ಬಿಜೆಪಿ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಲಿ: ಚಂದ್ರಶೇಖರಗೌಡ ಪಾಟೀಲ್ ಹಲಗೇರಿ

| Published : Aug 31 2024, 01:30 AM IST

ಸಾರಾಂಶ

ಸಂಡೂರು ಪಟ್ಟಣದ ಕಾರ್ತಿಕೇಯ ಎಂ. ಘೋರ್ಪಡೆ ನಿವಾಸದ ಆವರಣದಲ್ಲಿ ಶುಕ್ರವಾರ ಬಿಜೆಪಿ ಸಂಡೂರು ಮಂಡಲದ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಲಾಯಿತು.

ಸಂಡೂರು: ರಾಷ್ಟ್ರಮಟ್ಟದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸೆ. ೨ರಂದು ಪ್ರಾರಂಭವಾಗಲಿದೆ. ಎಲ್ಲರೂ ೮೮೦೦೦೦೨೦೨೪ ಸಂಖೆಗೆ ಮಿಸ್ಡ್ ಕಾಲ್ ಮಾಡಿ ಬಿಜೆಪಿ ಸದಸ್ಯತ್ವ ಪಡೆಯಬಹುದಾಗಿದೆ. ಈ ಅಭಿಯಾನಕ್ಕೆ ಸೆ. ೨ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ವಿಭಾಗೀಯ ಪ್ರಭಾರಿಗಳಾದ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ ಹೇಳಿದರು.

ಪಟ್ಟಣದ ಕಾರ್ತಿಕೇಯ ಎಂ. ಘೋರ್ಪಡೆ ಅವರ ನಿವಾಸದ ಆವರಣದಲ್ಲಿ ಶುಕ್ರವಾರ ಬಿಜೆಪಿ ಸಂಡೂರು ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಸರ್ವವ್ಯಾಪಿ ಪಕ್ಷ. ಜನರಿಂದ ಪ್ರಾಥಮಿಕ ಶುಲ್ಕ ತೆಗೆದುಕೊಳ್ಳದೇ ಉಚಿತವಾಗಿ ಪಕ್ಷದ ಸದಸ್ಯತ್ವ ನೀಡಬೇಕು ಎಂಬುದು ಪಕ್ಷದ ಮುಖಂಡರ ಆಶಯವಾಗಿದೆ. ಕ್ಷೇತ್ರದಲ್ಲಿ ಪ್ರತಿಯೊಬ್ಬ ಸದಸ್ಯರು ತಲಾ ೧೦೦ ಸದಸ್ಯರನ್ನು ಮಾಡಬೇಕಿದೆ. ಪ್ರತಿಯೊಬ್ಬರು ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದರು.

ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ ಮಾತನಾಡಿ, ೨೦೧೯ರಲ್ಲಿ ೩೫೦೦೦ ಸದಸ್ಯರ ನೋಂದಣಿಯಾಗಿದೆ. ಇಡೀ ದೇಶದಾದ್ಯಂತ ಸದಸ್ಯತ್ವ ನೋಂದಣಿ ಅಭಿಯಾನ ನಡೆದಿದೆ. ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಯುಕ್ತ ಪ್ರತಿ ಬೂತಿನಲ್ಲಿ ೩೦೦ ಸದಸ್ಯರನ್ನು ನೋಂದಾಯಿಸಬೇಕಿದೆ. ಈಗಾಗಲೆ ಕ್ಷೇತ್ರದಲ್ಲಿ ೭೫೦೦೦ ಬಿಜೆಪಿ ಮತಗಳಿವೆ. ಈ ಸಂಖೆಯನ್ನು ಸದಸ್ಯತ್ವ ಅಭಿಯಾನದ ಮೂಲಕ ಹೆಚ್ಚಿಸಬೇಕಿದೆ. ಇದು ಮುಂದಿನ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ. ಎಲ್ಲರೂ ಒಟ್ಟಾಗಿ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದರು.

ಪಕ್ಷದ ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸೋಮನಗೌಡ, ಕಾರ್ಯದರ್ಶಿ ಕುಮಾರ್ ನಾಯಕ್, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಎನ್. ರಾಮಕೃಷ್ಣ, ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಎಲ್. ಪುರುಷೋತ್ತಮ್, ಮಂಡಲ ಪ್ರಧಾನ ಕಾರ್ಯದರ್ಶಿ ರಘುನಾಥ್ ಆರ್.ಟಿ., ಉಪಾಧ್ಯಕ್ಷ ಎನ್.ಟಿ.ಆರ್. ನರಸಿಂಹ, ಪ್ರಭುಗೌಡ, ಈಶ್ವರ ಒಡೆಯರ್, ಕಾರ್ಯಾಲಯದ ಕಾರ್ಯದರ್ಶಿ ದರೋಜಿ ರಮೇಶ್, ಕಾರ್ಯಕಾರಣಿ ಸದಸ್ಯ ರವಿಕಾಂತ್ ಭೋಸ್ಲೆ, ಪುರಸಭೆ ಸದಸ್ಯರಾದ ಯರೆಮ್ಮ, ಆಶಾನರಸಿಂಹ, ಕೆ. ಹರೀಶ್, ದುರ್ಗಮ್ಮ ರಮೇಶ್, ಲಕ್ಷ್ಮಿ, ರತ್ನಮ್ಮ, ಉಪ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು, ಹಲವು ಮುಖಂಡರು ಉಪಸ್ಥಿತರಿದ್ದರು.