ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಲಕೋಟೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾಂವಿ ಅವರ ನೇತೃತ್ವದಲ್ಲಿ ನವನಗರದ ತಾಪಂ ಸಭಾಭವನದಲ್ಲಿ ಗುರುವಾರ ಜನಸಂಪರ್ಕ ಸಭೆ ಜರುಗಿತು.ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ 9 ದೂರು ಅರ್ಜಿ ಬಂದಿದ್ದು, ಅರ್ಜಿಗಳನ್ನು ಹಾಜರಿದ್ದ ಅಧಿಕಾರಿಗಳ ಸಮಕ್ಷಮ ಕೂಡಲೇ ನಿಯಮಾನುಸಾರ ಕ್ರಮ ಜರುಗಿಸಿ ಸಂಬಂಧಿಸಿದ ಅರ್ಜಿದಾರರಿಗೆ ಹಿಂಬರಹ, ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಎಲ್ಲ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ವಿಚಾರಿಸಿ ಸಾರ್ವಜನಿಕ ಕುಂದುಕೊರತೆಗಳನ್ನು ಆದ್ಯತೆಯ ಮೇರೆಗೆ ನಿಯಮಾನುಸಾರ ಕ್ರಮ ಜರುಗಿಸಲು ಮತ್ತು ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ಸ್ವೀಕೃತಿ ಮಾಡಿಕೊಂಡು ಸಂಬಂಧಿಸಿದವರಿಗೆ ಸ್ವೀಕೃತಿ ನೀಡಲು ತಿಳಿಸಿದರು.
ಅರ್ಜಿಗಳ ಬಗ್ಗೆ ನಿವಾಕಾರಣ ಬಾಕಿ ಇಟ್ಟುಕೊಳ್ಳದೆ ನಿಯಮಾನುಸಾರ ಕ್ರಮ ಜರುಗಿಸಲು ತಿಳಿಸಿದರು. ಪೊಲೀಸ್ ಅಧೀಕ್ಷಕರು ಶಾಲೆ, ಕಾಲೇಜು ಹಾಗೂ ವಸತಿ ನಿಲಯಗಳ ಆವರಣದಲ್ಲಿ ಮತ್ತು ಅಕ್ಕ-ಪಕ್ಕದಲ್ಲಿ ಅಪಾಯಕಾರಿ ರೀತಿಯಲ್ಲಿರುವ ವಿದ್ಯುತ್ ಕಂಬ, ಪರಿವರ್ತಕ ಹಾಗೂ ಇತರೆ ಎಲೆಕ್ಟ್ರಿಕ್ ಸಾಧನಗಳನ್ನು ತುರ್ತಾಗಿ ಸ್ಥಳಾಂತರ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು, ಬಯಲುಮುಕ್ತ ಶೌಚಾಲಯ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಸೂಚಿಸಿದರು.ಕರ್ನಾಟಕ ಪೊಲೀಸ್ ಠಾಣೆಯ ಉಪಾಧ್ಯಕ್ಷ ಸುರೇಶರೆಡ್ಡಿ, ಪೊಲೀಸ್ ನಿರೀಕ್ಷಕ-1 ಬಿ.ಎ. ಬಿರಾದಾರ, ಪೊಲೀಸ್ ನಿರೀಕ್ಷಕ-3 ಎನ್.ಆರ್. ಖಿಲಾರೆ ಸೇರಿದಂತೆ ಬಾಗಲಕೋಟೆ ತಾಲೂಕು ಮಟ್ಟದ ವಿವಿಧ ಇಲಾಖೆಯ 34 ಜನ ಅಧಿಕಾರಿಗಳು ಉಪಸ್ಥಿತರಿದ್ದರು.