ಹನುಮಸಾಗರ: ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣ ಬಳಸಿ ಸ್ವಯಂ ಉದ್ಯೋಗ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಅದರಂತೆ ಹನುಮಸಾಗರ ಸಮೀಪದ ಹನುಮನಾಳ ಗ್ರಾಮದ ಬಸವರಾಜ ನೀರಾವರಿ ಎನ್ನುವರು ವ್ಯಾಟ್ಸ್ ಆ್ಯಪ್ ಮೂಲಕ ಮಾವಿನ ಹಣ್ಣು, ಮಾವಿನ ಉಪ್ಪಿನಕಾಯಿ ಹಾಗೂ ಹುಣಸೆ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಬಸವರಾಜ ವಿವಿಧ ಮಾವಿನ ತೋಟವನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಮನೆಯಲ್ಲೇ ರಾಸಾಯನಿಕ ಬಳಸದೇ ನೈಸರ್ಗಿಕ ವಿಧಾನದ ಮೂಲಕ ಹಣ್ಣಾಗಿಸುತ್ತಿದ್ದಾರೆ.ವಾಟ್ಸಾಪ್ ಮೂಲಕ ಮಾವಿನ ಹಣ್ಣುಗಳ ಫೋಟೋ ಹಾಕಿ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತಿದೆ. ನಂತರ ಗ್ರಾಹಕರು ಫೋನ್ ಮೂಲಕ ಆರ್ಡರ್ ನೀಡಿದಂತೆ 2 ಕೆಜಿ, 5 ಕೆಜಿ ಹಾಗೂ 10ಕೆಜಿ ಬಾಕ್ಸ್ಗಳಲ್ಲಿ ಪ್ಯಾಕ್ ಮಾಡಿ ವಿವಿಧ ಗ್ರಾಮಗಳಿಗೆ ಕಳುಹಿಸಲಾಗುತ್ತಿದೆ. ಈಗಾಗಲೇ ಹದಿನೈದು ಕ್ವಿಂಟಲ್ಗಿಂತ ಹೆಚ್ಚು ಮಾವಿನ ಹಣ್ಣು ಮಾರಾಟ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಗಂಗಾವತಿ, ಸಿಂಧನೂರು, ಕೊಪ್ಪಳ, ಗಜೇಂದ್ರಗಡ ಸೇರಿದಂತೆ ಹನುಮಸಾಗರ ಭಾಗದ ಹಲವಾರು ಗ್ರಾಮಗಳಿಗೆ ನೇರವಾಗಿ ಬಾಕ್ಸ್ ಮೂಲಕ ಹಣ್ಣುಗಳನ್ನು ತಲುಪಿಸುತ್ತಿದ್ದಾರೆ.ಇದರ ಜತೆಗೆ ಮನೆಯಲ್ಲಿ ಪರಿಶುದ್ಧವಾಗಿ ತಯಾರಿಸಲಾದ ಮಾವಿನಕಾಯಿ ಉಪ್ಪಿನಕಾಯಿ ಹಾಗೂ ಹುಣಸೆಹಣ್ಣಿನ ಟೊಕ್ಕುಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ.ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆಜಿ ಮಾವಿನ ಹಣ್ಣಿನ ಬೆಲೆ ₹120ರಿಂದ ₹130 ಇದ್ದರೂ ಎಲ್ಲರಿಗೂ ಉತ್ತಮ ಹಣ್ಣು ತಲುಪಲಿ ಎಂಬ ಉದ್ದೇಶದಿಂದ ಕೇವಲ ₹50ಕ್ಕೆ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ದರದಲ್ಲಿ ಗುಣಮಟ್ಟದ ಹಣ್ಣು ನೀಡುತ್ತಿರುವುದರಿಂದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇವರ ಸಂಪರ್ಕಿಸಬೇಕಾದ ನಂ 96639 79299.
ನಾನು ಈ ಉದ್ಯೋಗ ಹೆಚ್ಚಿನ ಲಾಭಕ್ಕಾಗಿ ಮಾಡುತ್ತಿಲ್ಲ.ಎಲ್ಲರಿಗೂ ನೈಸರ್ಗಿಕ ಹಣ್ಣು ಸಿಗಬೇಕು ಎಂಬುದು ನನ್ನ ಆಶಯ. ನನ್ನ ಹತ್ತಿರ ಏಳೆಂಟು ಜನರು ಕೆಲಸ ಮಾಡುತ್ತಿದ್ದಾರೆ.ಇದರಿಂದ ಇನ್ನೊಬ್ಬರಿಗೆ ಉದ್ಯೋಗವೂ ಸಿಕ್ಕಂತಾಗಿದೆ. ಅಲ್ಪಸ್ವಲ್ಪ ಲಾಭ ಬಂದರೂ ಸಾಕು ಎಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇನೆ ಎಂದು ಹನುಮನಾಳ ಗ್ರಾಮಸ್ಥ ಬಸವರಾಜ ನೀರಾವರಿ ತಿಳಿಸಿದ್ದಾರೆ.
ಬಸವರಾಜ ನೀರಾವರಿ ಅವರ ಹಣ್ಣುಗಳು ತಿನ್ನಲು ರುಚಿಕರವಾಗಿವೆ. ಮಾರುಕಟ್ಟೆಯಲ್ಲಿ ರಾಸಾಯನಿಕದಿಂದ ಎರಡೇ ದಿನದಲ್ಲಿ ಹಣ್ಣು ಮಾಡುವುದರಿಂದ ಆರೋಗ್ಯಕ್ಕೆ ಹಾನಿಕರವಾಗಿದೆ ಎಂದು ಡಾ. ಶಂಕರ ಹುಲಮನಿ ತಿಳಿಸಿದ್ದಾರೆ.