ಶ್ರೀ ಧರ್ಮಸ್ಥಳ ಕ್ಷೇತ್ರದಲ್ಲಿ ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ ೫೪ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 106 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಕ್ಷೇತ್ರದಲ್ಲಿ ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ ೫೪ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 106 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. 

ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ನೂತನ ದಂಪತಿಗಳು ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸದೊಂದಿಗೆ ಹೊಂದಾಣಿಕೆಯಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಸಲಹೆ ನೀಡಿ ಆಶೀರ್ವದಿಸಿದರು.ಧರ್ಮಸ್ಥಳದಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಸರ್ಕಾರ ಹಾಗೂ ಇತರ ಮಠ-ಮಂದಿರಗಳು ಮಾದರಿಯಾಗಿ ಸ್ವೀಕರಿಸಿ ಅನುಸರಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. 

ಉಚಿತ ಸಾಮೂಹಿಕ ವಿವಾಹ ಸಮಾರಂಭ

ಬೇರೆ ಕಡೆಗಳಲ್ಲಿ ನಡೆಸುವ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಇನ್ನು ಮುಂದೆ ಧರ್ಮಸ್ಥಳದಿಂದ ಮಂಗಳಸೂತ್ರ ಕೊಡಲಾಗುವುದಿಲ್ಲ ಎಂದು ಹೆಗ್ಗಡೆ ಪ್ರಕಟಿಸಿದರು. ಏಕೆಂದರೆ ಹೀಗೆ ಕೊಟ್ಟರೆ ಬೇರೆ ಕಡೆಗಳಲ್ಲಿಯೂ ಧರ್ಮಸ್ಥಳದ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸುತ್ತಾರೆ ಎಂಬ ತಪ್ಪು ಕಲ್ಪನೆ ಜನರಲ್ಲಿ ಮೂಡಿಬರುತ್ತದೆ. ಧರ್ಮಸ್ಥಳದಿಂದ ತಾಳಿ ಕೊಡುತ್ತಾರೆ ಎಂದಾಗ ಜನರು ಕ್ಷೇತ್ರಕ್ಕೆ ಬರುವ ಬದಲು ಅಲ್ಲೇ ಮದುವೆಯಾಗಲು ನಿರ್ಧರಿಸುತ್ತಾರೆ ಎಂದರು.

ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡಿ, ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಬದಲಾವಣೆಯ ಪರ್ವವಾಗಿದ್ದು, ಧರ್ಮಸ್ಥಳದಿಂದ ನಡೆಸುವ ಬಹುಮುಖಿ ಸಮಾಜ ಸೇವಾ ಕಾರ್ಯಗಳಲ್ಲಿ ಉಚಿತ ಸಾಮೂಹಿಕ ವಿವಾಹ ಅತ್ಯಂತ ಪವಿತ್ರ ಹಾಗೂ ಪುಣ್ಯದಾಯಕ ಸೇವೆಯಾಗಿದೆ ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಹೆಗ್ಗಡೆ ದಂಪತಿಯ ಸಾರ್ಥಕ ಬದುಕೇ ಎಲ್ಲರಿಗೂ ಪ್ರೇರಕ ಶಕ್ತಿ ಹಾಗೂ ಮಾರ್ಗದರ್ಶಿಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಶರ್ಮಿಳಾ ವೇದಿಕೆಯಲ್ಲಿ ಇದ್ದರು.

ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್ ಸ್ವಾಗತಿಸಿದರು. ಡಾ. ಹೆಗ್ಗಡೆ ಆಪ್ತ ಕಾರ್‍ಯದರ್ಶಿ ಎ.ವಿ. ಶೆಟ್ಟಿ ವಂದಿಸಿದರು.ಸಂಪತ್ ಕುಮಾರ್ ರೈ ಮತ್ತು ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

106 ಜೋಡಿ ವಧು-ವರರು:

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಸಂಜೆ ಗಂಟೆ ೬.೪೦ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ೫೪ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 106 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬುಧವಾರ ಬೆಳಗ್ಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬದವರು ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ಮೂಗುತಿ ಮತ್ತು ರವಿಕೆ ಕಣ ವಿತರಿಸಿದರು.ಸಂಜೆ 5 ಗಂಟೆಗೆ ವಧು-ವರರನ್ನು ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನ ಬಳಿಯಿಂದ ಅಮೃತವರ್ಷಿಣಿ ಸಭಾಭವನಕ್ಕೆ ಕರೆದುಕೊಂಡು ಹೋಗಲಾಯಿತು.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಗಣ್ಯ ಅತಿಥಿಗಳು ಮಂಗಳ ಸೂತ್ರ ವಿತರಿಸಿದರು. ಸಂಜೆ ಗಂಟೆ ೬.೪೦ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವೇದಘೋಷ, ಮಂಗಳವಾದ್ಯ, ಹಾರ ವಿನಿಮಯ, ಮಂತ್ರಾಕ್ಷತೆಯೊಂದಿಗೆ ವಧುವಿಗೆ ಮಂಗಳ ಸೂತ್ರ ಧಾರಣೆ ಮಾಡಲಾಯಿತು.ಸುಶ್ರಾವ್ಯ ಶೋಭಾನೆ ಹಾಡಗಳೊಂದಿಗೆ ವಧು-ವರರಿಗೆ ಆರತಿ ಹಾಗೂ ಮಂಗಳ ದ್ರವ್ಯಗಳ ವಿತರಣೆ ಮಾಡಲಾಯಿತು.ದಾಂಪತ್ಯ ದೀಕ್ಷೆಯ ಬಳಿಕ ನೂತನ ದಂಪತಿಗಳಿಗೆ ಧರ್ಮಸ್ಥಳ ವತಿಯಿಂದ ಉಡುಗೊರೆ ನೀಡಿ ಶುಭ ಹಾರೈಸಲಾಯಿತು.ಬಳಿಕ ನೂತನ ದಂಪತಿಗಳು ದೇವರ ದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ಊರಿಗೆ ಪ್ರಯಾಣಿಸಿದರು.