ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ಜೂ. 27ರಿಂದ ಜುಲೈ 3ರ ವರೆಗೆ ಮಹಾರಾಜಾ ಟ್ರೋಫಿ ಟಿ20 ಟೂರ್ನಿಯ 2ನೇ ಹಂತದ ಲೀಗ್ ಪಂದ್ಯಗಳು ನಡೆಯಲಿವೆ. ಈಗಾಗಲೇ ಮೈದಾನವನ್ನು ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸಲಾಗಿದೆ. ಪಂದ್ಯ ವೀಕ್ಷಣೆಗೆ 8 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್ಸಿಎ ಧಾರವಾಡ ವಲಯದ ಸಂಚಾಲಕ ವೀರಣ್ಣ ಸವಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಕೆಎಸ್ಸಿಎ ಮೈದಾನದಲ್ಲಿ 5 ಹೊನಲು ಬೆಳಕಿನ ಪಂದ್ಯ, 7 ಹೊನಲು(ಹಗಲು) ಪಂದ್ಯ ಸೇರಿ ಒಟ್ಟು 12 ಪಂದ್ಯಗಳು ನಡೆಯಲಿವೆ. ಮೈದಾನದಲ್ಲಿ ಈ ಹಿಂದೆ ಅಳವಡಿಸಿದ್ದ ಮೆಟಲ್ ಲೈಟ್ಗಳನ್ನು ತೆಗೆದು ಅತ್ಯಾಧುನಿಕ ಮಾದರಿಯ ಎಲ್ಇಡಿ ಲೈಟ್ಗಳ ಅಳವಡಿಸಲಾಗಿದೆ. ಇದರೊಂದಿಗೆ ಪಂದ್ಯಗಳು ನಿರಾತಂಕವಾಗಿ ನಡೆಸಲು ಬೇಕಾದ ಪೂರಕ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.ಟೂರ್ನಿ ಹಿನ್ನೆಲೆಯಲ್ಲಿ ಸೂಪರ್ ಶಾಪರ್ 2, ಲಾನ್ ಮೂವರ್ 2, ರೋಲರ್, ಗ್ರಾಸ್ ಕಟಿಂಗ್ ಮಷಿನ್ ಸೇರಿದಂತೆ ಅಗತ್ಯ ಯಂತ್ರೋಪಕರಗಳನ್ನು ಸಜ್ಜುಗೊಳಿಸಿಕೊಳ್ಳಲಾಗಿದೆ. ಹಾಗೆಯೇ 2 ಆ್ಯಂಬುಲೆನ್ಸ್, ಇಬ್ಬರು ವೈದ್ಯರು, ಇಬ್ಬರು ನರ್ಸ್ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಕಾಮೆಂಟರ್, ಡಿಎಸ್ಆರ್, ಎಸಿಎಸ್ಯು, ಮಿಡಿಯಾ, ಬ್ರಾಡ್ಕಾಸ್ಟಿಂಗ್ ಟೀಂಗೆ ಪ್ರತ್ಯೇಕ ವಿಭಾಗ ಮಾಡಿ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಆಟಗಾರರು, ವಿವಿಐಪಿ, ಕೆಎಸ್ಸಿಎ ಸಿಬ್ಬಂದಿ, ಪ್ರಾಂಚೈಸಿಗಳ ಪ್ರವೇಶಕ್ಕೆ ಗೇಟ್-1ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಗೇಟ್-3ನಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಿದ್ದು, 1500 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಪ್ರವೇಶಕ್ಕೆ ₹200 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಹಾಗೆಯೇ ಅಲ್ಲಿಯೇ 3ಎ ಬ್ಲಾಕ್ ಮಾಡಿದ್ದು, ಅಲ್ಲಿನ ಪ್ರಾಯೋಜಕರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗೇಟ್-4ರಲ್ಲಿ ಜನರಲ್ ಪಬ್ಲಿಕ್ ಸ್ಟ್ಯಾಂಡ್ ನಿರ್ಮಿಸಿದ್ದು, ಇಲ್ಲಿ 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ₹150 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಗೇಟ್-5ರಲ್ಲಿ ಕ್ಲಬ್ ಸ್ಯಾಂಡ್ ನಿರ್ಮಿಸಿದ್ದು, 300 ಆಸನಗಳ ವ್ಯವಸ್ಥೆ ಮಾಡಲಾಗಿದೆ. 6 ಫುಡ್ ಸ್ಟಾಟ್, ನಾಲ್ಕು ಮೊಬೈಲ್ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಎಲ್ಲ ಬಗೆಯ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.ಆಟಗಾರರು ಹಾಗೂ ಸಾರ್ವಜನಿಕರ ಭದ್ರತೆ ದೃಷ್ಟಿಯಿಂದ ಪೊಲೀಸ್ ಭದ್ರತೆ ಜತೆಗೆ ಹೆಚ್ಚುವರಿ ಖಾಸಗಿ ಭದ್ರತಾ ವ್ಯವಸ್ಥೆ ಕೂಡ ಮಾಡಲಾಗಿದೆ. ಒಟ್ಟು ಏಳು ದಿನಗಳ ಕಾಲ ನಡೆಯುವ ಪಂದ್ಯಗಳನ್ನು ಅಚ್ಚುಕಟ್ಟಾಗಿ ನಡೆಸಲು ಕೆಎಸ್ಸಿಎ ಧಾರವಾಡ ವಲಯ ಪೂರ್ಣ ಪ್ರಮಾಣದಲ್ಲಿ ಸನ್ನದ್ಧಗೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಎಸ್ಸಿಎ ಧಾರವಾಡ ವಲಯ ಅಧ್ಯಕ್ಷ ಅಲ್ತಾಫ್ ಕಿತ್ತೂರ, ಮಹಾರಾಜಾ ಟ್ರೋಫಿ ಕೌನ್ಸಿಲ್ ಸದಸ್ಯ ಎ.ವಿ. ಶಶಿಧರ ಸೇರಿದಂತೆ ಹಲವರಿದ್ದರು.