ಕನ್ನಡಪ್ರಭ ವಾರ್ತೆ ಕುಶಾಲನಗರ

ಜನಗಣತಿ ಕಾರ್‍ಯ ರಾಷ್ಟ್ರೀಯ ಕಾರ್‍ಯಕ್ರಮವಾಗಿದ್ದು, ಕಾನೂನು‌ ಬದ್ಧ ಕರ್ತವ್ಯವಾಗಿದೆ. ಶಿಕ್ಷಕರು ಉತ್ತಮ ಕೆಲಸ ಮಾಡುವ ಮೂಲಕ ಈ ಕಾರ್‍ಯವನ್ನು ಯಶಸ್ವಿಗೊಳಿಸಬೇಕು

ಎಂದು ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಮನವಿ ಮಾಡಿದರು.

ಕುಶಾಲನಗರ ಪಟ್ಟಣದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಂದಾಯ ಇಲಾಖೆ ವತಿಯಿಂದ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮೇಲ್ವಿಚಾರಕರು ಹಾಗೂ ಗಣತಿದಾರರಿಗೆ ಮೂರು ದಿನಗಳ ಕಾಲ ಮನೆ ಪಟ್ಟಿ ಹಾಗೂ ಜನಗಣತಿ ಕಾರ್‍ಯ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್‍ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಗಣತಿ ಕಾರ್‍ಯವನ್ನು ಶಿಕ್ಷಕರು ಜವಾಬ್ದಾರಿಯಿಂದ ನಿರ್ವಹಿಸುವ ವಿಶ್ವಾಸವಿದೆ ಎಂದರು.

ಕುಶಾಲನಗರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 164 ಬ್ಲಾಕ್ ಗಳನ್ನು ಗುರುತಿಸಿದ್ದು, 30 ಮಂದಿ ಮೇಲ್ವಿಚಾರಕರು ಹಾಗೂ 174 ಗಣತಿದಾರರು ಗಣತಿ ಕಾರ್‍ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.


ರಾಷ್ಟ್ರೀಯ ಜನಗಣತಿ ಕಾರ್‍ಯಕ್ಕೆ ನೇಮಕಗೊಂಡಿರುವ ಗಣತಿದಾರರು ಮೊದಲ ಹಂತದ ಮನೆ ಪಟ್ಟಿ ಕಾರ್‍ಯದಲ್ಲಿ ನಿಗದಿ ಪಡಿಸುವ ಪ್ರದೇಶಗಳ ನಕ್ಷೆಯನ್ನು ಸಮರ್ಪಕವಾಗಿ ತಯಾರಿಸಿಕೊಂಡರೆ ಜನಗಣತಿ ಕಾರ್‍ಯ ಸುಲಭವಾಗುತ್ತದೆ ಎಂದು ತಹಸೀಲ್ದಾರ್ ಕಿರಣ್ ಗೌರಯ್ಯ ಹೇಳಿದರು.

ರಾಷ್ಟ್ರೀಯ ಜನಗಣತಿಯ ಮೊದಲ ಭಾಗವಾಗಿ ಮನೆ ಮನೆಗಳ ಪಟ್ಟಿ ಸರ್ವೆ ಕಾರ್‍ಯ ಏ. 16ರಿಂದ ಪ್ರಾರಂಭಗೊಂಡು ಮೇ 15ಕ್ಕೆ ಮುಕ್ತಾಯಗೊಳ್ಳಲಿದೆ. ‌ಪ್ರತಿಯೊಬ್ಬಗಣತಿದಾರರು ನಿಗದಿಪಡಿಸುವ ಪ್ರದೇಶಗಳ ಮನೆಗಳನ್ನು ಗುರುತಿಸುವ ನಕ್ಷೆ ಕಾರ್‍ಯವನ್ನು ಕಡ್ಡಾಯವಾಗಿ ಪೂರ್ಣಗೊಳಿಸುವ ಮೂಲಕ ಮಹತ್ವದ ಯೋಜನೆಯ ಯಶಸ್ಸಿ‌ಗೆ ಶ್ರಮಿಸಿ ಎಂದು ಸಲಹೆ ನೀಡಿದರು.ಇಂದಿನ ಡಿಜಿಟಲ್ ಯುಗದಲ್ಲಿ ಜನಗಣತಿ ಕಾರ್‍ಯವನ್ನು ಸುಲಭಗೊಳಿಸಲು ಆನ್‌ ಲೈನ್ ಅಪ್ಲಿಕೇಶನ್ ವ್ಯವಸ್ಥೆ ಮಾಡಲಾಗಿದೆ. 1872ರಲ್ಲಿ ಆರಂಭವಾದ ಜನಗಣತಿ ಈಗ ಅದು 16ನೇ ಜನಗಣತಿಯಾಗಿದ್ದು, ಸ್ವಾತಂತ್ರ್ಯ ನಂತರದ 8ನೇ ರಾಷ್ಟ್ರೀಯ ಜನಗಣತಿಯಾಗಿ ಬಹಳ ಪ್ರಾಮುಖ್ಯತೆ ಪಡೆದಿದೆ‌. ದೇಶದ ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿಖರವಾದ ಅಂಕಿ- ಅಂಶಗಳ ಆಧಾರದ ಮೇಲೆ ಸರ್ಕಾರ ಯೋಜನೆಗಳನ್ನು ರೂಪಿಸಲು ಮೂಲ ಆಧಾರವಾಗಲಿದೆ ಎಂದು ತಹಸೀಲ್ದಾರ್ ಕಿರಣ್ ಗೌರಯ್ಯ ಹೇಳಿದರು.

ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಸಮಯದಲ್ಲಿ ಕೇಳುವ 33 ಪ್ರಶ್ನೆಗಳಿಗೆ ಸರಿಯಾದ ಉತ್ತರ ಪಡೆಯಬೇಕು. ಉತ್ತರ ನೀಡಲು ಕೆಲವು ಮಂದಿ ನಿರಾಕರಿಸಿದರೆ ಅವರೊಂದಿಗೆ ಸಂಯಮದಿಂದ ಮಾತನಾಡಿ ಗಣತಿಯ ಮಹತ್ವವನ್ನು ಅವರಿಗೆ ಅರ್ಥ ಮಾಡಿಸಿ ಮಾಹಿತಿ ಪಡೆಯುವಂತೆ ತಹಸೀಲ್ದಾರ್ ಸಲಹೆ ನೀಡಿದರು.

ಗಣತಿ ಕಾರ್ಯದಲ್ಲಿ ಗಣತಿದಾರರಿಗೆ ಏನೇ ಸಮಸ್ಯೆ ಎದುರಾದರೇ ತಕ್ಷಣವೇ ಮೇಲ್ವಿಚಾರಕರು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರೆ ಸಮಸ್ಯೆಗಳಿಗೆ ತಕ್ಷಣದಲ್ಲಿ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.ತರಬೇತಿ ಕಾರ್‍ಯಾಗಾರದಲ್ಲಿ ಉಪ ತಹಸೀಲ್ದಾರ್ ಎಂ.ಪಿ. ಪ್ರೀತು, ಕಂದಾಯ ನಿರೀಕ್ಷಕ ಎಚ್.ಎಸ್. ಸಂತೋಷ್, ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ಇದ್ದರು.ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಪಿ. ಪರಮೇಶ್, ಎಸ್.ಎನ್. ಲೋಕೇಶ್, ಕೆ. ಶಾಂತ ಕುಮಾರ್, ಪಿ.ಎಸ್. ರವಿಕೃಷ್ಣ , ಮನೆ ಸಮೀಕ್ಷೆ ಹಾಗೂ ಜನಗಣತಿ ಸಮೀಕ್ಷಾ ಕಾರ್‍ಯ ನಡೆಸುವ ಕುರಿತು ಪಿಪಿಟಿ ಮೂಲಕ ಪೂರಕ ಮಾಹಿತಿ ನೀಡಿದರು.ತರಬೇತಿ ಕಾರ್‍ಯಕ್ರಮದಲ್ಲಿ ಜನಗಣತಿ ಕಾರ್‍ಯದ ವಿಧಾನಗಳು, ಅಪ್ಲಿಕೇಶನ್ ಬಳಕೆ, ಮಾಹಿತಿ ಸಂಗ್ರಹಣೆಯ ನಿಯಮಗಳು ಹಾಗೂ ಜನರೊಂದಿಗೆ ಸಂವಹನ ಮಾಡುವ ವಿಧಾನಗಳ ಕುರಿತು ವಿವರವಾಗಿ ತಿಳಿಸಲಾಯಿತು.ತರಬೇತಿಯಲ್ಲಿ ಜನಗಣತಿಗೆ ಪೂರಕವಾಗಿ ಮೊದಲ ಹಂತದ ಮನೆ ಪಟ್ಟಿ ಕಾರ್‍ಯಾಚರಣೆ ಮಾಡುವ ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು.