ಭೀಮನಬೀಡು ಬಳಿ ಆರೋಪಿ ಸೆರೆ । ವಿರೋಧಿಸಿ ಜನರ ಪ್ರತಿಭಟನೆ
---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಜೋನ್ ವಲಯದ ಭೀಮನಬೀಡು ಬಳಿಯ ರಾಜ್ಯ ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಎಸ್ಟಿಪಿಎಫ್ ಸಿಬ್ಬಂದಿಯು ಓರ್ವ ಆರೋಪಿಯನ್ನು ನಾಡ ಬಂದೂಕು ಸಮೇತ ತಾಲೂಕಿನ ಮದ್ದಯ್ಯನಹುಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬಂಧಿಸಿದ್ದಾರೆ.ಗ್ರಾಮದ ನಾಗೇಶ್ ಹಾಗೂ ಮತ್ತೋರ್ವ ಭೀಮನಬೀಡು ಪ್ಲಾಂಟೇಶನ್ ಬಳಿ ಅತಿಕ್ರಮ ಪ್ರವೇಶಿಸಿದ್ದು, ಎಸ್ಟಿಪಿಎಫ್ ಸಿಬ್ಬಂದಿ ಸೋಮವಾರ ಥರ್ಮಲ್ ದ್ರೋನ್ ಹಾರಿಸುತ್ತಿದ್ದಾಗ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಡ್ರೋನ್ ಮೂಲಕವೇ ಆರೋಪಿಯ ಮನೆ ಕಂಡುಹಿಡಿದು, ಮನೆಯಲ್ಲಿದ್ದ ಲೋಡೆಡ್ ನಾಡ ಬಂಧೂಕು ಸಮೇತ ವಶಕ್ಕೆ ಪಡೆದಿದ್ದಾರೆ.ಹಿಡಿದದ್ದು ಹೀಗೆ?
ಅರಣ್ಯ ಪ್ರದೇಶದಲ್ಲಿ ಥರ್ಮಲ್ ದ್ರೋನ್ ಮೂಲಕ ಅತಿಕ್ರಮ ಪ್ರವೇಶಿಸಿದ ಇಬ್ಬರನ್ನು ಕಂಡ ಎಸ್ಟಿಪಿಎಫ್ ಸಿಬ್ಬಂದಿಗಳು ದ್ರೋನ್ ಮೂಲಕ ಆರೋಪಿಗಳನ್ನು ಹಿಂಬಾಲಿಸಿದಾಗ ಮದ್ದಯ್ಯನಹುಂಡಿ ಗ್ರಾಮದ ನಾಗೇಶ್ ಮನೆಯೊಳಗೆ ಹೋಗಿದ್ದಾನೆ.
ಎಸ್ಟಿಪಿಎಫ್ ಸಿಬ್ಬಂದಿ ನಾಗೇಶ್ ಮನೆಯೊಳಗೆ ಹೋಗಿ ಹುಡುಕಾಟ ನಡೆಸಿದಾಗ ಲೋಡೆಡ್ ನಾಡ ಬಂದೂಕು ಪತ್ತೆಯಾಗಿದ್ದು, ಸೋಮವಾರ ಮಧ್ಯರಾತ್ರಿ ವಿಚಾರಣೆಗೆ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಕರೆ ತಂದಿದ್ದಾರೆ.
ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಕನ್ನಡಪ್ರಭದೊಂದಿಗೆ ಮಾತನಾಡಿ, ಅರಣ್ಯ ಪ್ರದೇಶದೊಳಗೆ ಬೇಟೆಗೆ ಹೋಗುವ ಖಚಿತ ಮಾಹಿತಿ ಮೇರೆಗೆ ಎಸ್ಟಿಪಿಎಫ್ ಸಿಬ್ಬಂದಿ ಕಾದು ಕುಳಿತು, ಥರ್ಮಲ್ ಡ್ರೋನ್ ಮೂಲಕ ಪತ್ತೆ ಹೆಚ್ಚಿದ್ದಾರೆ ಎಂದರು.ಡ್ರೋನ್ ಮೂಲಕವೇ ಆರೋಪಿ ಮನೆಗೆ ಹೋದಾಗ ಆರೋಪಿ ಮನೆಯಲ್ಲಿ ಲೋಡೇಡ್ ನಾಡ ಬಂದೂಕು ಸಿಕ್ಕ ಹಿನ್ನಲೆ ವಿಚಾರಣೆಗೆ ಎಸ್ಟಿಪಿಎಫ್ ಸಿಬ್ಬಂದಿಯೇ ಕರೆತಂದಿದ್ದಾರೆ. ವಿಚಾರಣೆ ಬಳಿಕ ಮೆಡಿಕಲ್ ಚೆಕಪ್ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು ಎಂದರು.---
ಬಂಧಿತನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆಗುಂಡ್ಲುಪೇಟೆ: ಮದ್ದಯ್ಯನಹುಂಡಿ ಗ್ರಾಮದ ನಾಗೇಶ್ರನ್ನು ಅನುಮಾನಸ್ಪದವಾಗಿ ಕರೆತಂದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಪಟ್ಟಣದ ಎಸಿಎಫ್ ಕಚೇರಿ ಆವರಣದೊಳಗೆ ಪ್ರತಿಭಟನೆ ನಡೆಸಿದರು.
ಶಿಕಾರಿಗೆ ಹೋದ ಆರೋಪಿ ಬಂಧಿಸಿ, ನಾಡ ಬಂದೂಕು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ಶಿವಕುಮಾರ್ ಸ್ಪಷ್ಟನೆ ಒಪ್ಪದ ಪ್ರಗತಿಪರ ಸಂಘಟನೆಗಳ ಮುಖಂಡರಾದ ಸುಭಾಷ್ ಮಾಡ್ರಹಳ್ಳಿ ಹಲ್ಲೆ ನಡೆಸಿದ್ದು ಯಾಕೆ ಎಂದು ಪ್ರಶ್ನಿಸಿ ಪ್ರತಿಭಟನೆ ನಡೆಸಿದರು.ತನಿಖೆ ಬಳಿ ಆತ ತಪ್ಪಿತಸ್ಥ ಎಂದು ಹೇಳಬೇಕು. ಆದರೆ ಏಕಾಏಕಿ ಹಲ್ಲೆ ನಡೆಸಿರುವುದು ಖಂಡನೀಯ. ಕೂಡಲೇ ಎಸ್ಟಿಪಿಎಫ್ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅರಣ್ಯ ಇಲಾಖೆಯನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಾಹಿತಿ ಮದ್ದಯ್ಯನಹುಂಡಿ ನಾಗರಾಜು ಸೇರಿದಂತೆ ಗ್ರಾಮಸ್ಥರು ಇದ್ದರು.---
೭ಜಿಪಿಟಿ12ಗುಂಡ್ಲುಪೇಟೆ ಎಸಿಎಫ್ ಕಚೇರಿ ಆವರಣದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.