ಭಗವಾನ ಬುದ್ಧನ ಜ್ಞಾನ ಜಗತ್ತಿಗೆ ಬೆಳಕು: ಗುರುಮಹಾಂತ ಶ್ರೀ

| Published : May 27 2024, 01:13 AM IST

ಭಗವಾನ ಬುದ್ಧನ ಜ್ಞಾನ ಜಗತ್ತಿಗೆ ಬೆಳಕು: ಗುರುಮಹಾಂತ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಭಗವಾನ ಬುದ್ಧರ ಜ್ಞಾನ ಜಗತ್ತಿಗೆ ಬೇಳಕನ್ನು ನೀಡಿದೆ. ಆ ಬೆಳಕನ್ನು ನಾವು ಸದುಪಯೋಗ ಮಾಡಿಕೊಂಡು ಅವರ ನಡೆಯನ್ನು ಪಾಲನೆ ಮಾಡಬೇಕು ಎಂದು ಇಳಕಲ್ಲನ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಭಗವಾರ ಬುದ್ಧರ ಜ್ಞಾನ ಜಗತ್ತಿಗೆ ಬೇಳಕನ್ನು ನೀಡಿದೆ. ಆ ಬೆಳಕನ್ನು ನಾವು ಸದುಪಯೋಗ ಮಾಡಿಕೊಂಡು ಅವರ ನಡೆಯನ್ನು ಪಾಲನೆ ಮಾಡಬೇಕು ಎಂದು ಇಳಕಲ್ಲನ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಕಾಲೋನಿಯಲ್ಲಿ ನಡೆದ ೨೫೬೮ನೇ ವೈಶಾಖ ಬುದ್ಧ ಪೌರ್ಣಿಮೆ ಕಾರ್ಯಕ್ರಮವನ್ನು ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಬುದ್ಧನ ತತ್ವಜ್ಞಾನ ನಿಜವಾದ ಅರ್ಥದಲ್ಲಿ ಅದೊಂದು ಜೀವನದ ಮಾರ್ಗವಾಗಿದೆ. ಬುದ್ಧ, ಬಸವಣ್ಣನವರ ಬಗ್ಗೆ ದೊಡ್ಡ ಅಜ್ಜನವರು ಹೇಳಿದ್ದರು ಅದನ್ನೇ ಜ್ಞಾಪಿಸಿಕೊಂಡು ನಿಮ್ಮ ಮನಸ್ಸು ನಿಯಂತ್ರಿಸುವ ಸಾಧನೆ ಮಾಡಿಕೊಳ್ಳಿ, ಆಧ್ಯಾತ್ಮಿಕ ಜೀವನ ಅಳವಡಿಸಿಕೊಳ್ಳಿ ಎಂದು ತಿಳಿಸಿ, ಬುದ್ಧರು ಮಾನವೀಯ ಪ್ರಜ್ಞೆಯನ್ನು ಹಿಂದೆಯೇ ಸಾರಿದ್ದಾರೆ ಹಾಗೂ ಮೂಢನಂಬಿಕೆಯಿಂದ ಬ್ಯಾಟಿ ಹೆಸರಿನಲ್ಲಿ ಪ್ರಾಣಿ ಬಲಿ ಕೊಡಬೇಡಿ ಎಂದು ಹೇಳಿದ್ದಾರೆ. ಜನತೆ ಮೂಢನಂಬಿಕೆಯಿಂದ ಹೊರಬರುವುದು ಮುಖ್ಯ ಎಂದು ಹೇಳಿದರು.

ಉಪನ್ಯಾಸಕಿ ಡಾ.ಪ್ರಿಯದರ್ಶಿನಿ ಆಮದಿಹಾಳ ಮಾತನಾಡಿ, ಬುದ್ಧ ಅರಮನೆ ತೊರೆದು, ಕಠಿಣ ತಪಸ್ಸು ಆಚರಿಸಿ ಜ್ಞಾನೋದಯ ಮಾಡಿಕೊಂಡು ತಾನು ಕಂಡುಕೊಂಡ ಶಾಶ್ವತ ಸತ್ಯವನ್ನು ಸಾರಿದರು. ಅವರು ಮಹಾ ದರ್ಶನಿಕ, ತತ್ವಜ್ಞಾನಿ ಎಂದರು. ಬುದ್ಧ ದುಃಖಕ್ಕೆ ಕಾರಣ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಕುರಿತು ಹೇಳುವ ಸತ್ಯಗಳು ಮಾನವನ ಆಂತರಿಕ ಅರಿವಿನ ಪ್ರಜ್ಞೆ ಜಾಗೃತಿಗೊಳಿಸುತ್ತವೆ. ಪಂಚಶೀಲ ತತ್ವಗಳು ಮಾನವನ ಬಾಹ್ಯ ಪ್ರಜ್ಞೆಯ ನೀತಿ ಪ್ರಧಾನವಾದ ಬದುಕನ್ನು ಕಟ್ಟಿಕೊಡುತ್ತವೆ ಎಂದರು.

ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್ ದಲಿತ ಹಿತರಕ್ಷಣ ವೇದಿಕೆಯ ಅಧ್ಯಕ್ಷ ಶರಣಪ್ಪ ಆಮದಿಹಾಳ, ಉಪಾಧ್ಯಕ್ಷ ಯುವರಾಜ ಚಲವಾದಿ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ , ಬಿ.ಎಚ್. ಮಾದರ ಗುರುಗಳು, ಹಿರಿಯರಾದ ಬಸಪ್ಪ ಮುಧೋಳ, ಯಮನಪ್ಬ ಬೀಳಗಿ ಮುಂತಾದವರು ಇದ್ದರು