ಸಾರಾಂಶ
ಪ್ರಾಚೀನ ಕಾಲದಲ್ಲಿ ಇರುವ ಹಗೆ ಕಟ್ಟುವ, ಬಿಸುವ ಸಲಕರಣೆ ಇಲ್ಲ, ಬದುಕು ಯಾಂತ್ರಿಕರಣಕ್ಕೆ ಕಾರಣ
ಗದಗ: ಭಕ್ತಿಯಿಂದ ಮಾತ್ರ ಮುಕ್ತಿ ಹೊಂದಲು ಸಾಧ್ಯ, ಅದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಬಳಗಾನೂರು ಮಠದ ಶಿವಶಾಂತವೀರ ಶರಣರು ಹೇಳಿದರು.
ಅವರು ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಗ್ರಾಮದೇವಿ ದ್ಯಾಮವ್ವ, ದುರಗವ್ವದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಭಕ್ತಿ ಕಾರ್ಯಕ್ಕೆ ಈ ಗ್ರಾಮದ ಗುರು-ಹಿರಿಯರು ತಾಯಂದಿರು ಹೆಸರುವಾಸಿ,ಇಂದು ಮನುಷ್ಯ ಕೈಗಾರಿಕೆ ಮಾಡಿ ಅನೇಕ ವಸ್ತು ಉತ್ಪಾದಿಸಿದ್ದಾನೆ. ಆದರೆ ಅಲ್ಲಿಯೂ ಆಹಾರ ಉತ್ಪಾದಿಸಲು ಸಾಧ್ಯವಿಲ್ಲ ಅದನ್ನು ಹೊಲದಲ್ಲಿಯೇ ಬೆಳೆಯಬೇಕು, ಅದು ರೈತರಿಂದ ಮಾತ್ರ ಸಾಧ್ಯ ಎನ್ನುವುದನ್ನು ಎಲ್ಲರೂ ಮನಗಾಣಬೇಕು ಎಂದರು.
ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಬೆಳವಣಿಕಿ ಗ್ರಾಮದ ರೈತರು ಮೂಲ ಕೃಷಿ ಮಾಡಿಕೊಂಡು ಬಂದವರು.ಆದರೆ ಇಂದು ಆ ಪ್ರಾಚೀನ ಕಾಲದಲ್ಲಿ ಇರುವ ಹಗೆ ಕಟ್ಟುವ, ಬಿಸುವ ಸಲಕರಣೆ ಇಲ್ಲ, ಬದುಕು ಯಾಂತ್ರಿಕರಣಕ್ಕೆ ಕಾರಣವಾಗಿದೆ. ತಿಪ್ಪೆಗೊಬ್ಬರ ಇಲ್ಲದೇ ಇಂದು ಭೂಮಿ ವಿಷವಾಗಿ,ಅಂತ ಭೂಮಿಯಿಂದ ರಾಸಾಯನಿಕ ಗೊಬ್ಬರ ಬೆಳಸಿ ಆಹಾರ ಬೆಳೆಯುವದರಿಂದ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಮರ ಇಲ್ಲ, ಮಳೆ ಇಲ್ಲ, ಬೆಳೆ ಇಲ್ಲದಂತಾಗಿದೆ. ಮನುಷ್ಯ ನೌಕರಿ ಬೆನ್ನು ಹತ್ತಿದ್ದಾರೆ.ಗ್ರಾಮದ ತಾಯಂದಿರು ಕೃಷಿ ಕಾರ್ಯದಲ್ಲಿ ಎತ್ತು, ಜವಾರಿ ಆಕಳು,ಹಾಲು ಹೈನು ಸಮೃದ್ಧಿ ಬೆಳೆಯಲು ಶ್ರಮವಹಿಸಬೇಕು ಎಂದರು. ಗಿನಿಗೇರಿ ಶ್ರೀಕಂಠ ಮಹಾಸ್ವಾಮಿಗಳು ದೇವಿಯ ಮಹತ್ವ ಭಕ್ತಿ ಕುರಿತು ಮಾತನಾಡಿದರು.