ಕಂಸಾಗರ ಗ್ರಾಮದಲ್ಲಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕಾರ

ಕನ್ನಡಪ್ರಭ ವಾರ್ತೆ, ಕಡೂರು

ನನ್ನ ರಾಜಕೀಯದ ಬೆಳವಣಿಗೆಯಲ್ಲಿ ಎಲ್ಲ ವರ್ಗದವರ ಪ್ರೀತಿ, ವಿಶ್ವಾಸ ಗಳಿಸಿದ್ದರ ಫಲವಾಗಿ ನಾಲ್ಕನೇ ಬಾರಿಗೆ ಅಧ್ಯಕ್ಷ ರಾಗಲು ಅವಕಾಶ ಲಭಿಸಿದೆ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ನಾಲ್ಕನೇ ಅವಧಿಗೆ ಕಡೂರು ಪುರಸಭೆ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನಲೆಯಲ್ಲಿ ತಾಲೂಕಿನ ಕಂಸಾಗರ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಯಾವುದೇ ರಾಜಕೀಯದ ಹಿನ್ನಲೆ ಇಲ್ಲದೆ ನಾನು ಪ್ರವೇಶಿಸಿದ ರಾಜಕಾರಣದಲ್ಲಿ ಅನೇಕ ಮಜಲುಗಳನ್ನು ಕಂಡಿದ್ದೇನೆ. ಅಂದು ಸಾಮಾನ್ಯ ರೈತ ಕುಟುಂಬದಿಂದ ಪಕ್ಷೇತರನಾಗಿ ಪುರಸಭೆ ಚುನಾವಣಾ ಕಣಕ್ಕಿಳಿದಿದ್ದ ನನಗೆ ವಾರ್ಡಿನ ಮತದಾರರ ಅಭೂತಪೂರ್ವ ಬೆಂಬಲದೊಂದಿಗೆ ಆಯ್ಕೆಗೊಂಡು ಸಕ್ರಿಯ ರಾಜಕಾರಣ ಪ್ರವೇಶಿಸಿದೆ.

ಈ ಅಧ್ಯಕ್ಷಗಾಧಿಯ ಅ‍ವಧಿಯನ್ನು ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಮೀಸಲಿಟ್ಟು ನನ್ನ ಇತಿಮಿತಿಯಲ್ಲಿ ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು. ಪಟ್ಟಣಕ್ಕೆ ಸಮೀಪದ ಕಂಸಾಗರ ಗ್ರಾಮಕ್ಕೂ ಕಡೂರು ಪಟ್ಟಣಕ್ಕೂ ಅವಿನಾಭಾವ ಸಂಭಂಧ ಇಂದಿಗೂ ಇದೆ. ಗ್ರಾಮದ ಎಲ್ಲ ಸಮುದಾಯಗಳ ಸಮನ್ವತೆಯಿಂದ ಒಗ್ಗಟ್ಟನ್ನು ಪ್ರದರ್ಶಿಸಿರುವುದು ಸಂತಸ ತಂದಿದೆ. ಅಂದು ತಾವು ಪುರಸಭೆ ಅಧ್ಯಕ್ಷ ನಾಗಲು ತಾಪಂ ಮಾಜಿ ಅಧ್ಯಕ್ಷ ಸಿಗೇಹಡ್ಲು ಹರೀಶ್ ಪ್ರಮುಖರಾಗಿದ್ದರು. ಇದಕ್ಕೆ ಪೂರಕವಾಗಿ ಪುರಸಭಾ ಸದಸ್ಯರ ಬೆಂಬಲವೂ ಸಹಕಾರಿ ಆಯಿತು. ಶ್ರೀಕರಿಯಮ್ಮನ ದೇವಾಲಯಕ್ಕೆ ವೈಯಕ್ತಿಕವಾಗಿ 50 ಸಾವಿರ ರು. ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಕ್ಷೇತ್ರದ ಶಾಸಕರೊಡನೆ ಚರ್ಚಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸುತ್ತೇನೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ರೇವಣ್ಣ ಮಾತನಾಡಿ, ಎಲ್ಲರ ಪ್ರೀತಿ ವಿಶ್ವಾಸದಿಂದ ಭಂಡಾರಿ ಶ್ರೀನಿವಾಸ್ ನಾಲ್ಕನೇ ಅ‍ವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಗ್ರಾಮದೇವತೆ ಶ್ರೀ ಕರಿಯಮ್ಮನವರ ದೇವಾಲಯಕ್ಕೆ 50 ಸಾವಿರ ರು. ನೀಡಿದ್ದು, ಮುಂದೆ ಅವರಿಗೆ ಇನ್ನಷ್ಟು ಉನ್ನತ ಸ್ಥಾನಗಳು ಲಭಿಸಲಿ. ಗ್ರಾಮದ ಎಲ್ಲ ಸಮಾಜಗಳ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶುಭ ಹಾರೈಸಿದರು.ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಲೋಕೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಿಗೇಹಡ್ಲು ಹರೀಶ್, ಯರದಕೆರೆ ರಾಜಪ್ಪ, ಮರುಗುದ್ದಿ ಮನು, ಕೆ. ಎಸ್. ತಿಪ್ಪೇಶ್, ಕಂಸಾಗರ ರೇವಣ್ಣ, ಪರಮೇಶ್ವರಪ್ಪ, ಗೋಪಿನಾಥ್, ಪ್ರದೀಪ್, ಮೆಡಿಕಲ್ ತಮ್ಮಯ್ಯ, ಡಿಶ್ ಮಂಜುನಾಥ್,ಶೇಖರ್, ಪುಟ್ಟಸ್ವಾಮಿ, ಹರೀಶ್, ರಾಜೇಶ್, ತ್ಯಾಗರಾಜ್, ತಮ್ಮಯ್ಯ,ರಘು, ಚಂದ್ರನಾಯ್ಕ್ ಮತ್ತಿತರಿದ್ದರು.


6ಕೆಕೆಡಿಯು2.

ಕಡೂರು ತಾಲೂಕಿನ ಕಂಸಾಗರ ಗ್ರಾಮದಲ್ಲಿ 4ನೇ ಬಾರಿಗೆ ಪುರಸಭಾ ಅಧ್ಯಕ್ಷರಾಗಿ ಆಯ್ಕೆಯಾದ ಭಂಡಾರಿ ಶ್ರೀನಿವಾಸ್ ಅವರಿಗೆ ಗ್ರಾಮಸ್ಥರು ಅಭಿನಂದಿಸಿದರು.