ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ಸಹಕಾರ ಬ್ಯಾಂಕ್ಗಳಲ್ಲಿ ಕೃಷಿಕರಿಗೆ ಸರ್ಕಾರದ ನಿರ್ದೇಶನದಂತೆ ಶೂನ್ಯ ಬಡ್ಡಿ ದರದಲ್ಲಿ 3 ರಿಂದ 5 ಲಕ್ಷ ರು.ವರೆಗೂ ಸಾಲ ನೀಡಲು ಮುಂದಾಗಲಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ತಿಳಿಸಿದ್ದಾರೆ.ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉನ್ನತಿ ಭವನದ ದಿ:ಪಂದ್ಯಂಡ.ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಶನಿವಾರ ನಡೆದ ಬ್ಯಾಂಕಿನ 99 ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರು. ವರೆಗೂ ಸಾಲವನ್ನು ಸಹಕಾರ ಬ್ಯಾಂಕುಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಬಾಂಡ್ ಗಣಪತಿ ಅವರು ಹೇಳಿದರು.ಸಹಕಾರ ಬ್ಯಾಂಕ್ಗಳು ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪ್ರಥಮ ಆದ್ಯತೆಯಲ್ಲಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಲೆಕ್ಕ ಪರಿಶೋಧನೆಯನ್ನು ವಿಳಂಬ ಮಾಡಬಾರದು ಎಂದು ಕೊಡಂದೇರ ಪಿ.ಗಣಪತಿ ಅವರು ಒತ್ತಿ ಹೇಳಿದರು.
ಸಹಕಾರ ಕ್ಷೇತ್ರವನ್ನು ಮತ್ತಷ್ಟು ಸ್ವಾವಲಂಬಿಯನ್ನಾಗಿ ಮಾಡುವ ಜವಾಬ್ದಾರಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಎಲ್ಲರಲ್ಲಿಯೂ ಇದೆ. ಸಹಕಾರ ಕ್ಷೇತ್ರ ಬಲಪಡಿಸಲು ಎಲ್ಲರ ಸಹಕಾರ ಅಗತ್ಯ ಎಂದು ವಿವರಿಸಿದರು.ಸಹಕಾರ ಸಂಘಗಳ ಕಾಯ್ದೆ ತಿದ್ದುಪಡಿಗೆ ಇದೇ ಸಂದರ್ಭದಲ್ಲಿ ಅತೃಪ್ತಿ ವ್ಯಕ್ತಪಡಿಸಿದ ಬಾಂಡ್ ಗಣಪತಿ ಅವರು ಆಡಳಿತ ಮಂಡಳಿಗೆ ನಾಮ ನಿರ್ದೇಶನ ಸದಸ್ಯರನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನಾಗಿ ಪರಿಗಣಿಸುವುದು ಸರಿಯಲ್ಲ. ಈ ಬಗ್ಗೆ ಚಿಂತಿಸಬೇಕಿದೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಬಡ್ಡಿ ರಿಯಾಯಿತಿ ಬಿಲ್ಲುಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲು 2024 ರ ಆ. 22 ರಂದು ಬ್ಯಾಂಕಿನ ವತಿಯಿಂದ ತರಬೇತಿ ನೀಡಿದ್ದು, ಇ-ಮೇಲ್ ಮೂಲಕ ಎಲ್ಲ ಸಹಕಾರ ಸಂಘಗಳು ಕಾಲಮಿತಿಯೊಳಗೆ ಅಪ್ಲೋಡ್ ಮಾಡುವಂತಾಗಬೇಕು ಎಂದು ಕೋರಿದರು.2023-24ನೇ ಸಾಲಿನ ಲೆಕ್ಕ ಪರಿಶೋಧನೆ (ಆಡಿಟ್)ನಲ್ಲಿ ಇದೇ ಮೊದಲ ಬಾರಿಗೆ ಶೇ.93 ರಷ್ಟು ಅಂಕ ಪಡೆದು ಬ್ಯಾಂಕು ಕಳೆದ ಹಲವು ವರ್ಷಗಳಿಂದ ಆಡಿಟ್ನಲ್ಲಿ ‘ಎ’ ವರ್ಗೀಕರಣ ಇರುತ್ತದೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ, 2022-23 ನೇ ಸಾಲಿಗೆ ಅತ್ಯುತ್ತಮ ಕಾರ್ಯ ನಿರ್ವಹಣೆಗೆ ನಮ್ಮ ಬ್ಯಾಂಕಿಗೆ 2024 ರ ಸೆಪ್ಟೆಂಬರ್, 13 ರಂದು ನಡೆದ ಅಪೆಕ್ಸ್ ಬ್ಯಾಂಕಿನ ವಾರ್ಷಿಕ ಮಹಾ ಸಭೆಯಲ್ಲಿ ‘ಅತ್ಯುತ್ತಮ ಸಾಧನಾ ತೃತೀಯ ಪ್ರಶಸ್ತಿ ದೊರೆತಿದೆ ಎಂದು ಇದೇ ಸಂದರ್ಭ ಮಾಹಿತಿ ನೀಡಿದರು.
ವಿವಿಧ ಸಹಕಾರ ಬ್ಯಾಂಕುಗಳ ಅಧ್ಯಕ್ಷರಾದ ನಂದ ಸುಬ್ಬಯ್ಯ, ಎಂ.ಬಿ.ದೇವಯ್ಯ, ರವಿಬಸಪ್ಪ, ನಾಗೇಶ್ ಕುಂದಲ್ಪಾಡಿ, ಕೃಷ್ಣ ಗಣಪತಿ ಇತರರು ಸಹಕಾರ ಸಂಘಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಸಂಬಂಧಿಸಿದಂತೆ ಹಲವು ವಿಷಯ ಪ್ರಸ್ತಾಪಿಸಿದರು.ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಕೇಟೋಳಿರ ಎಸ್.ಪೂವಯ್ಯ, ನಿರ್ದೇಶಕರಾದ ಹೊಟ್ಟೆಂಗಡ ಎಂ.ರಮೇಶ್, ಹೊಸೂರು ಜೆ.ಸತೀಶ್ ಕುಮಾರ್, ಕೆ.ಅರುಣ್ ಭೀಮಯ್ಯ, ಕಾಂಗೀರ ಎನ್.ಸತೀಶ್, ಪೂಳಂಡ ಪಿ.ಪೆಮ್ಮಯ್ಯ, ಎಚ್.ಕೆ.ಮಾದಪ್ಪ, ಎಸ್.ಸಿ.ಶರತ್ಶೇಖರ್, ಎನ್.ಎಂ.ಉತ್ತಪ್ಪ, ಶರವಣ ಕುಮಾರ್ ಟಿ.ಆರ್., ಗುಮ್ಮಟ್ಟೀರ ಎಸ್.ಕಿಲನ್ ಗಣಪತಿ, ಜಲಜಾ ಶೇಖರ್, ಎಂ.ಕೆ.ಬೆಳ್ಳಿಯಪ್ಪ, ವೃತ್ತಿಪರ ನಿರ್ದೇಶಕರಾದ ಎ.ಗೋಪಾಲಕೃಷ್ಣ, ಮುಂಡಂಡ ಸಿ.ನಾಣಯ್ಯ ಸಹಕಾರ ಸಂಘಗಳ ಉಪ ನಿಬಂಧಕರಾದ ಜಿ.ಆರ್.ವಿಜಯ್ ಕುಮಾರ್, ಬ್ಯಾಂಕಿನ ಸಿಇಒ ಪ್ರವೀಣ್ ಬಿ ನಾಯಕ್, ಪ್ರಧಾನ ವ್ಯವಸ್ಥಾಪಕಿ ಬೋಜಮ್ಮ ಜಿ.ಎಂ. ಇತರರು ಇದ್ದರು.