ಕೆನರಾ ಹೈಸ್ಕೂಲ್ ಉರ್ವ ಪ್ರಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ರೋಟರಿ ೨೫ ವಾರ್ಷಿಕ ಅಂತರ ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರದ ಚಿಣ್ಣರ ಉತ್ಸವ ಸಂಪನ್ನಗೊಂಡಿತು.
ಮಂಗಳೂರು: ನಗರದ ಸುತ್ತಮುತ್ತಲಿನಲ್ಲಿ ಕಾರ್ಯಚರಿಸುತ್ತಿರುವ ೧೦ ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರದ ಸುಮಾರು ೪೩೦ ಮಕ್ಕಳಿಗೆ ಒದಗಿದ ಸುವರ್ಣ ಅವಕಾಶ, ಎಲ್ಲೆಲ್ಲೂ ಸಂತಸ, ಸಂಭ್ರಮ, ಉತ್ಸಾಹದ ವಾತಾವರಣ. ಪೋಷಕರ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದ ಮುಗ್ಧ ಮಕ್ಕಳು ಇತರ ಕೇಂದ್ರದ ಮಕ್ಕಳ ಜೊತೆಗೆ ಬೆರೆತು, ಮುಕ್ತವಾಗಿ ತಮ್ಮ ವ್ಯಥೆ, ಕಥೆ, ಕತೆ, ಚಿಂತೆ, ವೇದನೆಯನ್ನು ಮರೆತು ಹುರುಪು ಹಾಗೂ ಉತ್ಸಾಹದಿಂದ ನಕ್ಕು ಕುಣಿದಾಡಿದರು. ನಗರದ ಕೆನರಾ ಹೈಸ್ಕೂಲ್ ಉರ್ವ ಪ್ರಾಂಗಣದಲ್ಲಿ ಭಾನುವಾರ ನಡೆದ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ರೋಟರಿ ೨೫ ವಾರ್ಷಿಕ ಅಂತರ ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರದ ಚಿಣ್ಣರ ಉತ್ಸವದ ಝಲಕ್ ಇದು. ಸ್ನೇಹ ಮತ್ತು ಒಡನಾಟವನ್ನು ಸ್ಮರಿಸಿ ತಮ್ಮ ವೈಯುಕ್ತಿಕ ವಿವಿಧ ಸಿಹಿ ಕಹಿ ಅನುಭವಗಳನ್ನು ವಿನಿಮಯಿಸಿದರು. ಆಕರ್ಷಕ ಪಥ ಸಂಚಲನ ನಡೆದ ಬಳಿಕ ಕ್ರೀಡಾ ಸಾಮರ್ಥ್ಯ ಮತ್ತು ಗಾನ, ನೃತ್ಯ, ನಾಟಕ, ಕಲಾ, ಕೌಶಲ್ಯ, ಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು.
ಖ್ಯಾತ ಕನ್ನಡ ಚಲನಚಿತ್ರ ಕಲಾವಿದ ಹಾಗೂ ಸಂಗೀತ ನಿರ್ದೇಶಕ ಡಾ. ಗುರುಕಿರಣ್ ರವರು ಸ್ಪರ್ಧಾಕೂಟವನ್ನು ಉದ್ಘಾಟಿಸಿ, ರೋಟರಿ ಸಂಸ್ಥೆಯವರು ಚಿನ್ನರಿಗಾಗಿ ವಿನೂತನ ಪರಿಕಲ್ಪನೆಯನ್ನು ಆಯೋಜಿಸಿ ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಪ್ರಶಂಸನೀಯ ಎಂದು ಹೇಳಿದರು. ಬಳಿಕ ಕನ್ನಡ ಚಲನಚಿತ್ರದ ಹಾಡನ್ನು ಹಾಡಿ ಮಕ್ಕಳನ್ನು ರಂಜಿಸಿದರು.ಸಂಘಟನಾ ಅಧ್ಯಕ್ಷ ಡಾ. ದೇವದಾಸ್ ರೈ ಪ್ರಾಸ್ತಾವಿಕ ಮಾತಿನಲ್ಲಿ, ವಾರ್ಷಿಕ ಚಿಣ್ಣರ ಉತ್ಸವ ಕಾರ್ಯಕ್ರಮ ತಮ್ಮ ಸಂಸ್ಥೆಯ ಪ್ರತಿಷ್ಠಿತ ಸಮಾಜದ ಶ್ರೇಯೋಭಿವೃದ್ಧಿ ಸೇವಾ ಚಟುವಟಿಕೆಯ ಅಂಗವಾಗಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಒದಗಿಸಿ ಅವರ ಉತ್ಸಾಹಕ್ಕೆ ಸ್ಪಂದಿಸಿ, ಪ್ರೋತ್ಸಾಹಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುವುದು, ಒಂದು ದಿನದ ಉತ್ಸಾಹ, ಸಂತಸ ಹೊರಹೊಮ್ಮಿಸುವುದು ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ, ಪ್ರಮುಖ ಉದ್ದೇಶ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ರೈ ಸ್ವಾಗತಿಸಿದರು. ಜಿಲ್ಲಾ ರೋಟರಿ ವಲಯ ಸಹಾಯಕ ಗವರ್ನರ್ ಚಿನ್ನಗಿರಿ ಗೌಡ ಮತ್ತು ವಲಯ ಪ್ರತಿನಿಧಿ ರವಿ ಜಲನ್ ಮಾತನಾಡಿದರು.ರೋಟರಾಕ್ಟ್ ಸಂಸ್ಥೆಯ ಅಧ್ಯಕ್ಷ ಅಕ್ಷಯ್ ರೈ, ಕಾರ್ಯದರ್ಶಿ ವಿವೇಕ್ ರಾವ್ ಇದ್ದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ವಿಕಾಸ್ ಕೊಟ್ಯಾನ್ ವಂದಿಸಿದರು. ಕೆ.ಎಂ. ಹೆಗ್ಡೆ ನಿರೂಪಿಸಿದರು.
ಸಮಾರೋಪದಲ್ಲಿ ರೋಟರಿ ಜಿಲ್ಲಾ ಚುನಾಯಿತ ಗವರ್ನರ್ ಸತೀಶ್ ಬೋಳಾರ್ ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಿದರು.