ಕನ್ನಡಪ್ರಭವಾರ್ತೆ ಚಿಂತಾಮಣಿರೈತರ ಮತ್ತು ಮಹಿಳೆಯರ ಜೀವನಾಧಾರವಾಗಿರುವ ಹೈನುಗಾರಿಕೆಯಲ್ಲಿ ನಿರಂತರ ಪ್ರೋತ್ಸಾಹಗಳಿದ್ದಾಗ ಗುಣಮಟ್ಟ ಹಾಗೂ ಪರಿಶುದ್ಧ ಹಾಲು ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಗುಣಮಟ್ಟದ ಹಾಲು ಪೂರೈಸುವುದರಿಂದ ಆದಾಯ ಪ್ರಮಾಣ ಹೆಚ್ಚಿ ಹೈನುಗಾರರ ಜೀವನ ಉತ್ತಮಗೊಳ್ಳುತ್ತದೆ. ಸ್ವಾವಲಂಬಿ ಜೀವನಕ್ಕೆ ಹೈನುಗಾರಿಕೆ ಸಹಕಾರಿ ಎಂದು ಗೌನಿಚೆರುವಪಲ್ಲಿ ಎಂಪಿಸಿಎಸ್ ಅಧ್ಯಕ್ಷ ಜಿ.ನಾರಾಯಣಸ್ವಾಮಿ ನುಡಿದರು.

ತಾಲೂಕಿನ ಗೌನಿಚೆರುವಪಲ್ಲಿ ಗ್ರಾಮದ ಎಂಪಿಸಿಎಸ್‌ನಲ್ಲಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಧ್ಯಕ್ಷ ಜಿ.ನಾರಾಯಣಸ್ವಾಮಿ ತಮ್ಮ ಸ್ವಂತ ಹಣದಿಂದ ಹೈನುಗಾರರಿಗೆ ಬಿಂದಿಗೆ ವಿತರಿಸಿ ಮಾತನಾಡಿ, ನಮ್ಮ ಗ್ರಾಮದಲ್ಲಿ ರೈತರು ಮತ್ತು ಮಹಿಳೆಯರು ಹೆಚ್ಚಾಗಿ ನಂಬಿರುವುದೇ ಹೈನುಗಾರಿಕೆಯನ್ನು. ಇದರಿಂದ ಇಂದು ಪೆದ್ದೂರು ಗ್ರಾ.ಪಂ. ವ್ಯಾಪ್ತಿಯಲ್ಲೇ ಅತಿಹೆಚ್ಚು ಹಾಲು ಪೂರೈಕೆ ಮಾಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು ಪ್ರತಿನಿತ್ಯ ೧೮ ಕ್ಯಾನ್ ಹಾಲು ಬಿಎಂಸಿ ಕೇಂದ್ರಕ್ಕೆ ಪೂರೈಕೆಯಾಗುತ್ತಿದೆ. ಹಾಲು ಪೂರೈಕೆ ಮತ್ತಷ್ಟು ಹೆಚ್ಚಿಸಲು ನಿರಂತರ ಪ್ರೋತ್ಸಾಹ ನೀಡುವುದೇ ನಮ್ಮ ಧ್ಯೇಯ. ಈ ಕಾರ್ಯಕ್ಕೆ ಎಂಪಿಸಿಎಸ್‌ನ ಎಲ್ಲಾ ನಿರ್ದೇಶಕರ ಸಹಕಾರ ಲಭಿಸಿದ್ದು ಈ ಹಿನ್ನೆಲೆಯಲ್ಲಿ ಬಿಂದಿಗೆ ವಿತರಣೆ ಸಾಧ್ಯವಾಯಿತೆಂದು ಹೇಳಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಅರುಣಾವತಮ್ಮ, ನಿರ್ದೇಶಕರಾದ ಜಿ.ಎಂ. ಪ್ರಕಾಶ್, ಗಂಗಲಕ್ಷ್ಮಮ್ಮ, ಸುಧಾಕರ್ ರೆಡ್ಡಿ, ಭಾಸ್ಕರ್‌ ರೆಡ್ಡಿ, ಎಚ್. ಹನುಂಮತಪ್ಪ, ಎಚ್. ನಾರಾಯಣಸ್ವಾಮಿ, ಖಾಸೀಂಸಾಬ್, ಗಂಗಾಧರ, ಹೊನ್ನುರಪ್ಪ, ಪ್ರಭಾಕರ್‌ ರೆಡ್ಡಿ, ಚಂದ್ರಕಳಾಮ್ಮ, ಕಾರ್ಯದರ್ಶಿ ಜಿ.ಎನ್. ವೆಂಕಟಶಿವಾರೆಡ್ಡಿ, ಹಾಲು ಪರೀಕ್ಷಕ ವೆಂಕಟರವಣಪ್ಪ, ಹಾಲು ಉತ್ಪಾದಕರು ಮತ್ತು ಗ್ರಾಮಸ್ಥರು ಇದ್ದರು.