ಸಾರಾಂಶ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಧೈರ್ಯ ತುಂಬಲು, ಶಾಂತಿಯುತ ಮತದಾನ ನಡೆಯಲು ಚುನಾವಣಾ ಸಂದರ್ಭದಲ್ಲಿ ಸೂಕ್ಷ್ಮ, ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಅರೆ ಸೇನಾಪಡೆ ಯೋಧರು ಜಂಟಿಯಾಗಿ ಪಥ ಸಂಚಲನ ನಡೆಸಿದರು.
ಕನ್ನಡಪ್ರಭ ವಾರ್ತೆ ಕಾರವಾರ
ತಾಲೂಕಿನ ಶಿರವಾಡದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಧೈರ್ಯ ತುಂಬಲು, ಶಾಂತಿಯುತ ಮತದಾನ ನಡೆಯಲು ಚುನಾವಣಾ ಸಂದರ್ಭದಲ್ಲಿ ಸೂಕ್ಷ್ಮ, ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಅರೆ ಸೇನಾಪಡೆ ಯೋಧರು ಜಂಟಿಯಾಗಿ ಪಥ ಸಂಚಲನ ನಡೆಸಿದರು.
ಪ್ರಸಕ್ತ ಚುನಾವಣೆಯಲ್ಲಿ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶಿರವಾಡದ ಬಂಗಾರಪ್ಪನಗರ, ಕಿನ್ನರ, ಅಂಬೇಜೂಗ ಗ್ರಾಮದಲ್ಲಿ ಗುಜರಾತ್ ಹಾಗೂ ಸ್ಥಳೀಯ ಪೊಲೀಸರು ಪಥ ಸಂಚಲನ ನಡೆಸಿದರು. ಡಿಎಸ್ಪಿ ಗಿರೀಶ ಮಾರ್ಗದರ್ಶನದಲ್ಲಿ ಪಥ ಸಂಚಲನ ಸಂಘಟಿಸಲಾಗಿತ್ತು.ಅಂಚೆ ಮತದಾನ ಕೇಂದ್ರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಅಗತ್ಯ ಸೇವಾ ಗೈರು ಮತದಾರರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಅಂಚೆ ಮತದಾನಕ್ಕೆ ನೋಂದಾಯಿಸಿಕೊಂಡಿರುವ ಅಗತ್ಯ ಸೇವೆಗಳ ಅಡಿಯಲ್ಲಿನ ಮತದಾರರಿಗೆ ಮೇ 1ರಿಂದ 3ರ ವರೆಗೆ ಈ ಕೇಂದ್ರದಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.ಚುನಾವಣಾ ತರಬೇತಿಗೆ ತೆರಳಲು ಬಸ್ ವ್ಯವಸ್ಥೆ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಿಆರ್ಒ, ಎಪಿಆರ್ಒ, ಪಿಓ- 1 ಹಾಗೂ ಪಿಓ- 2 ಎರಡನೇ ಹಂತದ ಚುನಾವಣಾ ತರಬೇತಿಯನ್ನು ಮೇ 2ರಂದು ಆಯೋಜಿಸಲಾಗಿದೆ.ಮತಗಟ್ಟೆ ಅಧಿಕಾರಿಗಳಿಗೆ ಆಯಾ ವಿಧಾನಸಭಾ ಕ್ಷೇತ್ರಕ್ಕೆ ತರಬೇತಿಗೆ ತೆರಳಲು ಕಾರವಾರ ತಹಸೀಲ್ದಾರ್ ಕಚೇರಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ತೆರಳಲು ಬೆಳಗ್ಗೆ 6 ಗಂಟೆ, ಭಟ್ಕಳಗೆ ತೆರಳಲು ಬೆಳಗ್ಗೆ 5.30 ಗಂಟೆ, ಶಿರಸಿಗೆ ತೆರಳಲು ಬೆಳಗ್ಗೆ 5.30 ಗಂಟೆ, ಯಲ್ಲಾಪುರ ತೆರಳಲು ಬೆಳಗ್ಗೆ 6 ಗಂಟೆ ಹಾಗೂ ಹಳಿಯಾಳಗೆ ತೆರಳಲು ಬೆಳಗ್ಗೆ 5.30 ತಹಸೀಲ್ದಾರ ಕಚೇರಿಯಿಂದ ವಾಹನ ಹೊರಡಲಿದೆ. ಮತಗಟ್ಟೆ ಅಧಿಕಾರಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ಇಲ್ಲಿನ ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.