ಮಕ್ಕಳಿಗೆ ಇರುಳುಗಣ್ಣು ಬಾರದಂತೆ ನೋಡಿಕೊಳ್ಳಿ

| Published : Jan 09 2025, 12:47 AM IST

ಸಾರಾಂಶ

ಚಿತ್ರದುರ್ಗ ಮಾರುತಿ ನಗರ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಲಿಗೆ ವಿಟಮಿನ ಎ ಕೊರತೆ ಕುರಿತ ಮಾಹಿತಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಕ್ಕಳಿಗೆ ಕಾಲಕಾಲಕ್ಕೆ ಎ ವಿಟಮಿನ್‌ ದ್ರಾವಣ ಕುಡಿಸಿ ಇರುಳುಗಣ್ಣು ಬಾರದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ತಿಳಿಸಿದರು.

ಇಲ್ಲಿನ ಮಾರುತಿ ನಗರ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಗೋಪಾಲಪುರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಎ ಅನ್ನಾಂಗ ದ್ರಾವಣ 1 ರಿಂದ 5 ವರ್ಷದ ಒಳಗಿನ ಮಕ್ಕಳಿಗೆ ಕೊಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಹದಲ್ಲಿ ನಾನಾ ಜೈವಿಕ ಪ್ರಕ್ರಿಯೆಯಲ್ಲಿ ಉಪಯೋಗಿಸಲ್ಪಡುವ ರೆಟಿನೋಲ್ ಅಥವಾ ರೆಟಿನೋಯಿಕ್ ಆಸಿಡ್ ಮತ್ತು ಇತರ ಪರಸ್ಪರ ಹೋಲಿಕೆಯೊಳ್ಳ ರಾಸಾಯನಿಕ ಪದಾರ್ಥಗಳ ಸಮೂಹವೇ ವಿಟಮಿನ್ ಎ ಅನ್ನಾಂಗವಾಗಿದೆ. ಇದು ದ್ರಾವಣ ರೂಪದಲ್ಲಿರುತ್ತದೆ. ವಿಟಮಿನ್ ಎ ಕೊರತೆ ವಿಟಮಿನ್ ಎಯ ಆಹಾರ ಸೇವನೆ ಮಾಡದಿರುವುದರಿಂದ ಉಂಟಾಗುತ್ತದೆ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ರಾತ್ರಿ ಕುರುಡುತನವು ವಿಟಮಿನ್ ಎ ಕೊರತೆಯ ಮೊದಲ ಚಿಹ್ನೆಗಳಲ್ಲಿ ಒಂದಾಗಿದೆ.

ಅದರ ತೀವ್ರ ಸ್ವರೂಪಗಳಲ್ಲಿ, ವಿಟಮಿನ್ ಎ ಕೊರತೆಯು ಕಾರ್ನಿಯಾವನ್ನು ತುಂಬಾ ಒಣಗಿಸುವ ಮೂಲಕ ಕುರುಡುತನಕ್ಕೆ ಕೊಡುಗೆ ನೀಡುತ್ತದೆ. ಹೀಗಾಗಿ ರೆಟಿನಾ ಮತ್ತು ಕಾರ್ನಿಯಾವನ್ನು ಹಾನಿಗೊಳಿಸುತ್ತದೆ ಎಂದರು.

ಈ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ನೂರು ದಿನಗಳ ಕ್ಷಯರೋಗ ಅಭಿಯಾನ ಬಗ್ಗೆ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ತಾಲೂಕು ಆಶಾ ಬೋಧಕಿ ತಬಿತ, ಶಾಲಾ ಶಿಕ್ಷಕರಾದ ಕಲ್ಪನಾ, ಶ್ವೇತಾ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ರೂಪ, ಭಾಗ್ಯಮ್ಮ, ಲಕ್ಕಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಶಿಲ್ಪ, ಸುಮಂಗಳ ಇದ್ದರು.