ಸಾರಾಂಶ
ಕಲಬುರಗಿ : ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಖರ್ಗೆ ಬೆಂಬಲಿಗರು ಚಿತ್ತಾಪುರದಲ್ಲಿ ಮೇಲ್ಮನೆ ವಿರೋಧ ಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರನ್ನು ಗೆಸ್ಟ್ಹೌಸ್ನಲ್ಲಿ 5 ತಾಸು ಗೃಹ ಬಂಧನದಲ್ಲಿ ಇರಿಸಿದ್ದನ್ನು ಖಂಡಿಸಿ ಶನಿವಾರ ಬಿಜೆಪಿಯಿಂದ ಕಲಬುರಗಿ ಚಲೋ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ಬಹಿರಂಗ ವೇದಿಕೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು. ಛಲವಾದಿ ಅವರನ್ನು ಗೃಹಬಂಧನದಲ್ಲಿರಿಸಿ ತಿರಂಗಾ ಯಾತ್ರೆಯಲ್ಲಿ ಅವರು ಪಾಲ್ಗೊಳ್ಳದಂತೆ ಮಾಡುವಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರವಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರು, ‘ಖರ್ಗೆ ಹಟಾವೋ’ಗೆ ಕರೆ ನೀಡಿದರು.ಜಿಲ್ಲೆಯಲ್ಲಿ ಖರ್ಗೆ ದೌರ್ಜನ್ಯಹೆಚ್ಚಿದೆ: ರವಿಕುಮಾರ್
ಮೇಲ್ಮನೆ ಬಿಜೆಪಿ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ದೌರ್ಜನ್ಯ ಹೆಚ್ಚಾಗಿದ್ದು, ಪ್ರಜಾಪ್ರಭುತ್ವ ಕಗ್ಗೊಲೆ ಆಗುತ್ತಿದೆ. ಇದನ್ನು ಖಂಡಿಸಿ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಿಯಾಂಕ್ ಅವರ ದೌರ್ಜನ್ಯ, ಅಹಂಕಾರದ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ. ಒಬ್ಬ ದಲಿತ ನಾಯಕನಿಗೆ ರಕ್ಷಣೆ ಒದಗಿಸುವಲ್ಲಿ ಚಿತ್ತಾಪುರದ ಪೊಲೀಸರು ಸೋತಿದ್ದಾರೆ. ಖರ್ಗೆ ನಿರ್ದೆಶನ, ನೀತಿಯಂತೆಯೇ ನಮ್ಮ ವಿಪಕ್ಷ ನಾಯಕರಿಗೆ ಅವಮಾನ ಮಾಡಲಾಗಿದೆ ಎಂದು ಟೀಕಿಸಿದರು.ರಾಗಾ, ಖರ್ಗೆ ಪಪ್ಪು: ಶ್ರೀರಾಮುಲು
ಮಾಜಿ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿ, ಕೇಂದ್ರದಲ್ಲಿ ರಾಹುಲ್ ಗಾಂಧಿ ಪಪ್ಪು ಎಂದು ಗುರುತಿಸಿಕೊಂಡಿದ್ದರೆ ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಪಪ್ಪು. ಈ ಇಬ್ಬರೂ ಪಪ್ಪುಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ಎಂದರು.
ದಿನ ಬೆಳಗಾದರೆ ಸಾಕು ನೀವು ಪ್ರಧಾನಿ ಮೋದಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತೀರಿ. ಪ್ರಧಾನಿ ಎಂಬ ಗೌರವ ಸಹ ಇಲ್ಲದೆ ಅವರನ್ನು ವಿಷಸರ್ಪ, ಕೊಲೆಗಾರ ಎಂದೆಲ್ಲಾ ಟೀಕಿಸಿದ್ದನ್ನು ಮರೆತಂತಿದೆ. ಆ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದ್ರೆ ನಿಮ್ಮನ್ನು ಓಡಾಡಲು ಬಿಡುತ್ತಿರಲಿಲ್ಲ ಎಂದರು.ಛಲವಾದಿಗೆ ಗೃಹಬಂಧನ ಖಂಡನೀಯ: ಕಾರಜೋಳ
ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕೇವಲ ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸಿದ ಕಾರಣಕ್ಕೆ ಚಲವಾದಿ ನಾರಾಯಣಸ್ವಾಮಿ ಅವರಿಗೆ ದಿಗ್ಭಂದನ ಹಾಕಿದ್ದು ಖಂಡನಾರ್ಹ ಎಂದರು.
ಕಾಂಗ್ರೆಸ್ನವರಿಗೆ ಸಂಸ್ಕೃತಿ ಇಲ್ಲ ಎನ್ನುವುದನ್ನು ಒತ್ತಿ ಹೇಳಬೇಕಾಗಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಮೋದಿಗೆ ವಿಷಸರ್ಪ ಎನ್ನುತ್ತಾರೆ. ರಾಹುಲ್ ಗಾಂಧಿ ಮೋದಿ ಚೋರ್ ಚೌಕಿದಾರ್ ಎಂದಿದ್ದರು. ಪ್ರಿಯಾಂಕಾ ಗಾಂಧಿ ಮೋದಿಯವರನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆ. ಇವರಿಗೆ ಯಾವ ಸಂಸ್ಕೃತಿ ಇದೆ ಎಂಬುದನ್ನು ಮಲ್ಲಿಕಾರ್ಜುನ ಖರ್ಗೆಯವರೇ ಹೇಳಬೇಕು ಎಂದರು.
ಈಗ ಎಲೆಕ್ಷನ್ ನಡೆದರೆ ಬಿಜೆಪಿಗೆ 150-160 ಸ್ಥಾನ: ವಿಜಯೇಂದ್ರ
ಗ್ಯಾರಂಟಿ ಜಾರಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಹೀಗಾಗಿ, ಜನ ಬೇಸರಗೊಂಡಿದ್ದಾರೆ. ರಾಜ್ಯ ವಿಧಾನಸಭೆಗೆ ಈಗ ಚುನಾವಣೆ ನಡೆದರೆ ಬಿಜೆಪಿ 150-160 ಸ್ಥಾನ ಗೆಲ್ಲುತ್ತೆ ಎಂದು ಖಾಸಗಿ ಸಮೀಕ್ಷೆಯೊಂದು ಹೇಳಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಛಲವಾದಿ ನಾರಾಯಣ ಸ್ವಾಮಿಯವರ ಗೃಹಬಂಧನ ಖಂಡಿಸಿ, ಬಿಜೆಪಿ ಹಮ್ಮಿಕೊಂಡಿದ್ದ ಕಲಬುರಗಿ ಚಲೋದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆಪರೇಷನ್ ಸಿಂದೂರದ ಬಗ್ಗೆ ಇಡೀ ಜಗತ್ತೆ ಮೆಚ್ಚಿದೆ. ಆದರೆ, ಕಾಂಗ್ರೆಸ್ ನವರು ಮಾತ್ರ ಅಪಸ್ವರದ ಬಗ್ಗೆ ಮಾತನಾಡುತ್ತಿದ್ದಾರೆ. ‘ನಮ್ಮ ಪಾಕಿಸ್ತಾನ’ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಹೇಳ್ತಾರೆ. ಇದನ್ನು ಪ್ರಶ್ನೆ ಮಾಡಿದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಈ ರೀತಿ ಅವಮಾನ ಮಾಡೋದಾ? ಎಂದು ಅವರು ಪ್ರಶ್ನಿಸಿದರು. ಅಧಿಕಾರ ಶಾಶ್ವತ ಅಲ್ಲ ಪ್ರಿಯಾಂಕ್ ಖರ್ಗೆಯವರೇ, ನಿಮ್ಮ ದರ್ಪ, ಸೊಕ್ಕು ಮುರಿಯುವ ಕೆಲಸವನ್ನು ಈ ಭಾಗದ ಜನ ಮಾಡ್ತಾರೆ. ನಿಮ್ಮ ತಂದೆ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅಂತಹ ನಾಯಕನ ಮಗನಾಗಿ ನಿಮ್ಮ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಕಿಡಿ ಕಾರಿದರು.ನನಗೆ ಪ್ರಿಯಾಂಕ್ ಖರ್ಗೆ ಬಗ್ಗೆ ಮರುಕವಿದೆ, ಅಭಿವೃದ್ಧಿಗೆಂದು ಜನ ಇವರನ್ನು ಗೆಲ್ಲಿಸಿದ್ರೆ ಇವರು ಬರೀ ಟೀಕೆಯಲ್ಲೇ ಕಾಲಹರಣ ಮಾಡ್ತಿದ್ದಾರೆ. ಇಲ್ಲಿನ ಪಿಯುಸಿ, ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡಿದರೇನೆ ಇವರ ಪ್ರಗತಿಪರ ಚಿಂತನೆ ಅರ್ಥವಾಗುತ್ತದೆ ಎಂದು ಲೇವಡಿ ಮಾಡಿದರು.