ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದಲ್ಲಿ ಶಿಸ್ತು, ಶ್ರಮ, ಸಾಧನೆಯ ಮೂಲಕ ಸಮಾಜಕ್ಕೆ ಒಂದು ವಿಶೇಷ ಕೊಡುಗೆ ನೀಡುವ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಬೆಳಗಾವಿ ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ನಿರಂಜನ ಪಾಟೀಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಗರದ ಜಿ.ಎ ಪ್ರೌಢಶಾಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಒಂದು ವಿಶೇಷವಾದ ಸಾಮರ್ಥ್ಯ ಇರುತ್ತದೆ. ಅದನ್ನು ಸಾಧಿಸಲು ಶಿಸ್ತು, ಶ್ರಮ, ನಿರಂತರ ಅಧ್ಯಯನ ಬೇಕಾಗುತ್ತದೆ. ಒಬ್ಬ ಕ್ರೀಡಾಪಟು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕಾದರೇ ಅದಕ್ಕಾಗಿ ಅಪಾರವಾದ ಸಾಧನೆಯೆಂಬ ತಪಸ್ಸು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯದ ಕನಸು ಸಾಕಾರಕ್ಕಾಗಿ ಈಗಿನಿಂದಲೇ ಉತ್ತಮ ವಿಚಾರ ಹಾಗೂ ಗುರಿ ಇಟ್ಟುಕೊಂಡು ಶ್ರೇಷ್ಠ ಪ್ರಜೆಯಾಗಿ ಬಾಳಬೇಕು ಎಂದು ತಿಳಿಸಿದರು. ಶಿಕ್ಷಕರ ಒತ್ತಾಯಕ್ಕೋ, ತಂದೆ- ತಾಯಿಯರ ಕಷ್ಟದ ಮಾತುಗಳಿಗೋ, ಸಹಪಾಠಿಯ ಓದನ್ನು ನೋಡಿ ನಾನು ಅವನಂತೆ ಓದಬೇಕು ಎಂಬ ತಕ್ಷಣದ ಸೀಮಿತ ಪ್ರಚೋದಕ್ಕೋ ಒಳಗಾಗದೇ ಶಾಶ್ವತತೆಯ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ನಾವು ದೃಢವಾದ ಹೆಜ್ಜೆ ಇಡಬೇಕು. ಯಶಸ್ಸು ಎನ್ನುವುದು ಸಾಕಷ್ಟು ಶಿಸ್ತು ಮತ್ತು ಶ್ರದ್ಧೆ ಬಯಸುತ್ತದೆ. ಅದಕ್ಕಾಗಿ ನಾವು ಸೀಮಿತ ಅವಧಿಯ ಪ್ರೇರಣೆ-ಪ್ರಚೋದಕ ಇಟ್ಟುಕೊಳ್ಳದೆ ಶಿಕ್ಷಣ, ಸಂಸ್ಕಾರ, ಪ್ರೇರಣೆ ಈ ಮೂರರ ಸಂಯೋಜನೆಯ ಮೂಲಕ ಶಿಸ್ತು ಬದ್ಧ ವ್ಯಕ್ತಿ ಎಂದು ತೋರಿಸಿ ಕೊಡಬೇಕು ಎಂದರು.ನನ್ನಲ್ಲಿ ಪ್ರತಿಕ್ಷಣವೂ ಜ್ಞಾನವನ್ನು ಪಡೆದುಕೊಳ್ಳುವ ಹಂಬಲವಿದೆ. ಇದನ್ನು ನಾನು ಮಾಡಬಲ್ಲೆ, ಸಾಧಿಸಬಲ್ಲೆ ಎಂಬ ಹುಮ್ಮಸ್ಸು ಇದ್ದರೆ ಅವರ ಜೀವನದಲ್ಲಿ ಸದಾಕಾಲವೂ ಸಂತೋಷದಿಂದ ಬಾಳಿ ಆತ್ಮವಿಶ್ವಾಸದಿಂದ ಬದುಕುವುದು ಸಾಧ್ಯ. ಇದರಿಂದ ನಾವು ಯಾವುದೇ ಹಂತಕ್ಕೆ ಬೇಕಾದರೂ ತಲುಪಬಹುದು. ಮಾನಸಿಕವಾಗಿ ಗಟ್ಟಿಯಾಗುವ ಜೊತೆಗೆ ಆರ್ಥಿಕವಾಗಿಯೂ ಸಬಲರಾಗಬಹುದು ಎಂದು ಆಶಯ ವ್ಯಕ್ತಪಡಿಸಿದರು.ಯಾವುದೇ ಸ್ಥಾನ-ಮಾನದಲ್ಲಿ ಇದ್ದರೂ ಅವರಲ್ಲಿ ಸೇವಾಭಾವ, ಸಮಾಜದೊಂದಿಗೆ ಬೆರೆಯುವ ಮನಸ್ಥಿತಿ ಬಹಳ ಮುಖ್ಯವಾಗುತ್ತದೆ. ನಾವು ಸಿನಿಮಾವನ್ನು ನೋಡುತ್ತೇವೆ. ಆದರೆ, ಅದು ವಾಸ್ತವಿಕ. ಸಿನಿಮಾದಂತೆ ಬದುಕು ನಡೆಸಿದರೆ ಅದರ ಒಳಿತು ಹಾಗೂ ಕೆಡುಕು ಎರಡನ್ನು ಮನವರಿಕೆ ಮಾಡಿಕೊಳ್ಳಬಹುದು. ಸಿನಿಮಾವೇ ತನ್ನ ಜೀವನ ಎಂಬಂತೆ ಜೀವನ ನಡೆಸದೆ ಸಿನಿಮಾ ವಾಸ್ತವಿಕವೆಂದು ತಿಳಿದು ಬದುಕುವ ವ್ಯಕ್ತಿಯ ಜೀವನ ಸುಖಮಯವಾಗುತ್ತದೆ. ಜೀವನವನ್ನು ಸಹ ಇದೇ ರೀತಿ ಅರ್ಥೈಸಿಕೊಳ್ಳಬೇಕು. ಕಷ್ಟವನ್ನು ಅರಗಿಸಿ ಬೆಳೆಯ ಬೇಕಾದರೆ ಆತ್ಮವಿಶ್ವಾಸದಿಂದ ಬದುಕುವಂತಾಗಬೇಕು. ಸಮಾಜ ಪೀಡಕರು, ಸಮಾಜದಲ್ಲಿ ಕೆಲಸಕ್ಕೆ ಬಾರದ ವ್ಯಕ್ತಿಯಾಗದೆ ಸ್ವ ಪ್ರಯತ್ನ ಮಾಡಿದರೆ ಯಶಸ್ಸು ಎನ್ನುವುದು ಜೀವನದಲ್ಲಿ ನಿಮ್ಮ ಪಾಲಿಗೆ ಒದಗಿ ಬರಲಿದೆ ಎಂದರು.ಈ ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು, ಯಾವುದು ಇಲ್ಲ ನಹೀ ಜ್ಞಾನೇನ ಸದೃಶಂ ಎನ್ನುವಂತೆ ಪ್ರತಿದಿನವೂ ಹೆಚ್ಚು ಹೆಚ್ಚು ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ಈ ಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ನಾವು ಬಾಳಲು ಶ್ರಮಿಸಬೇಕು ಈ ಮೂಲಕ ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಇನ್ನು ಕೇವಲ ೪೪ ದಿನ ಮಾತ್ರ ಉಳಿದಿದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಈ ಅವಧಿಯಲ್ಲಿ ಅತ್ಯುತ್ತಮವಾಗಿ ಓದಿ ಭವಿಷ್ಯದ ವಿದ್ಯಾಭ್ಯಾಸಕ್ಕೆ ಭದ್ರವಾದ ಅಡಿಗಲು ಹಾಕಬೇಕು ಎಂದು ಸಲಹೆ ನೀಡಿದರು.ಜಿ.ಎ.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಸಿ.ಪಿ.ದೇವಋಷಿ ಮಾತನಾಡಿ, ಭಾರತ ವಿಶಿಷ್ಟವಾದ ದೇಶವಾಗಿದೆ. ಇಲ್ಲಿ ಇರುವಷ್ಟು ಜಾತಿ-ಧರ್ಮ- ಭಾಷೆ-ವೈಶಿಷ್ಟ್ಯಗಳು ಜಗತ್ತಿನ ಬೇರೆ ದೇಶದಲ್ಲಿ ಇಲ್ಲ. ವಿದ್ಯಾರ್ಥಿಗಳು ನಮ್ಮ ದೇಶದ ಶ್ರೇಷ್ಠ ಸಂಪತ್ತಾಗಿದ್ದು, ಮುಂದಿನ ದಿನಗಳಲ್ಲಿ ತಾವೆಲ್ಲರೂ ಶ್ರೇಷ್ಠ ಸಾಧನೆಯ ಮೂಲಕ ಉತ್ತಮ ನಾಗರಿಕರಾಗಿ ಸಮಾಜ ಹಾಗೂ ದೇಶಕ್ಕೆ ಉನ್ನತ ಕೊಡುಗೆ ನೀಡಬೇಕು ಎಂದು ತಿಳಿಸಿದರು.ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯ ಮಹದೇವ ಬಳಿಗಾರ ಉಪಸ್ಥಿತರಿದ್ದರು. ಎ.ಆರ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಯ ಏಳುಕೋಟಿ ಪರಿಚಯಿಸಿದರು. ಪಿ.ಎಸ್.ಚಿಮ್ಮಡ ವಾರ್ಷಿಕ ವರದಿ ಓದಿದರು. ಎಚ್.ಜಿ.ವೀರಗಂಟಿ, ಎ.ಜಿ.ಬಾಯನ್ನವರ ಪ್ರಶಸ್ತಿ ವಿತರಣೆ ನಡೆಸಿಕೊಟ್ಟರು. ಎಸ್.ಎಸ್. ಹಲವಾಯಿ ಶಿಕ್ಷಕರ ಪರ ನುಡಿಗಳನ್ನಾಡಿದರು. ಸಿ.ಎಂ.ಪಾಗಾದ, ವಿ.ಐ.ಅಂಗಡಿ ನಿರೂಪಿಸಿದರು.