ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಬಾಬಾಸಾಹೇಬರು ಸದೃಢವಾಗಿ ಕಟ್ಟಿಕೊಟ್ಟಿರುವ ಭಾರತವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿ ಯುವಜನರು ಸಂಕಲ್ಪ ಮಾಡಬೇಕಾಗಿದೆ. ಬಾಬಾಸಾಹೇಬರು ಹಲವು ದಾಖಲೆಯ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ದೇಶದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಸ್ತ್ರೀ ಸ್ವಾತಂತ್ರ್ಯ ಸಮಾನತೆ ತಂದುಕೊಟ್ಟ ಮಹಾನ್ ಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರ ಇಂದಿನ ವಿದ್ಯಾರ್ಥಿ ಯುವ ಜನರಿಗೆ ಆದರ್ಶ ದೀಪವಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಾಬಾಸಾಹೇಬರು ಸದೃಢವಾಗಿ ಕಟ್ಟಿಕೊಟ್ಟಿರುವ ಭಾರತವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿ ಯುವಜನರು ಸಂಕಲ್ಪ ಮಾಡಬೇಕಾಗಿದೆ. ಬಾಬಾಸಾಹೇಬರು ಹಲವು ದಾಖಲೆಯ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ದೇಶದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಸ್ತ್ರೀ ಸ್ವಾತಂತ್ರ್ಯ ಸಮಾನತೆ ತಂದುಕೊಟ್ಟ ಮಹಾನ್ ಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರ ಇಂದಿನ ವಿದ್ಯಾರ್ಥಿ ಯುವ ಜನರಿಗೆ ಆದರ್ಶ ದೀಪವಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರ ಹೇಳಿದರು.ನಗರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ್ದ ಅಂಬೇಡ್ಕರ್ ರ ೬೮ ನೇ ಮಹಾ ಪರಿನಿರ್ವಾಣ ಪ್ರಯುಕ್ತ ಬೃಹತ್ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಭಾರತದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಕಾರಣ. ಸಂವಿಧಾನ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕು. ಜೊತೆಗೆ ಸಂವಿಧಾನ ರಕ್ಷಣೆಗೆ ಶಪತ ಮಾಡಬೇಕು ಎಂದು ಹೇಳಿದರು. ದೇಶಕ್ಕೆ ಸಂವಿಧಾನ ಒದಗಿಸದಿದ್ದರೆ ಶೋಷಿತ ಸಮುದಾಯಗಳು ಆರ್ಥಿಕವಾಗಿ ಸಬಲ ರಾಗುತ್ತಿರಲಿಲ್ಲ. ಸಂವಿಧಾನದಿಂದ ಶೋಷಿತ ಸಮುದಾಯಗಳು ಎಲ್ಲಾ ರಂಗದಲ್ಲಿ ಅವಕಾಶಗಳು ಸಿಕ್ಕಿರುವುದು ಸಂವಿಧಾನದಿಂದ ಮಾತ್ರ ಎಂದು ಹೇಳಿದರು. ಸಂವಿಧಾನವು ನಮ್ಮ ದೇಶದ ಪವಿತ್ರ ಗ್ರಂಥವಾಗಿದೆ. ಅದನ್ನು ಇಂದಿನ ವಿದ್ಯಾರ್ಥಿ ಮತ್ತು ಯುವಕರು ಅರ್ಥೈಸಿಕೊಂಡು ಮೈಗೂಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಿದೆ. ದೇಶದಲ್ಲಿ ಸಂವಿಧಾನ ವಿರೋಧಿ ಹೇಳಿಕೆಯನ್ನು ದಲಿತ ವಿದ್ಯಾರ್ಥಿ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಸಂವಿಧಾನ ವಿರೋಧಿ ಹೇಳಿಕೆ ನೀಡುವವರು ಭಾರತ ದೇಶದಲ್ಲಿ ಇರಲು ಅವಕಾಶವಿಲ್ಲ ಎಂದರು.ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ, ನ್ಯಾಯವಾದಿ ವಿದ್ಯಾವತಿ ಅಂಕಲಿಗಿ, ಫಾ.ಟಿಯೋಲ್ ಮಾಚದೊ, ಸಂತೋಷ ಪೂಜಾರಿ, ರೈತ ಸಂಘಟನೆ ಜಿಲ್ಲಾ ಮುಖಂಡ ಸಂಗಮೇಶ ಸಗರ, ಜಿಲ್ಲಾ ಮುಖಂಡ ಅಕ್ಷಯ ಅಜಮನಿ, ಮಾದೇಶ ಛಲವಾದಿ ಮುಂತಾದವರು ಉಪಸ್ಥಿತರಿದ್ದರು.ನಗರದ ಶಿವಾಜಿ ವೃತ್ತದಿಂದ ಆರಂಭಗೊಂಡ ಕ್ಯಾಂಡಲ್ ಮಾರ್ಚ್ ಅಂಬೇಡ್ಕರ್ ವೃತ್ತದ ವರೆಗೂ ಸಾಗಿತ್ತು. ಕ್ಯಾಂಡಲ್ ಮಾರ್ಚನಲ್ಲಿ ಸಾವಿರಾರು ವಿದ್ಯಾರ್ಥಿ ಯುವ ಜನರು ಅಲ್ಲದೇ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು ಭಾಗವಹಿಸಿ, ಜೈ ಭೀಮ್ ಘೋಷಣೆ ಕೂಗುತ್ತ ಉತ್ಸಾಹದಿಂದ ಪಾಲ್ಗೊಂಡಿದ್ದರು.