ಧಾರವಾಡ:

ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿಯ ಭವ್ಯ ಪರಂಪರೆ ಪರಿಚಯವಾಗಬೇಕಾದರೆ ಅಂದಿನ ನಾಟಕಗಳ ಸಂಗೀತ, ಮನ ತಣಿಸುವ ಹಾಡುಗಳು, ಮಧ್ಯೆ ಮಧ್ಯೆ ಕೇಳಿ ಬರುತ್ತಿದ್ದ ಸಂವಾದಿನಿ ಪರಿಚಯವಾಗಲೇಬೇಕು ಎಂದು ರಂಗ ನಿರ್ದೇಶಕ ಡಾ. ಪ್ರಕಾಶ ಗರುಡ ಹೇಳಿದರು.

ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಮನೋಹರ ಗ್ರಂಥಮಾಲೆ ಅಟ್ಟದ ಮೇಲೆ ನಾಟ್ಯ ಸಂಗೀತ ಸಂಧ್ಯಾ ಕಾರ್ಯಕ್ರಮದ ಅಡಿ ಪ್ರಕಾಶ ಗರುಡ ಅವರು ಸಿದ್ಧಪಡಿಸಿದ ಪಠ್ಯ ''''''''ಉತ್ತರ ಕರ್ನಾಟಕ ವೃತ್ತಿರಂಗಭೂಮಿಯ ನಾಟ್ಯ ಸಂಗೀತದ ರಂಗ ಪ್ರಸ್ತುತಿ'''''''' ಓದು ಮತ್ತು ಸಂವಾದದಲ್ಲಿ ಅವರು ಮಾತನಾಡಿದರು.

ಈ ಹಿನ್ನೆಲೆಯಲ್ಲಿ ಒಂದು ಸಂಭವನೀಯ ರಂಗ ಪಠ್ಯವನ್ನು ಸಿದ್ಧಪಡಿಸಿದ್ದೇನೆ. ನುರಿತ ಗಾಯಕರಿಂದ ಹಾಡಿಸಿ, ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಸಿದ್ಧ ಕಲಾವಿದರಿಂದ ಅಭಿನಯ ಮಾಡಿಸಿ ರಂಗಭೂಮಿಗೆ ತಂದು ಪ್ರೇಕ್ಷಕರಿಗೆ ಅಂದಿನ ವೃತ್ತಿ ರಂಗಭೂಮಿ ಎಷ್ಟೊಂದು ಶ್ರೀಮಂತವಾಗಿತ್ತು ಎಂದರು.

ಸಂವಾದದಲ್ಲಿ ಭಾಗವಹಿಸಿದ ಪಂ. ಕೈವಲ್ಯ ಕುಮಾರ ಗುರವ ಮಾತನಾಡಿ, ವೃತ್ತಿ ರಂಗಭೂಮಿ ನಾಟಕದ ಹಳೆಯ ಹಾಡುಗಳನ್ನು ಇಂದಿನ ರಂಗಭೂಮಿ ಆಸಕ್ತರಿಗೆ ಕೇಳಿಸುವ ಮತ್ತು ಪರಿಚಯಿಸುವ ಅವಶ್ಯಕತೆ ಇದೆ. ಮರಾಠಿ ರಂಗಭೂಮಿಯ ಹಾಗೆ ನಮ್ಮ ವೃತ್ತಿ ರಂಗಭೂಮಿಯ ಉತ್ತಮ ಸಂಗೀತ ನಾಟಕಗಳನ್ನು ಬೆಳಕಿಗೆ ತರೋಣ ಎಂದರು. ವೇದಿಕೆಯಲ್ಲಿ ರಾಘವ ಕಮ್ಮಾರ ಇದ್ದರು.


ಹರ್ಷ ಡಂಬಳ, ಡಾ. ಕೃಷ್ಣ ಕಟ್ಟಿ, ಡಾ. ಶಶಿಧರ ನರೇಂದ್ರ, ವಿಷಯಾ ಜೇವೂರ, ರಜನಿ ಗರುಡ, ಸಾಧನಾ ಮಿರಜಕರ, ಸನ್ಮತಿ ಅಂಗಡಿ, ಶಿಲ್ಪಾ ಮೊಕಾಶಿ ಪಾಂಡೆ, ಅರವಿಂದ ಕುಲಕರ್ಣಿ, ಬಸವರಾಜ ವಂದಲಿ, ಡಾ. ಹ.ವೆಂ. ಕಾಖಂಡಿಕಿ, ರಮೇಶ ನಾಡಿಗೇರ, ಲಕ್ಷ್ಮೀಕಾಂತ ಇಟ್ನಾಳ, ಸಮೀರ ಜೋಶಿ ಇದ್ದರು.