ಸಾರಾಂಶ
ರೋಣ: ಭೌತಿಕ ಜೀವನಕ್ಕೆ ಶಾಂತಿ,ನೆಮ್ಮದಿ, ಮುಕ್ತಿ ಸಿಗಬೇಕಾದಲ್ಲಿ ದಾನ, ಧರ್ಮ, ಪರೋಪಕಾರ, ಸತ್ಕಾರ್ಯಗಳಲ್ಲಿ ಸದಾ ತೊಡಗಿಕೊಳ್ಳಬೇಕು. ಅಂದಾಗ ಮಾತ್ರ ಬದುಕಿಗೆ ನಿಜಾರ್ಥ ದೊರೆಯುತ್ತದೆ ಎಂದು ರಂಭಾಪುರಿ ಬಾಳೆಹೊನ್ನೂರ ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಹೇಳಿದರು.
ಅವರು ಭಾನುವಾರ ತಾಲೂಕಿನ ಕೊತಬಾಳ ಗ್ರಾಮದ ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಸಭಾವನದಲ್ಲಿ ನೂತನ ಹಿರೇಮಠ ಲೋಕಾರ್ಪಣೆ ಹಾಗೂ ಜಗದ್ಗುರು ರೇಣುಕಾಚಾರ್ಯರರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧರ್ಮಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಜನರ ಹಿತಕ್ಕಾಗಿ ಒಳ್ಳೆಯ ವಿಚಾರಧಾರೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧಾರ್ಮಿಕ ಸತ್ಕ್ರಾಂತಿ ಜತೆಗೆ ಸಾಮಾಜಿಕ ಸತ್ಕ್ರಾಂತಿ ಗೈಯಬೇಕು ಎಂದು ಜಗದ್ಗುರು ರೇಣುಕಾಚಾರ್ಯರು ಸಂದೇಶ ನೀಡಿದ್ದಾರೆ. ಅದರಂತೆ ನಾವೆಲ್ಲರೂ ನಡೆಯಬೇಕು. ವೀರಶೈವ ಧರ್ಮಕ್ಕೆ ಜಗದ್ಗುರು ರೇಣುಕಾಚಾರ್ಯರು ಅಪಾರ ಕೊಡುಗೆ ನೀಡಿದ್ದಾರೆ. ಶಿವಾದ್ವೈತ ಸಿದ್ಧಾಂತ ತಿಳಿದು ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಜಗದ್ಗುರು ರೇಣುಕಾಚಾರ್ಯರು ತಪಸ್ಸು ಗೈದಿದ್ದಾರೆ. ತಾಯಿ ಮರದ ಬೇರಿಗೆ ನೀರು ಹಾಕಿ ಯಾವ ರೀತಿ ಪೋಷನೆ ಮಾಡಿ ಮರವಾಗಿ ಬೆಳೆಸಲಾಗುತ್ತದೆ. ಆ ಮರ ಯಾವ ರೀತಿಯಾಗಿ ಫಲ ಕೊಡುತ್ತದೆಯೋ, ಅದರಂತೆ ವೀರಶೈವ ಧರ್ಮ ಮರದ ಪಾಲನೆ, ಪೋಷಣೆ ಅವಶ್ಯವಿದೆ. ಜನರು ಒಗ್ಗಟ್ಟಿನಿಂದ ಧರ್ಮ ಕಾರ್ಯಗಳಲ್ಲಿ ತೊಡಗಬೇಕು. ಪಂಚ ತತ್ವ, ಪಂಚ ಪೀಠಗಳ ಶ್ರಿಗಳನ್ನು ಗೌರವಿಸಿ ಪೂಜಿಸಿದಲ್ಲಿ ದೇವರ ಕೃಪೆಗೆ ಪಾತ್ರರಾಗಬಹುದು. ಪಂಚಪೀಠಗಳಿಗೆ ವೈಭವವೂ ಇದೆ, ವೈರಾಗ್ಯವು ಇದೆ. ಆದರೆ ಕೆಲ ಮಠಾಧೀಶರಿಗೆ ವೈಭವವಿದ್ದರೇ ವೈರಾಗ್ಯವಿಲ್ಲ, ವೈರಾಗ್ಯವಿದ್ದರೇ ವೈಭವ ಇರುವದಿಲ್ಲ. ಆದರೆ ಪಂಚ ಪೀಠಗಳಿಗೆ ಎರಡು ಇವೆ. ಅವುಗಳನ್ನು ಭಕ್ತರು ಕೊಟ್ಟಿದ್ದಾರೆ ಎಂದರು.
ಅಡವಿ ಸಿದ್ದೇಶ್ವರ ಮಠದ ಗಂಗಾಧರ ಸ್ವಾಮೀಜಿ ಮಾತನಾಡಿ, ಭಕ್ತಿಯಲ್ಲಿ ಅಗಾಧ ಶಕ್ತಿಯಿದೆ. ಭಕ್ತಿಯಿಂದ ಯಾವುದೇ ಕಾಯಕ ಹಮ್ಮಿಕೊಂಡಲ್ಲಿ ಯಶಸ್ಸುಗೊಳ್ಳುವದರಲ್ಲಿ ಸಂದೇಹವಿಲ್ಲ. ಧರ್ಮಕ್ಕಾಗಿ ನಿಷ್ಕಲ್ಮಶದಿಂದ ದುಡಿದಲ್ಲಿ ಜೀವನಕ್ಕೆ ಮುಕ್ತಿ ದೊರೆಯುತ್ತದೆ. ತ್ಯಾಗದ ಮನೋಭಾವನೆ ಬೆಳಸಿಕೊಂಡಲ್ಲಿ ಎಲ್ಲವೂ ಕ್ಷಣಿಕವಾಗಲಿವೆ. ಆದ್ದರಿಂದ ಮುನಷ್ಯ ಜನ್ಮ ಅತೀ ಅಮೂಲ್ಯವಾದುದು, ಇದರ ಸದ್ಬಳಕೆಯಾಗಬೇಕು. ಸಮಾಜದ ಒಳಿತಿಗೆ ವಿನಿಯೋಗವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ದಾನ, ಧರ್ಮಾಧಿ ಕಾರ್ಯಗಳಲ್ಲಿ ತೊಡಗಬೇಕು. ಅಂದಾಗ ಜೀವನ ಸಾರ್ಥಕವಾಗುವದು ಎಂದರು.ಧರ್ಮ ಸಭೆ ಕಾರ್ಯಕ್ರಮವನ್ನು ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸಿ ಮಾತನಾಡಿ, ಸನ್ಮಾರ್ಗದಲ್ಲಿ ಸಾಗಲು ಶರಣರ, ಸಂತ, ಶ್ರೀಗಳ ಹಿತೋಪದೇಶಗಳ ಮಾರ್ಗದರ್ಶಿಯಾಗಲಿವೆ. ಸಮಾಜದ ಏಳ್ಗೆಗಾಗಿ, ಯಾವುದೇ ಫಲಾಪೇಕ್ಷೆ ಬಯಸದೇ ಸೇವೆ ಮಾಡಿದಲ್ಲಿ ದೇವರ ಅನುಗ್ರಹ ಖಂಡಿತವಾಗಿಯೂ ದೊರೆಯುತ್ತದೆ ಎಂದರು.
ನೂತನ ಹಿರೇಮಠ ನಿರ್ಮಾಣಕ್ಕೆ ತನುಮನ, ಧನ ಸೇವೆ ಗೈದ ಭಕ್ತರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬದಾಮಿ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು, ಸೂಡಿ ಜೂಕ್ತಿಹಿರೇಮಠದ ಡಾ.ಕೊಟ್ಟೂರೇಶ್ವರ ಶಿವಾಚಾರ್ಯ ಸ್ವಾಮೀಜಿ, ಎಪಿಎಎಂ ಮಾಜಿ ಅಧ್ಯಕ್ಷ ಪರಶುರಾಮ ಅಳಗವಾಡಿ, ವೀರಣ್ಣ ಶೆಟ್ಟರ್, ಧಶರಥ ಗಾಣಿಗೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಮುತ್ತಣ್ಣ ದೇಸಾಯಿ ಸ್ವಾಗತಿಸಿದರು.
ಉಮೇಶ ಗುಡಿಮನಿ ನಿರೂಪಿಸಿದರು. ವೀರಣ್ಣ ಯಾಳಗಿ ವಂದಿಸಿದರು.