ಮಂಗಳೂರು ವಿ.ವಿ. ಅಂತರ್‌ ಕಾಲೇಜು ಕಬಡ್ಡಿ ಪಂದ್ಯಾವಳಿ ಉದ್ಘಾಟನೆ

| Published : Nov 09 2024, 01:17 AM IST / Updated: Nov 09 2024, 01:18 AM IST

ಸಾರಾಂಶ

ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಮಾಜಿ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಮಾತನಾಡಿ, ಬಿ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡಿದಲ್ಲಿ ದೇಶಕ್ಕೆ ಉತ್ತಮ‌ ಪ್ರಜೆಯನ್ನು ನೀಡಬಹುದು. ಜೊತೆಗೆ ವಿದ್ಯಾರ್ಥಿಗಳಿಗೆ ಪರಿಶ್ರಮ ಅತೀ ಮುಖ್ಯ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ವಿಶ್ವವಿದ್ಯಾಲಯವು ಬೆಸೆಂಟ್ ಮಹಿಳಾ ಕಾಲೇಜು ಸಹಯೋಗದಲ್ಲಿ ಹಾಗೂ ದೈಹಿಕ ಶಿಕ್ಷಣ ಇಲಾಖೆ ಮತ್ತು ಒಳಗೊಣ ಗುಣಾತ್ಮಕ ಭರವಸೆ ಕೋಶ ಆಶ್ರಯದಲ್ಲಿ ಮೊನ್. ಅ. ಪಾಟ್ರಾವ್ ಸ್ಮಾರಕ ಟ್ರೋಫಿಗಾಗಿ ಎರಡು ದಿನದ ಮಹಿಳಾ ಅಂತರ್-ಕಾಲೇಜು ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ನಗರದ ಬೆಸೆಂಟ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ದೇಶದ ಮಣ್ಣಿನ ಆಟ ಕಬಡ್ಡಿ, ಆಟದಲ್ಲಿ ಸೋಲು ಗೆಲುವು ಎರಡನ್ನು ಸಮವಾಗಿ ಸ್ವೀಕರಿಸುವುದು ಉತ್ತಮ ಎಂದರು.

ಮಂಗಳೂರಿನ ಯುವ ಶಕ್ತಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಮಾತನಾಡಿ, ಸರ್ಕಾರದಿಂದ ಕ್ರೀಡೆಗೆ ಸಿಗುತ್ತಿರುವ ಪ್ರೋತ್ಸಾಹ ಅಪಾರ. ಇದರ ಅವಕಾಶ ಸದುಪಯೋಗ ಪಡಿಸಿಕೊಳ್ಳಿ, ಉತ್ತಮ‌ ಜೀವನ‌ ರೂಪಿಸಿಕೊಳ್ಳಿ‌ ಎಂದರು.

ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಮಾಜಿ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಮಾತನಾಡಿ, ಬಿ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡಿದಲ್ಲಿ ದೇಶಕ್ಕೆ ಉತ್ತಮ‌ ಪ್ರಜೆಯನ್ನು ನೀಡಬಹುದು. ಜೊತೆಗೆ ವಿದ್ಯಾರ್ಥಿಗಳಿಗೆ ಪರಿಶ್ರಮ ಅತೀ ಮುಖ್ಯ ಎಂದರು.

ಬೆಸಂಟ್ ಮಹಿಳಾ ಕಾಲೇಜಿನ‌ ಉಪಾಧ್ಯಕ್ಷೆ ಹಾಗೂ ಡಬ್ಲ್ಯುಎನ್‌ಇಎಸ್‌ ಸಂಚಾಲಕಿ ಡಾ.ಮಂಜುಳಾ ಕೆ‌.ಟಿ. ಅಧ್ಯಕ್ಷೀಯ ಭಾಷಣ ನೀಡಿ, ಭಾಗವಹಿಸುವವರಲ್ಲಿ ಕ್ರೀಡಾತ್ಮಕ ಮನೋಭಾವ ಬೆಳೆಸಲು ಪ್ರೋತ್ಸಾಹಿಸಿದರು ಮತ್ತು ತಮ್ಮ ಪ್ರತಿಭೆ ಪ್ರದರ್ಶಿಸಲು ಈ ವೇದಿಕೆ ಬಳಸುವಂತೆ ಕರೆ ನೀಡಿದರು.

ಕಾಲೇಜಿನ ಆಡಳಿತಾಧಿಕಾರಿ ಪ್ರೊ. ರಾಜಶೇಖರ್ ಹೆಬ್ಬಾರ್, ಡಬ್ಲ್ಯಎನ್‌ಇಎಸ್‌ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್, ಐಕ್ಯುಎಸಿ ಸಂಯೋಜಕ ಡಾ. ಸತೀಶ ಕೆ, ಡಬ್ಲ್ಯುಎನ್‌ಇಎಸ್‌ ಕಾರ್ಯದರ್ಶಿ ಸುರೇಶ್ ಪೈ ಕಾಲೇಜು ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ ಸಿ, ದೈಹಿಕ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಗೇರಾಲ್ಡ್ ಸಂತೋಷ್ ಡಿಸೋಜಾ, ಕಾಲೇಜಿನ ದೈಹಿಕ ನಿರ್ದೇಶಕಿ ರೂಪತಿ ಎಂ, ಸದಸ್ಯರಾದ ಡಾ. ಲೋಕರಾಜ್ ವಿ.ಎಸ್ ಮತ್ತು ಕ್ರೀಡಾ ಕಾರ್ಯದರ್ಶಿ ರಚನಾ ಕೋಟ್ಯಾನ್ ಇದ್ದರು.