ಧಾರವಾಡ:
ಮಹಾಂತ ಶಿವಯೋಗಿಗಳು ತಮ್ಮ ಜೋಳಿಗೆಯಲ್ಲಿ ಮಾದಕ ವಸ್ತು ಹಾಕಿಸಿಕೊಳ್ಳುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದರು ಎಂದು ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಇಲ್ಲಿನ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆಯ ಸಭಾಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಾರ್ತಾ ಇಲಾಖೆ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವೆಂದು ಶ್ರೀಗಳು ನಂಬಿದ್ದರು. ಅವರ ದೃಷ್ಟಿಯಲ್ಲಿ ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವಲ್ಲ, ಅದು ಮಾನಸಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆರೋಗ್ಯವಾಗಿತ್ತು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಮಾತನಾಡಿ, ಕುಟುಂಬದ ಮುಖ್ಯಸ್ಥರು ದುಶ್ಚಟಕ್ಕೆ ಬಿದ್ದರೆ ಆ ಕುಟುಂಬದ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ಸಾವಿರಾರು ಜನರು ದುಶ್ಚಟಗಳಿಗೆ ಬಿದ್ದು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಎಂದರು.ಡಿಮಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ, ಮಾತನಾಡಿ. ಮಾದಕ ವ್ಯಸನವು ವ್ಯಕ್ತಿಯ ದೇಹಕ್ಕೆ ಮಾತ್ರವಲ್ಲ, ಇಡೀ ಕುಟುಂಬಕ್ಕೂ ಹಾನಿಯನ್ನುಂಟು ಮಾಡುತ್ತದೆ. ವ್ಯಸನದ ಪರಿಣಾಮವಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ವರ್ಧನೆ ಮತ್ತು ವ್ಯಸನ ಮುಕ್ತತೆಯ ಉಪಾಯಗಳ ಕುರಿತು ಡಿಮ್ಹಾನ್ಸ್ ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ ಎಂ. ವಿಶೇಷ ಉಪನ್ಯಾಸ ನೀಡಿದರು. ವೈದ್ಯಕೀಯ ಅಧೀಕ್ಷಕ ಡಾ. ರಾಘವೇಂದ್ರ ನಾಯಕ ಪ್ರತಿಜ್ಞಾವಿಧಿ ಬೋಧಿಸಿದರು.ಡಿಮ್ಹಾನ್ಸ್ ಮುಖ್ಯ ಆಡಳಿತಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಶುಶ್ರ್ರೂಷಾಧಿಕಾರಿ ಪಾರ್ವತಿ ಕೆಂಗನೂರು, ಆರ್ಥಿಕ ಸಲಹೆಗಾರ ತಮ್ಮಣ್ಣ ಕೃಷ್ಣಪ್ಪ ಈಳಿಗೇರ, ಡಾ. ಮಂಜುನಾಥ ಭಜಂತ್ರಿ, ಡಾ. ಆರ್. ಶ್ರೀವಾಣಿ, ಡಾ. ಸುನೀಲಕುಮಾರ ರೋಣದ, ಪ್ರಶಾಂತ ಪಾಟೀಲ, ಓಬಾ ನಾಯ್ಕ, ಡಾ. ಶ್ರೀಧರ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ನಸೀರಾಬಿ ವೈ. ಶೇಖ ಅವರು ಸ್ವಾಗತಿಸಿದರು. ಡಿಮಾನ್ಸ್ ಮನೋವೈದ್ಯಕೀಯ ಸಮಾಜದ ಕಾರ್ಯಕರ್ತ ಡಾ. ಅಶೋಕ ಕೋರಿ ನಿರೂಪಿಸಿದರು. ಡಿಮಾನ್ಸ್ ಮನೋವೈದ್ಯಕೀಯ ಸಮಾಜದ ಕಾರ್ಯಕರ್ತ ಆರ್.ಎಂ. ತಿಮ್ಮಾಪುರ ವಂದಿಸಿದರು.