ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ವತಿಯಿಂದ ವಿಶ್ವ ಪರಿಸರ ದಿನವನ್ನು ‘ಪ್ರಕೃತಿಯಿಂದ ಪ್ರೇರಣೆ- ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ’ ಧ್ಯೇಯವಾಕ್ಯದಡಿ ಆಚರಿಸಲಾಯಿತು.ಅತಿಥಿಗಳು ದೀಪ ಬೆಳಗಿಸುವ ಹಾಗೂ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ರಾಜಸ್ಥಾನದ ಪಿಪ್ಲಾಂತ್ರಿ ಗ್ರಾಮದ ಖ್ಯಾತ ಪರಿಸರವಾದಿ ಹಾಗೂ ಸಾಮಾಜಿಕ ಸುಧಾರಕ ಪದ್ಮಶ್ರೀ ಶ್ಯಾಮ್ ಸುಂದರ್ ಪಾಲಿವಾಲ್ ಮಾತನಾಡಿ, ಗಿಡ ನೆಡುವುದು ಹಾಗೂ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಜವಬ್ದಾರಿ ಎಂದರು.ಎಂಆರ್ಪಿಎಲ್ ನಿರ್ದೇಶಕ (ರಿಫೈನರಿ) ನಂದಕುಮಾರ್ ವಿ.ಪಿಳ್ಳೈ ಮಾತನಾಡಿ, ಎಂಆರ್ಪಿಎಲ್ನ ಸುಸ್ಥಿರತಾ ಉಪಕ್ರಮಗಳಾದ ಪೈಲಟ್ ಪಿಇಟಿ ಬಾಟಲ್ ಮರುಬಳಕೆ ಘಟಕ ಸೇರಿದಂತೆ ಹಲವು ಪರಿಸರ ಸಂರಕ್ಷಣಾ ಕ್ರಮಗಳನ್ನು ವಿವರಿಸಿದರು.
ಎಂಆರ್ಪಿಎಲ್ ನಿರ್ದೇಶಕ (ಹಣಕಾಸು) ದೇವೇಂದ್ರ ಕುಮಾರ್, ಪರಿಸರ ಸ್ನೇಹಿ ಅಭ್ಯಾಸಗಳಾದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಸಂಪನ್ಮೂಲಗಳ ಸಂರಕ್ಷಣೆ ಹಾಗೂ ತ್ಯಾಜ್ಯ ವಿಂಗಡಣೆಯ ಅಗತ್ಯ ತಿಳಿಸಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್ಪಿಸಿಬಿ) ಪರಿಸರ ಅಧಿಕಾರಿ ಡಾ.ಮಂಜು ಆರ್. ಮಾತನಾಡಿ, ಎಂಆರ್ಪಿಎಲ್ನ ಪರಿಸರ ಸ್ನೇಹಿ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದರು.ಎಂಆರ್ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ (ರಿಫೈನರಿ) ಎನ್.ಆನಂದ ಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ವ್ಯವಹಾರ ಅಭಿವೃದ್ಧಿ) ದೀಪಕ್ ಪ್ರಭಾಕರ್ ಪಿ., ಕಾರ್ಯನಿರ್ವಾಹಕ ನಿರ್ದೇಶಕ (ಯೋಜನೆಗಳು) ಪಿ. ಸುಜಿತ್ ಮತ್ತಿತರರು ಇದ್ದರು. ಎಂಆರ್ಪಿಎಲ್ನ ಪರಿಸರ ಸಾಧನೆಗಳ ಕುರಿತು ಮಾಹಿತಿ ನೀಡಲಾಯಿತು. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪರಿಸರ ಪ್ರತಿಜ್ಞೆ ಬೋಧಿಸಲಾಯಿತು. ಮಂಗಳೂರಿನ ದಿನೇಶ್ ಅತ್ತಾವರ್ ತಂಡ ಯುವಜನರಲ್ಲಿ ಅತಿಯಾದ ಮೊಬೈಲ್ ಫೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತ ನಾಟಕ ಪ್ರದರ್ಶಿಸಿತು. ತಿಂಗಳ ಅವಧಿಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮಗಳ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದವರಿಗೆ ಸಸಿಗಳು ಹಾಗೂ ಬಟ್ಟೆ ಚೀಲಗಳನ್ನು ವಿತರಿಸಲಾಯಿತು.