ಸಾರಾಂಶ
ಶ್ರೀರಾಮ, ಸೀತೆ, ಲಕ್ಷ್ಮಣ ಹನುಮಂತ ದೇವರಿಗೆ ಸ್ವರ್ಣ ಕವಚ, ರಜತ ಪ್ರಭಾವಳಿ, ಭದ್ರತಾ ಕೋಶ ಸಮರ್ಪಣೆ, ಪೂಜೆ ನೆರವೇರಿತು.
ಕನ್ನಡಪ್ರಭ ವಾರ್ತೆ ಮಲ್ಪೆಇಲ್ಲಿನ ಜಿ.ಎಸ್.ಬಿ. ಸಮಾಜದ ಶ್ರೀ ರಾಮ ಮಂದಿರದ ವತಿಯಿಂದ ನಿರ್ಮಿಸಲಾದ ಶ್ರೀ ರಾಮಧಾಮದ ಹಾಗೂ ಶ್ರೀ ದೇವರಿಗೆ ಸ್ವರ್ಣಕವಚ ಸಮರ್ಪಣೆ ಸೋಮವಾರ ವೈಭವದಿಂದ ನಡೆಯಿತು.ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯರ್ ಅವರನ್ನು ಕಲ್ಮಾಡಿ ಸೇತುವೆ ಬಳಿಯಿಂದ ಚಂಡೆ, ಮಂಗಳವಾದ್ಯ, ಭಜನೆ, ಪೂರ್ಣಕುಂಭಗಳೊಂದಿಗೆ ಭವ್ಯವಾಗಿ ಸ್ವಾಗತಿಸಿ ಮೆರವಣಿಗೆ ನಡೆಸಲಾಯಿತು.ನಂತರ ಶ್ರೀಪಾದರಿಂದ ಶ್ರೀ ರಾಮ, ಸೀತೆ, ಲಕ್ಷ್ಮಣ, ಹನುಮಂತ ದೇವರಿಗೆ ಸ್ವರ್ಣ ಕವಚ, ರಜತ ಪ್ರಭಾವಳಿ, ಭದ್ರತಾ ಕೋಶ ಸಮರ್ಪಣೆ, ಪೂಜೆ ನೆರವೇರಿತು.
ನೂತನ ರಾಮಧಾಮದಲ್ಲಿ ದೀಪ ಬೆಳಗಿಸಿ ಶ್ರೀಗಳು ದೇವಳದ ಹಬ್ಬಹರಿದಿನಗಳ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ನಂತರ ಆಶೀರ್ವಚನ ನೀಡಿದ ಶ್ರೀಪಾದರು, ಅಯೋಧ್ಯ ಶ್ರೀರಾಮನ ಮಂದಿರದ ಉದ್ಘಾಟನೆಯ ಶುಭ ಅವಸರದಲ್ಲಿಯೇ ಈ ರಾಮಮಂದಿರದ ರಜತ ವರ್ಷಾಚರಣೆಯ ಅರ್ಥಪೂರ್ಣವಾಗಿ ನಡೆಯಬೇಕು. ರಾಮನ ಆದರ್ಶಗುಣವೇ ನಮಗೆ ಸಂಪತ್ತಾಗಬೇಕು, ರಾಮನಂತೆ ಇತರರಿಗೆ ದಾರಿದೀಪವಾಗುವಂತೆ ಬದುಕಿದರೆ ಜೀವನ ಸಾರ್ಥಕ ಎಂದರು. ರಾಮಧಾಮ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ಶ್ರೀ ರಾಮ ಮಂದಿರದ ಅಧ್ಯಕ್ಷ ಕೆ. ಗೋಕುಲದಾಸ್ ಪೈ, ದೇವಳದ ಅರ್ಚಕ ಶೈಲೇಶ ಭಟ್, ಪ್ರಮುಖರಾದ ಜಯದೇವ ಭಟ್ ಕಲ್ಯಾಣಪುರ, ಲಕ್ಷ್ಮಣ ಭಟ್, ವಿಶ್ವನಾಥ ಭಟ್, ಕೃಷ್ಣ ಶೆಣೈ, ಅನಂತ ಕಾಮತ್, ಸುಧೀರ್ ಶೆಣೈ, ಸಂತೋಷ ಆಚಾರ್ಯ, ಶಾಲಿನಿ ಪೈ ಹಾಗೂ ಶ್ರೀರಾಮ ಸೇವಾ ಟ್ರಸ್ಟ್, ಜಿ.ಎಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.