ಸಾರಾಂಶ
ಮಂಡ್ಯ : ಕನ್ನಡ ಚಲನಚಿತ್ರ ನಟರು ಕಾಂಗ್ರೆಸ್ ಕಾರ್ಯಕರ್ತರಲ್ಲ ಅವರಿಗೆ ಭಯ ಹುಟ್ಟಿಸುವ ರೀತಿ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದ ಪ್ರಧಾನ ಅಂಚೆ ಕಚೇರಿ ಎದುರು ಸೋಮವಾರ ಪತ್ರ ಚಳವಳಿ ನಡೆಸಿದರು.
ನಗರದ ಅಂಚೆ ಕಚೇರಿ ಸೇರಿದ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರ ಮನೆ ವಿಳಾಸಕ್ಕೆ ಅಂಚೆ ಪತ್ರವನ್ನು ಪೆಟ್ಟಿಗೆಗೆ ಹಾಕುವ ಮೂಲಕ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಲಾವಿದರಿಗೆ ಅವಮಾನ ಮಾಡುವ ರೀತಿಯಲ್ಲಿ ಸ್ವಹಿತಕ್ಕಾಗಿ ಕನ್ನಡ ಚಲನಚಿತ್ರದ ಕೆಲವು ನಟರನ್ನು ಮೇಕೆದಾಟು ಯೋಜನೆಯ ಪ್ರತಿಭಟನೆಯಲ್ಲಿ ಬಳಸಿಕೊಂಡ ಡಿ.ಕೆ.ಶಿವಕುಮಾರ್ ಅವರು ಅದನ್ನೆಲ್ಲ ಮರೆತು ಅವರ ನಟ್ಟು ಬೋಲ್ಟ್ ಅನ್ನು ಟೈಟ್ ಮಾಡುತ್ತೇನೆಂದು ಹೇಳಿರುವ ಮಾತು ಖಂಡನೀಯ ಎಂದು ಕಿಡಿಕಾರಿದರು.
ಡಿ.ಕೆ.ಶಿವಕುಮಾರ್ ಅವರು ಮೊದಲು ತಮ್ಮ ಸರ್ಕಾರದ ಆಡಳಿತ ಯಂತ್ರ ಕುಸಿದಿದೆ ಅದರ ನಟ್ಟುಬೋಲ್ಟ್ ಅನ್ನು ಟೈಟ್ ಮಾಡಿಕೊಳ್ಳಲಿ, ತಮ್ಮದೇ ಪಕ್ಷದ ರಾಜಕೀಯ ಮುತ್ಸದ್ದಿಗಳು ಬೇಕಾಬಿಟ್ಟಿ ಮಾತನಾಡಿ ಜನರ ವಿರೋಧ ಕಟ್ಟಿಕೊಳ್ಳುತ್ತಿದ್ದಾರೆ ಅವರ ನಟ್ಟುಬೋಲ್ಟ್ ಅನ್ನು ಟೈಟ್ ಮಾಡಲಿ, ಚಲನಚಿತ್ರ ನಟರು ಕನ್ನಡಿಗರ ಆಸ್ತಿ ಎನ್ನುವುದನ್ನು ಮರೆತು ಮಾತನಾಡುವುದು ಸರಿಯಲ್ಲಿ ತಕ್ಷಣ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ನಾಗಾನಂದ, ವಿನೋಭಾ, ಗೊರವಾಲೆ ಶಿವಣ್ಣ, ಪ್ರಸನ್ನ ಭಾಗವಹಿಸಿದ್ದರು.
ಮಾ.7 ರಂದು ನಾಟಕ ಪ್ರದರ್ಶನ
ಮಂಡ್ಯ: ತಾಲೂಕಿನ ಪಣಕನಹಳ್ಳಿ ಗ್ರಾಮ ದೇವತೆ (ಮಾರಮ್ಮ ತಾಯಿ) ಹಬ್ಬದ ಅಂಗವಾಗಿ ಶ್ರೆ ಭೈರವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಮಾ. 7 ರಂದು ರಾತ್ರಿ 7ಗಂಟೆಗೆ ಗ್ರಾಮದ ಶ್ರೆ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ತವರಿಗಿಟ್ಟ ಕೊಳ್ಳಿ ಅಥವಾ ಹತ್ತೂರು ಮನೆತನ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ. ಹಿರಿಯ ರಂಗಭೂಮಿ ನಿರ್ದೇಶಕ ಗಾಣದಾಳು ಶಿವಪ್ರಕಾಶ್ ನಿರ್ದೇಶನದಲ್ಲಿ ನಡೆಯುವ ನಾಟಕ ಪ್ರದರ್ಶನವನ್ನು ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರು ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಅವರು ಅಧ್ಯಕ್ಷತೆ ವಹಿಸುವರು. ಮನ್ಮುಲ್ ನಿರ್ದೇಶಕರಾದ ಯು.ಸಿ. ಶಿವಕುಮಾರ್, ರಘುನಂದನ್, ನಗರಸಭಾಧ್ಯಕ್ಷ ನಾಗೇಶ್ ಅವರು ಕಲಾವಿದರನ್ನು ಸನ್ಮಾನಿಸುವರು ಎಂದು ನಾಟಕ ಮಂಡಳಿ ವ್ಯವಸ್ಥಾಪಕರು ತಿಳಿಸಿದ್ದಾರೆ.