ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕು ಕಚೇರಿಯಲ್ಲಿ ಶ್ರೀಕೃಷ್ಣ ಜಯಂತಿ ಮತ್ತು ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಯಾದವ ಸಂಘದ ಗೌರವಾಧ್ಯಕ್ಷ ಅಣ್ಣೇಗೌಡ ಮಾತನಾಡಿ, ಶ್ರೀ ಕೃಷ್ಣ ಪರಮಾತ್ಮನು ನೀಡಿದಂತಹ ಸಂದೇಶಗಳು ಸಾರ್ವಕಾಲಿಕ ಸತ್ಯವಾಗಿದ್ದು, ಸರ್ವರೂ ಶ್ರೀ ಕೃಷ್ಣ ಸಂದೇಶಗಳನ್ನು ಪಾಲಿಸುವದರ ಮೂಲಕವಾಗಿ ತಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕು. ಶ್ರೀ ಕೃಷ್ಣನು ಅನೇಕ ಅವತಾರಗಳಲ್ಲಿ ಜನಿಸಿ ಮನುಕುಲಕ್ಕೆ ಸಂದೇಶಗಳನ್ನು ನೀಡಿದ್ದಾನೆ. ನಾವು ಕೊನೆಯ ತನಕವೂ ಕೂಡ ಪರೋಪಕಾರಿ, ಸಹಬಾಳ್ವೆ, ಸಾಮರಸ್ಯದಿಂದ ಇರಬೇಕು. ಅಸೂಯೆ, ದ್ವೇಷಗಳನ್ನು ಬಿಟ್ಟು ನಾವೆಲ್ಲರೂ ಒಂದು ಎಂಬ ಭಾವನೆ ಮೂಡಬೇಕು ಎಂಬ ಸಂದೇಶ ನೀಡಿದ ಶ್ರೀ ಕೃಷ್ಣನು ದಾರ್ಶನಿಕ ವ್ಯಕ್ತಿ ಎನ್ನಬಹುದು. ಶ್ರೀ ಕೃಷ್ಣನನ್ನು ಚೌಕಟ್ಟಿನಲ್ಲಿ ಇಡದೆ ವಿಶಾಲ ಮನೋಭಾವನೆಯಿಂದ ನೋಡಬೇಕು ಎಂದರು.
ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾನ ಮಂಜೇಗೌಡ ಮಾತನಾಡಿ, ನಾರಾಯಣಗುರು ಅವರು ಓರ್ವ ಸಮಾಜ ಸುಧಾರಕರಾಗಿ ಅವರನ್ನು ಕಂಡಾಗ ಅವರು ಒಂದು ಜಾತಿ, ಧರ್ಮದ ಗುರುವಲ್ಲ, ಅವರು ಲೋಕ ಗುರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ. ಇಂದು ನಾರಾಯಣ ಗುರುಗಳ ಜಾತಿ ನಮಗೆ ಮುಖ್ಯವಲ್ಲ. ಅವರ ನೀತಿ ಮುಖ್ಯ. ಚತುರ್ವರ್ಣ ವ್ಯವಸ್ಥೆಯ ಕರಾಳ ಕತೆಯ ವಿರುದ್ಧದ ಹೋರಾಟವೇ ನಾರಾಯಣ ಗುರುಗಳ ಸಮಾಜ ಸುಧಾರಣೆ, ಸಮಾಜದಲ್ಲಿರುವ ಜಾತಿ ತಾರತಮ್ಯ, ಮೌಢ್ಯತೆ, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡಿ ಸಾಮಾಜಿಕ ಸಮಾನತೆಗೆ ಅನೇಕ ಸುಧಾರಣೆಗಳನ್ನು ತಂದರು. ಎಲ್ಲಾ ಜಾತಿಗಳು ಸಮಾನ ಎಂದು ಪ್ರತಿಪಾದಿಸಿದ ಅವರ ಸಮಾಜ ಮುಖಿ ಸುಧಾರಣೆಗಳು ಪ್ರಸ್ತುತ ಅತ್ಯಗತ್ಯವಾಗಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಅಶೋಕ, ಶಿರಸ್ತೇದಾರ್ ರಂಗಸ್ವಾಮಿ, ಯಾದವ ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ, ಯಾದವ ಸಂಘದ ಅಧ್ಯಕ್ಷ ರಮೇಶ್, ಕಾರ್ಯಾಧ್ಯಕ್ಷ ನಾಗೇಶ್, ಶಿವಮರಿಯಪ್ಪ, ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಪುರುಷೋತ್ತಮ ಇತರರು ಇದ್ದರು.