ಜಾನಪದ ಸೊಗಡು ಮತ್ತೆ ಮೈದುಂಬಿಕೊಳ್ಳಲಿ: ಮಿಮಿಕ್ರಿ ಗೋಪಿ

| Published : May 26 2024, 01:34 AM IST

ಜಾನಪದ ಸೊಗಡು ಮತ್ತೆ ಮೈದುಂಬಿಕೊಳ್ಳಲಿ: ಮಿಮಿಕ್ರಿ ಗೋಪಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಜಗತ್ತಿನ ಕಾಲೇಜು ಶಿಕ್ಷಣ ವ್ಯವಸ್ಥೆಯ ದಿನಗಳಲ್ಲೂ ದೇಶಿ ಪರಂಪರೆ, ಪಾರಂಪರಿಕ ಪದ್ದತಿಯನ್ನು ಉಳಿಸಿ ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಮೂಲಕ ಮರೆಯಾಗುತ್ತಿರುವ ಜಾನಪದ ಸೊಗಡು ಮತ್ತೆ ಮೈದುಂಬಿಕೊಳ್ಳಬೇಕೆಂದು ಹಾಸ್ಯನಟ ಮಿಮಿಕ್ರಿ ಗೋಪಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಆಧುನಿಕ ಜಗತ್ತಿನ ಕಾಲೇಜು ಶಿಕ್ಷಣ ವ್ಯವಸ್ಥೆಯ ದಿನಗಳಲ್ಲೂ ದೇಶಿ ಪರಂಪರೆ, ಪಾರಂಪರಿಕ ಪದ್ದತಿಯನ್ನು ಉಳಿಸಿ ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಮೂಲಕ ಮರೆಯಾಗುತ್ತಿರುವ ಜಾನಪದ ಸೊಗಡು ಮತ್ತೆ ಮೈದುಂಬಿಕೊಳ್ಳಬೇಕೆಂದು ಹಾಸ್ಯನಟ ಮಿಮಿಕ್ರಿ ಗೋಪಿ ಹೇಳಿದರು. ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ನಡೆದ ಪಿಇಎಸ್ ಉತ್ಸವದ ಪಾರಂಪರಿಕ ದಿನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಜಾನಪದವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದರು. ಇತ್ತೀಚಿನ ದಿನಗಳಲ್ಲಿ ಮನುಷ್ಯ ನಗುವುದನ್ನೇ ಮರೆತು ಬದುಕಿನ ಜಂಜಾಟದಲ್ಲಿ ಓಡುತ್ತಿದ್ದಾನೆ, ಉತ್ತಮ ಆರೋಗ್ಯ, ಗುಣಮಟ್ಟದ ಆಹಾರ ಬಿಟ್ಟು, ಫಾಸ್ಟ್‌ಫುಡ್, ಜಂಗ್‌ಫುಡ್‌ನತ್ತ ವ್ಯಾಮೋಹ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಇದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾನೆ. ದೇಶೀಯ ಆಹಾರ ಪದ್ಧತಿ ಆರೋಗ್ಯಕ್ಕೆ ಒಳ್ಳೆಯದು ಎಂದು ನುಡಿದರು.ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಹೆಚ್ಚು ಸಮಯ ನೀಡಿದ್ದಾರೆ. ಉನ್ನತ ಶಿಕ್ಷಣ, ಪದವಿ, ಸ್ಪರ್ಧಾತ್ಮಕ ಸ್ಪರ್ಧೆಗಳ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಿ, ಐಎಎಸ್, ಕೆಎಎಸ್, ಐಪಿಎಸ್‌ನಂತಹ ದೊಡ್ಡ ದೊಡ್ಡ ಹುದ್ದೆಗಳ ಪಡೆಯಲು ಸಮಯವನ್ನು ಮೀಸಲಿಟ್ಟು ಸಾಸಿ ಎಂದು ಸಲಹೆ ನೀಡಿದರು.ಬಳಿಕ ವಿವಿಧ ರಾಜಕಾರಣಿ-ಸಿನಿಮಾ ನಾಯಕನಟರ ಧ್ವನಿಯಲ್ಲಿ ಮಾತನಾಡಿ ರಂಜನೆ ನೀಡಿ, ಉತ್ತಮ ಸಂದೇಶಗಳನ್ನು ನೀಡಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಹೆಬ್ಬಾಗಿಲಿನಿಂದ ಎತ್ತಿನಗಾಡಿಯಲ್ಲಿ ಗಣ್ಯರನ್ನು ತಮಟೆ, ನಗಾರಿ, ಪೂಜಾಕುಣಿತ, ವೀರಗಾಸೆ ಕುಣಿತದೊಂದಿಗೆ ಮೆರವಣಿಗೆ ಮೂಲಕ ವೇದಿಕೆಯತ್ತ ಕರತಂದು ರಾಶಿಪೂಜೆ ಸಲ್ಲಿಸಿದರು. ಜನತಾ ಶಿಕ್ಷಣ ಟ್ರಸ್ಟ್‌ನ ಜಂಟಿಕಾರ್ಯದರ್ಶಿ ಕೆ.ಆರ್.ದಯಾನಂದ, ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಂಜುನಾಥ್, ರೂಪದರ್ಶಿ ಐಶ್ವರ್ಯಗೌಡ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ವಿ.ಸವಿತಾ, ಪ್ರೊ.ಜಯರಾಂ, ಪ್ರೊ.ಮರಿಯಯ್ಯ ಸೇರಿದಂತೆ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಹಾಜರಿದ್ದರು.