ಮಹಾತ್ಮರ ಜಯಂತಿ ಎಲ್ಲರೂ ಒಗ್ಗೂಡಿ ಆಚರಿಸಬೇಕು: ಎಚ್.ಡಿ. ತಮ್ಮಯ್ಯ
KannadaprabhaNewsNetwork | Published : Oct 29 2023, 01:00 AM IST
ಮಹಾತ್ಮರ ಜಯಂತಿ ಎಲ್ಲರೂ ಒಗ್ಗೂಡಿ ಆಚರಿಸಬೇಕು: ಎಚ್.ಡಿ. ತಮ್ಮಯ್ಯ
ಸಾರಾಂಶ
ಮಹಾತ್ಮರ ಜಯಂತಿ ಎಲ್ಲರೂ ಒಗ್ಗೂಡಿ ಆಚರಿಸಬೇಕು: ಎಚ್.ಡಿ. ತಮ್ಮಯ್ಯ
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಮಹಾತ್ಮರ ಜಯಂತಿಗಳನ್ನು ಸಮಾಜದ ಎಲ್ಲಾ ವರ್ಗದ ಜನರು ಒಗ್ಗೂಡಿ ಆಚರಿಸಿದಾಗ ಅದಕ್ಕೊಂದು ಅರ್ಥ ಬರುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನಕ್ಕೆ ರಾಜ್ಯ ಸರ್ಕಾರ 75 ಲಕ್ಷ ರು. ಅನುದಾನ ಮಂಜೂರು ಮಾಡಿದೆ. ವಾಲ್ಮೀಕಿ ಭವನದ ಕಾಮಗಾರಿ ಈಗಾಗಲೇ ಶೇ. 90 ರಷ್ಟು ಮುಗಿದಿದೆ. ಕಾಮಗಾರಿ ಪೂರ್ಣಗೊಳ್ಳಲು ತಾಂತ್ರಿಕವಾಗಿ ಕೆಲವು ಅಡಚಣೆಗಳಿದ್ದು, ಜಿಲ್ಲಾಧಿಕಾರಿಗಳು ಮತ್ತು ಜಿಪಂ ಕಾರ್ಯನಿರ್ವಹಣಾಧಿಕಾರಿಗಳು ಬಗೆಹರಿಸಿ ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಭವನವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದ ಅವರು, ಮುಂದಿನ ವರ್ಷ ವಾಲ್ಮೀಕಿ ಜಯಂತಿಯನ್ನು ಹೊಸ ಭವನದಲ್ಲೇ ಮಾಡಲಾಗುವುದು ಎಂದು ತಿಳಿಸಿದರು. ಮಹಾತ್ಮರ ಜಯಂತಿ ಕೇವಲ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಬಾರದು. ಅವು ಸಾರ್ವಜನಿಕ ಜಯಂತಿ ಯಾಗಬೇಕು. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು, ವಾಲ್ಮೀಕಿ, ನಾರಾಯಣ ಗುರುಗಳು ಸೇರಿದಂತೆ ಎಲ್ಲಾ ಮಹಾತ್ಮರು ಶೋಷಿತ ವರ್ಗದ ಉದ್ದಾರಕ್ಕಾಗಿ ಸಮಾಜದ ಹಿತಕ್ಕಾಗಿ ಕೆಲಸ ಮಾಡಿದ್ದಾರೆ. ಅವರ ಜಯಂತಿಗಳನ್ನು ಎಲ್ಲಾ ವರ್ಗಗಳ ಜನರು ಸಾರ್ವಜನಿಕರು ಒಗ್ಗೂಡಿ ಆಚರಿಸಬೇಕು ಎಲ್ಲರೂ ಜಯಂತಿಗಳಲ್ಲಿ ಭಾಗವಹಿಸುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ವಾಲ್ಮೀಕಿ ಮಹರ್ಷಿ ಈ ನಾಡಿನ ಬಹುದೊಡ್ಡ ಆಸ್ತಿ ಅವರನ್ನು ಯಾವುದೋ ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಬಹುದೊಡ್ಡ ಅಪರಾಧ ವಾಗುತ್ತದೆ ಎಂದರು. ಮಹಾಭಾರತವನ್ನು ಬರೆದವರು ವೇದವ್ಯಾಸರು, ರಾಮಾಯಣವನ್ನು ಬರೆದವರು ವಾಲ್ಮೀಕಿ ಮಹರ್ಷಿಗಳು, ಇವರಿಬ್ಬರೂ ಅಸ್ಪೃಶ್ಯರೇ ಆಗಿದ್ದರೂ ಸಮಾಜಕ್ಕೆ ರಾಮಾಯಣ ಮಹಾಭಾರತ ದಂತಹ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅದು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಹಾಗಾಗ ಬೇಕಾದರೆ ಅವರ ವಿಚಾರಧಾರೆಗಳನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡಬೇಕು. ಮುಂದಿನ ಪೀಳಿಗೆ ಅವರ ಹಾದಿಯಲ್ಲಿ ನಡೆಯುವಂತೆ ಮಾಡಬೇಕು ಎಂದು ಸಲಹೆ ಮಾಡಿದರು. ವಾಲ್ಮೀಕಿ ಮಹರ್ಷಿ ಮತ್ತು ಮಹಾತ್ಮರ ವಿಚಾರಧಾರೆ ಎಲ್ಲರಿಗೂ ತಲುಪಿಸುವ ಕೆಲಸ ಮಾಡಿದರೆ ಮಾತ್ರ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗುತ್ತದೆ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ಹೇಳಿದರು. ರಾಮಾಯಣದ ಕನ್ನಡ ಅವತರಣಿಕೆ ಶ್ಲೋಕವನ್ನು ಇದೇ ವೇಳೆ ಸಬಿಕರೆದುರು ಹಾಡಿ ರಂಜಿಸಿದ ಅವರು ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಎಲ್ಲರೂ ಮುಂದಾಗಬೇಕು ಎಂದರು. ಹೊಸ ನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ. ಶ್ರೀಪತಿ ಹಳಗುಂದ ಅವರು ಮಹರ್ಷಿ ವಾಲ್ಮೀಕಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣು ಗೋಪಾಲ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮ್ಟೆ, ಜಿಪಂ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ. ಗೋಪಾಲ್ ಕೃಷ್ಣ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಭೀಮಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಯುವಕರ ಸಂಘದ ಅಧ್ಯಕ್ಷ ಜಗದೀಶ್ ಕೋಟೆ, ಐಟಿಡಿಪಿ ಅಧಿಕಾರಿ ಭಾಗೀರಥಿ ಉಪಸ್ಥಿತರಿದ್ದರು. 28 ಕೆಸಿಕೆಎಂ 2 ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಎಸ್.ಎಲ್. ಭೋಜೇಗೌಡ ಉದ್ಘಾಟಿಸಿದರು.