ಕನ್ನಡಾಂಬೆಯ ಋಣ ತೀರಿಸೋಣ ಎಂದರು.ಹೊನ್ನಳ್ಳಿಯ ಶಿವಶರಣೆ ನಿಂಬೆಕ್ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಡಿ.ಕುಮಾನಿ ಮಾತನಾಡಿ, ಅಕ್ಷರ ಜಾತ್ರೆ ಬಹು ವಿಜೃಂಭಣೆಯಿಂದ ಜರುಗಿದ್ದು, ತುಂಬಾ ಸಂತೋಷದ ಸಂಗತಿ ಎಂದರು.ಸಮ್ಮೇಳನದ ಸರ್ವಾಧ್ಯಕ್ಷ ಸೋಮಲಿಂಗ ಗೆಣ್ಣೂರ ಸರ್ವಾಧ್ಯಕ್ಷ ಭಾಷಣ ಮಾಡಿ, ಇಂಗಳೇಶ್ವರದ ಜೈನಕವಿ ಅಗ್ಗಳನು ಚಂದ್ರಪ್ರಭಾ ಪುರಾಣ ಎಂಬ ಧಾರ್ಮಿಕ ಕಾವ್ಯ ಕೃತಿಯನ್ನು ಹಾಗೂ ಮೊದಲ ವೀರಶೈವ ಕವಿ ಎನಿಸಿಕೊಂಡಗೂಳಿಯ ಕೇಶಿರಾಜನು ಷಡಕ್ಷರ ಮಂತ್ರ ಮಹಿಮೆ ಎಂಬ ಗ್ರಂಥ ರಚಿಸಿದ್ದು ಇವು ವಿಜಯಪುರ ಜಿಲ್ಲೆಯ ಸಾಹಿತ್ಯದ ಕೀರ್ತಿಯನ್ನು ಹೆಚ್ಚಿಸಿವೆ. 12ನೇ ಶತಮಾನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣಾ ಆಂದೋಲನವಾಗಿ ಹೊರಹೊಮ್ಮಿದ ವಚನ ಸಾಹಿತ್ಯವು ಸಾಹಿತ್ಯ ಜಗತ್ತಿಗೆ ನೀಡಿದ ಅತಿ ಶ್ರೇಷ್ಠ ಕೊಡುಗೆಯಾಗಿದೆ. ವಿಜಯಪುರ ಜಿಲ್ಲೆ ಮಕ್ಕಳ ಸಾಹಿತ್ಯದ ತವರೂರಾಗಿದ್ದು, ಇಲ್ಲಿ ಮಕ್ಕಳ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ, ಮಹಿಳಾ ಸಾಹಿತ್ಯ, ಸಂಶೋಧನಾ ಸಾಹಿತ್ಯ, ಅಭಿನಂದನಾ ಸಾಹಿತ್ಯ, ಕಥೆ ಮತ್ತು ಕಾದಂಬರಿ, ಸೃಜನಶೀಲ ಸಾಹಿತ್ಯ, ಪತ್ರಿಕಾ ಸಾಹಿತ್ಯ, ರಂಗಭೂಮಿ, ತತ್ವಪದಗಳ ಸಾಹಿತ್ಯ, ಹೀಗೆ ನಾನಾ ಕ್ಷೇತ್ರಗಳಲ್ಲಿ ಜಿಲ್ಲೆಯ ಸಾಧಕರು ಸಾಧನೆ ಮಾಡಿದ ಸಾಹಿತಿಗಳ ಕುರಿತು ಮಾತನಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಟ್ಟಿನಹಳ್ಳಿ, ಉತ್ನಾಳ, ಹಾಗೂ ಕೃಷಿ ವಿವಿ ಸಮಸ್ತ ಸಿಬ್ಬಂದಿ ತನು, ಮನ, ಧನವನ್ನು ನೀಡುವ ಮೂಲಕ ಕಳೆದ ಒಂದು ತಿಂಗಳುಗಳಿಂದ ದುಡಿದು ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಸರ್ವರನ್ನು ಅಭಿಮಾನದಿಂದ ಅಭಿನಂದಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಬಾಬು ರಾಠೋಡ, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಕೃಷಿ ವಿವಿ ಪ್ರಾಧ್ಯಾಪಕ ರಾಜಕುಮಾರ ಜೊಲ್ಲೆ, ಬಸವರಾಜ ಪಡಶೆಟ್ಟಿಮಾತನಾಡಿದರು.ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಸ್ವಾಗತಿಸಿ ಗೌರವಿಸಿದರು. ತಹಸೀಲ್ದಾರ್ ಪ್ರಶಾಂತ ಚನಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಡಾ.ಆನಂದ ಕುಲಕರ್ಣಿ ಆಶಯ ನುಡಿ ಹಂಚಿಕೊಂಡರು. ಮೋಹನ ಕಟ್ಟಿಮನಿ ನಿರೂಪಿಸಿದರು. ಮಹಾದೇವಿ ತೆಲಗಿ ಹಾಗೂ ಮಮತಾಜ್ ನಿರ್ವಹಿಸಿದರು. ವಿಜಯಲಕ್ಷ್ಮಿ ಹಳಕಟ್ಟಿ ವಂದಿಸಿದರು.
